ಎ.14: ಉಡುಪಿಯಲ್ಲಿ ನಿತ್ಯ ಆನಂದೋತ್ಸವ
ಉಡುಪಿ, ಎ.12: ನಗರದಲ್ಲಿ ಕಳೆದ ಎರಡು ದಶಕಗಳಿಂದ ಯಾವುದೇ ಫಲಾಪೇಕ್ಷೆಗಳಿಲ್ಲದೇ ದೀನದಲಿತರ, ಬಡವರ, ಶ್ರಮಿಕರ, ನಿರಾಶ್ರಿತರ, ಶೋಷಿತರ, ರೋಗಪೀಡಿತರ ಸೇವೆ ಮಾಡುತ್ತಿರುವ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಿತ್ಯಾನಂದ ಒಳಕಾಡು ಅಭಿಮಾನಿ ಬಳಗದ ಮೂಲಕ ‘ನಿತ್ಯಾ ಆನಂದೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಶ್ರೀಧರ ದೇವಾಡಿಗ ಈ ವಿಷಯ ತಿಳಿಸಿದರು. ಎ.14ರ ಶನಿವಾರ ಅಪರಾಹ್ನ 3:30ರಿಂದ ಉಡುಪಿ ಮಿಷನ್ ಕಾಂಪೌಂಡ್ನ ಜಗನ್ನಾಥ ಸಭಾಭವನದಲ್ಲಿ ವೈವಿಧ್ಯಮಯ, ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ನಿತ್ಯಾರ 60 ಸಂಭ್ರಮವನ್ನು ಆಚರಿಸಲಾಗುವುದು ಎಂದರು.
ಈ ಸಂಬಂಧ ಅಸಹಾಯಕರಿಗೆ ಸಹಾಯಧನ ವಿತರಣೆ, ಸೀಡ್ಬಾಲ್ ವಿತರಣೆ, 60 ಸಸಿಗಳ ವಿತರಣೆ, ಪುಸ್ತಕ ಬಿಡುಗಡೆ, ಒಳಕಾಡು ಅವರ ಸಾಧನೆಗಳ ಸಾಕ್ಷಚಿತ್ರ, ಸಿಡಿ ಬಿಡುಗಡೆ ನಡೆಯಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಸದಾನಂದ ಕಾಂಚನ್, ಆಸೀಫ್ ಹಾಗೂ ತಾರನಾಥ ಮೇಸ್ತ ಶಿರೂರು ಉಪಸ್ಥಿತರಿದ್ದರು.