ಜಮ್ಮು ಬಾಲಕಿಯ ಅತ್ಯಾಚಾರ-ಹತ್ಯೆಗೆ ಖಂಡನೆ: ಪುತ್ತೂರು ಸಿಎಫ್ಐಯಿಂದ ಜಾಗೃತಿ ಅಭಿಯಾನ

ಪುತ್ತೂರು, ಎ.13: ಜಮ್ಮು-ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿ ಆಶಿಫಾ ಬಾನುವಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್ಐ)ದ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಶುಕ್ರವಾರ ಪುತ್ತೂರು ಜುಮಾ ಮಸೀದಿ ಬಳಿ ಜಾಗೃತಿ ಅಭಿಯಾನ ನಡೆಯಿತು.
ಸಿಎಫ್ಐ ತಾಲೂಕು ಅಧ್ಯಕ್ಷ ಸವಾದ್ ಕಲ್ಲರ್ಪೆ ಮಾತನಾಡಿ, ಈ ಪ್ರಕರಣದ ಐದು ಆರೋಪಿಗಳಲ್ಲಿ ನಾಲ್ವರು ಪೊಲೀಸರಾಗಿದ್ದು ಇಲ್ಲಿ ರಕ್ಷಣೆ ಒದಗಿಸಬೇಕಾದವರು ಈ ರೀತಿಯ ನೀಚ ಕೃತ್ಯ ಎಸಗಿದ್ದು ಕಾನೂನು ವ್ಯವಸ್ಥೆಗೆ ಅವಮಾನ. ಅದೇ ರೀತಿ ಬಂಧಿಸಲ್ಪಟ್ಟ ಆರೋಪಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಧರಣಿ ಮಾಡುತ್ತಿರುವುದು ಇಲ್ಲಿ ನ್ಯಾಯವನ್ನು ಒದಗಿಸಬೇಕಾದಂತಹ ಬಾರ್ ಅಸೋಸಿಯೇಶನ್ ಆಗಿದೆ. ಇದು ಈ ದೇಶದ ದೊಡ್ಡ ದುರಂತವೇ ಸರಿ ಎಂದರು.
ಇದೇ ಸಮಯದಲ್ಲಿ ಸವಣೂರು ಮಸೀದಿಯ ಮುಂಭಾಗದಲ್ಲೂ ಜಾಗೃತಿ ಅಭಿಯಾನ ನಡೆಯಿತು. ಸಿಎಫ್ಐ ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಅಂಕತ್ತಡ್ಕ, ಸಮಿತಿಯ ಸದಸ್ಯರಾದ ಶಿಹಾಬ್ ಬೀಟಿಗೆ, ಸಂಶೀರ್ ಸವಣೂರು ಉಪಸ್ಥಿತರಿದ್ದರು.