ಆಸಿಫಾ ಬಾನು ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ ದ.ಕ. ಜಿಲ್ಲಾ ಸಿಎಫ್ಐ ಪ್ರತಿಭಟನೆ

ಮಂಗಳೂರು, ಎ.13: ಜಮ್ಮು ಕಾಶ್ಮೀರದ 8 ವರ್ಷದ ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಸುರತ್ಕಲ್ ಕೇಂದ್ರಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಎಸ್ಡಿಎಂ ಕಾಲೇಜು ಬಳಿ, ಬಾವುಟಗುಡ್ಡೆಯ ಈದ್ಗಾ ಮಸ್ಜಿದ್, ಹಂಪನಕಟ್ಟೆಯ ನೂರ್ ಮಸ್ಜಿದ್, ನೆಲ್ಲಿಕಾಯಿ ರಸ್ತೆಯ ಇಬ್ರಾಹೀಂ ಖಲೀಲ್ ಮಸ್ಜಿದ್ ಬಳಿ ಸಿಎಫ್ಐ ಕಾರ್ಯಕರ್ತರು ನ್ಯಾಯಕ್ಕಾಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಎಫ್ಐ ರಾಜ್ಯಾಧ್ಯಕ್ಷ ಮುಹಮ್ಮದ್ ತಫ್ಸೀರ್ ಮಾತನಾಡಿ ಮೋದಿಯ ಬೇಟಿ ಬಚಾವೋ ಕಾರ್ಯಕ್ರಮದಲ್ಲಿ ನಾವು ಈ ದೇಶದಲ್ಲಿ ಬಾಲಕಿಯರನ್ನು ಅತ್ಯಾಚಾರದ ಮೂಲಕ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಅದೆಷ್ಟೋ ಪ್ರಕರಣಗಳಲ್ಲಿ ಮೋದಿ ಮತ್ತು ಯೋಗಿ ಸರಕಾರದ ಸಚಿವರು ಮತ್ತು ಶಾಸಕರು ಆರೋಪಿಗಳ ಪರವಾಗಿ ನಿಂತಿರುವುದು ಕಂಡು ಬರುತ್ತಿದೆ. ಇದು ದೇಶವನ್ನು ನಾಚುವಂತೆ ಮಾಡಿದೆ. ಸರಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿ ಕಾಶ್ಮೀರದ ಆಸಿಫಾಳ ಪ್ರಕರಣವು ಕೇವಲ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯಲ್ಲದೆ ದೇಶದ ಪ್ರಜಾಪ್ರಭುತ್ವ ಹಾಗೂ ಮಾನವೀಯ ಮೌಲ್ಯಗಳ ಬರ್ಬರ ಹತ್ಯೆಯಾಗಿದೆ. ಮೋದಿಜಿ ಮನ್ ಕಿ ಬಾತ್ನಲ್ಲಿ ಸಮಯ ಕಳೆಯುವ ಬದಲು ಬಾಲಕಿಯರನ್ನು ರಕ್ಷಿಸುವ ಕೆಲಸವನ್ನು ಮಾಡಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಇಮ್ರಾನ್ ಪಿಜೆ, ಕಾರ್ಯದರ್ಶಿಗಳಾದ ಮುಹಮ್ಮದ್ ಸಾದಿಕ್ ಪುತ್ತೂರು, ನಿಝಾಮ್, ಮುಫೀದಾ, ಉಪಾಧ್ಯಕ್ಷರಾದ ಫಹದ್ ಮತ್ತು ಸದಸ್ಯರಾದ ನೌಫಲ್, ತಾಜುದೀನ್, ತಾಲೂಕಾಧ್ಯಕ್ಷ ಶಾಹುಲ್ ಉಪಸ್ಥಿತರಿದ್ದರು.