ದುಪ್ಪಟ್ಟು ಬಾಡಿಗೆ ವಸೂಲಿ: ಪ್ರೀಪೇಯ್ಡ ಆಟೊ ರಿಕ್ಷಾ ಚಾಲಕರ ವಿರುದ್ಧ ದೂರು
ಪೊಲೀಸ್ ಫೋನ್ ಇನ್ ಕಾರ್ಯಕ್ರಮ
ಮಂಗಳೂರು, ಎ.13: ಕಂಕನಾಡಿ ರೈಲ್ವೆ ನಿಲ್ದಾಣದಿಂದ ಪ್ರೀಪೇಯ್ಡಾ ಆಟೊ ರಿಕ್ಷಾಗಳು ಹಗಲು ಹೊತ್ತಿನಲ್ಲಿ ದುಪ್ಪಟ್ಟು ಬಾಡಿಗೆ ದರ ವಸೂಲಿ ಮಾಡುತ್ತಿರುವ ಬಗ್ಗೆ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರು ದೂರಿದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬರು, ನಾನು ಇತ್ತೀಚೆಗೆ ರೈಲಿನಲ್ಲಿ ಇಳಿದು ಕಂಕನಾಡಿ ರೈಲು ನಿಲ್ದಾಣದಿಂದ ಪಂಜಿಮೊಗರಿಗೆ ಪ್ರೀಪೇಯ್ಡಾ ಆಟೋವನ್ನು ಗೊತ್ತುಪಡಿಸಿದ್ದೆ. ಆದರೆ ವಾಪಸ್ ಬರುವಾಗ ಬಾಡಿಗೆ ಇಲ್ಲ ಎಂಬ ಕಾರಣಕ್ಕೆ ಆಟೋ ಚಾಲಕ ಒಂದೂವರೆ ಪಟ್ಟು ಬಾಡಿಗೆ ನೀಡುವಂತೆ ಒತ್ತಾಯಿಸಿದ. ಅದರಂತೆ ನಾನು ದುಬಾರಿ ಬಾಡಿಗೆ ನೀಡಿದ್ದೇನೆ. ಬಾಡಿಗೆ ವಸೂಲಿ ಮಾಡಿದ ಸ್ವೀಕೃತಿ ಪತ್ರವೂ ನನ್ನಲ್ಲಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಟಿ.ಆರ್.ಸುರೇಶ್, ವಾಪಸ್ ಬರುವಾಗ ಬಾಡಿಗೆ ಇಲ್ಲ ಎಂದು ಒಂದೂವರೆ ಪಟ್ಟು ಬಾಡಿಗೆ ವಸೂಲಿಗೆ ಅವಕಾಶ ಇಲ್ಲ. ಆಟೋದವರು ನೀಡಿದ ಸ್ವೀಕೃತಿ ಪತ್ರವನ್ನು ಸಲ್ಲಿಸಿದರೆ ಆಟೊ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಮಾರ್ಟ್ ಬಸ್ ನಿಲ್ದಾಣ ಬೇಕು: ರಸ್ತೆ ಸುರಕ್ಷತೆ ಹಾಗೂ ಸ್ಮಾರ್ಟ್ ಸಿಟಿಯ ಬಗ್ಗೆ ಮಾತನಾಡುವವರು ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಸನಬ್ಬ ಅಮ್ಮೆಂಬಳ ಒತ್ತಾಯಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಬಸ್ ನಿಲ್ದಾಣ ಹಾಗೂ ಬಸ್ಬೇ ಇಲ್ಲದೆ ಎಲ್ಲೆಂದರಲ್ಲಿ ಬಸ್ಗಳು ನಿಲ್ಲಿಸುತ್ತವೆ. ನಿಲ್ದಾಣವೇ ಇಲ್ಲದ ಮೇಲೆ ನಿಲ್ಲಿಸುವುದು ಎಲ್ಲಿ? ಪ್ರಯಾಣಿಕರು ಕೂಡ ಬಸ್ಗೆ ಕಾಯಲು ಪರದಾಡುವಂತಾಗಿದೆ. ಇದನ್ನು ಪಾಲಿಕೆಯ ಗಮನಕ್ಕೆ ತಂದರೂ ಕಾರ್ಯಗತಗೊಂಡಿಲ್ಲ. ಜನನಿಬಿಡ ಪ್ರದೇಶಗಳಲ್ಲಿ ವಾಹನಗಳ ವೇಗದ ಸಂಚಾರಕ್ಕೆ ಕಡಿವಾಣ ಹಾಕಲು ರಸ್ತೆಗೆ ಹಂಪ್ಸ್ ಹಾಕಬೇಕು ಎಂದು ಹಸನಬ್ಬ ಆಗ್ರಹಿಸಿದರು.
ತಲಪಾಡಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಇದರಿಂದ ಸರಾಗ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ನಾಗರಿಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಕಮಿಷನರ್ ಟಿ.ಆರ್.ಸುರೇಶ್, ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಸಾಕಷ್ಟು ವಾಹನ ಅಪಘಾತ ಸಂಭವಿಸಿದ ಕಾರಣ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಿಸಿ ಕ್ಯಾಮರಾ ಅಳವಡಿಸಿ: ಕದ್ರಿ ಪಾರ್ಕಿನಲ್ಲಿ ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ಪ್ರೇಮಿಗಳ ಸರಸ ಸಲ್ಲಾಪ ಹೆಚ್ಚುತ್ತಿವೆ. ಇದರಿಂದ ಪಾರ್ಕಿಗೆ ಬರುವ ಮಹಿಳೆಯರಿಗೆ ಹಾಗೂ ಮಕ್ಕಳು ಮುಜುಗರ ಸನ್ನಿವೇಶವನ್ನು ಎದುರಿಸುವಂತಾಗಿದೆ. ಹಾಗಾಗಿ ಪಾರ್ಕಿನಲ್ಲಿ ಸಿಸಿ ಕ್ಯಾಮರಾ ಅಥವಾ ಪ್ರೇಮಿಗಳಿಗೆ ಎಚ್ಚರಿಕೆ ನೀಡುವ ಫಲಕಗಳನ್ನು ಅಳವಡಿಸಬೇಕು. ಕಾವಲು ಸಿಬ್ಬಂದಿಯನ್ನು ನೇಮಿಸಬೇಕು ಎಂದು ನಾಗರಿಕರೊಬ್ಬರು ಒತ್ತಾಯಿಸಿದರು. ನಗರದ ಲೇಡಿಗೋಶನ್ ಆಸ್ಪತ್ರೆಯ ಬಳಿ ನಿತ್ಯವೂ ಕಾಮುಕರ ಉಪಟಳವಿದೆ ಎಂದು ಮಹಿಳೆಯೊಬ್ಬರು ದೂರಿದರು.
ಈ ಎರಡೂ ದೂರಿಗೆ ಸ್ಪಂದಿಸಿದ ಪೊಲೀಸ್ ಆಯುಕ್ತರು ಎರಡೂ ಕಡೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾವುದು ಎಂದು ಸ್ಪಷ್ಟಪಡಿಸಿದರು.
ಪಿವಿಎಸ್ ವೃತ್ತದಿಂದ ಬಂಟ್ಸ್ಹಾಸ್ಟೇಲ್ ವರೆಗೆ ಕಳೆದ ಎರಡು ದಿನಗಳಿಂದ ಮಂಗಳಮುಖಿಯರು ಕಿರುಕುಳ ನೀಡುತ್ತಿದ್ದಾರೆ. ಪಾದಚಾರಿಗಳ ತಲೆಯ ಮೇಲೆ ಕೈ ಇಟ್ಟು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ತಿಳಿಸಿದರು.
ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಸಂಚಾರಿ ಎಸಿಪಿ ಮಂಜುನಾಥ ಶೆಟ್ಟಿ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಉಪಸ್ಥಿತರಿದ್ದರು.