ಹರಿಹರ: ರಸ್ತೆ ಅಪಘಾತ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ
![ಹರಿಹರ: ರಸ್ತೆ ಅಪಘಾತ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ ಹರಿಹರ: ರಸ್ತೆ ಅಪಘಾತ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ](https://www.varthabharati.in/sites/default/files/images/articles/2018/04/12/images.jpg)
ಹರಿಹರ,ಎ.12: ರಸ್ತೆ ಅಪಘಾತದ ಪ್ರಕರಣವೊಂದರಲ್ಲಿ ಇಲ್ಲಿನ ಜೆಎಂಎಫ್ ನ್ಯಾಯಾಲಯ ಆರೋಪಿ ಕೆಎಸ್ಆರ್ಟಿಸಿ ಬಸ್ ಚಾಲಕ ಸಂಗಪ್ಪ ಅಬ್ಬಿಗೇರಿ ತಪ್ಪಿತಸ್ಥನೆಂದು ಪರಿಗಣಿಸಿ 5 ತಿಂಗಳು ಜೈಲುಶಿಕ್ಷೆ ವಿಧಿಸಿದೆ.
2014ರ ಸೆಪ್ಟಂಬರ್ 13 ರಂದು ಹರಪನಹಳ್ಳಿಯಿಂದ ಹರಿಹರದ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ಗೆ ಮಾರ್ಗ ಮಧ್ಯೆ ಮಂದಾರ ಹಳ್ಳದ ಬಳಿ ಎದುರಿಗೆ ಬಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಟ್ರ್ಯಾಕ್ಟರ್ ಇಂಜಿನ್ ತುಂಡಾಗಿ, ಚಾಲಕನ ಎಡಗಾಲಿನ ಮಂಡಿ ಮತ್ತು ಸೊಂಟಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.
ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ ಚಾಲಕ ಸಂಗಪ್ಪ ಅತಿವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷದಿಂದ ಬಸ್ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಸುಮಲತಾ ಬೆಣ್ಣೆಕಲ್ 5 ತಿಂಗಳು ಸೆರೆವಾಸ, ತಪ್ಪಿದ್ದಲ್ಲಿ 2,500 ರು. ದಂಡ ವಿಧಿಸಿ ಆದೇಶಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಶಂಷೀರ್ ಅಲಿ ಖಾನ್ ವಾದ ಮಂಡಿಸಿದ್ದರು.
Next Story