ಕಥುವಾ ಪ್ರಕರಣದ ಬಗ್ಗೆ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು?
ಹೊಸದಿಲ್ಲಿ,ಎ.12: ಕಥುವಾದಲ್ಲಿ ಎಂಟರ ಹರೆಯದ ಬಾಲಕಿ ಆಸಿಫಾಳ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಕೃತ್ಯಕ್ಕೆ ನಾಗರಿಕ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿಯ ಗಣ್ಯರು ಸಾಮಾಜಿಕ ಮಾಧ್ಯಮ ಗಳಲ್ಲಿ ಸಿಟ್ಟನ್ನು ಹೊರಹಾಕಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಆಸಿಫಾಳ ದುರಂತವನ್ನು ಹೇಳಲು ಶಬ್ದಗಳೇ ಸಿಗುತ್ತಿಲ್ಲ ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟಿಸಿದ್ದಾರೆ.
ಹೆಚ್ಚುತ್ತಿರುವ ಆಕ್ರೋಶಗಳ ನಡುವೆಯೇ ಮೊದಲ ಬಾರಿಗೆ ಸರಕಾರದ ಧ್ವನಿಯೂ ಕೇಳಿಬಂದಿದೆ. ‘ಆಸಿಫಾಳ ವಿಷಯದಲ್ಲಿ ಮನುಷ್ಯರಾಗಿ ನಾವು ವೈಫಲ್ಯವನ್ನು ಕಂಡಿದ್ದೇವೆ. ಆದರೆ ಆಕೆಗೆ ಖಂಡಿತ ನ್ಯಾಯ ಸಿಗಲಿದೆ’ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.
ಹಿಂದೂಗಳ ಪ್ರಾಬಲ್ಯವಿರುವ ಕಥುವಾದಿಂದ ಆಸಿಫಾಳ ಅಲೆಮಾರಿ ಬಕೆರವಾಲ್ ಸಮುದಾಯವನ್ನು ಓಡಿಸಲು ಬಯಸಿದ್ದ ದುಷ್ಕರ್ಮಿಗಳು ಆಕೆಯ ವಿರುದ್ಧ ಬರ್ಬರ ಕೃತ್ಯವನ್ನೆಸಗಿದ್ದರು. ಘಟನೆಯ ನಂತರ ಬಾಲಕಿಯ ಕುಟುಂಬ ತನ್ನ ಒಂದು ಕೋಣೆಯ ಮನೆಯನ್ನು ತೊರೆದಿದೆ.
ಅಲೆಮಾರಿ ಮುಸ್ಲಿಂ ಬುಡಕಟ್ಟು ಸಮುದಾಯವಾಗಿರುವ ಬಕೆರವಾಲ್ಗಳು ಪೀರ್ಪಂಜಾಲ್ ಪರ್ವತ ಪ್ರದೇಶದಲ್ಲಿ ಹಾಡಿಗಳಲ್ಲಿ ವಾಸವಿದ್ದು, ಜಾನುವಾರುಗಳನ್ನು ಮೇಯಿಸುವ ಮೂಲಕ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ.