ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ‘ಜಾತಿ ರಾಜಕೀಯ’ದ ಬಿಸಿ !

ಮಂಗಳೂರು, ಎ.13: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಲೇ 8 ವಿಧಾನ ಸಭಾ ಕ್ಷೇತ್ರವನ್ನು ಒಳಗೊಂಡ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ‘ಜಾತಿ ರಾಜಕೀಯ’ದ ಬಿಸಿ ತಟ್ಟಿದೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಜಿಲ್ಲೆಯ ಪ್ರಬಲ ಎರಡು ಜಾತಿಗಳಾದ ಬಿಲ್ಲವ ಮತ್ತು ಬಂಟ ಸಮಾಜದ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಪಕ್ಷಕ್ಕಿಂತಲೂ ತಮ್ಮ ಸಮಾಜದ ಪ್ರತಿನಿಧಿ ಜನಪ್ರತಿನಿಧಿಯಾಗಿ ಮೆರೆಯಲಿ ಎಂದು ಈ ಸಮಾಜದ ಮುಖಂಡರು ಹಂಬಲಿಸುತ್ತಿರುವುದು ಅವರ ಮಾತಿನಿಂದ ವ್ಯಕ್ತವಾಗುತ್ತಿದೆ.
ಜಿಲ್ಲೆಯ 8 ಕ್ಷೇತ್ರದ ಪೈಕಿ ಸುಳ್ಯ ಮೀಸಲು ಆಗಿದೆ. ಅಲ್ಲಿ ಹಾಲಿ ಶಾಸಕ ಎಸ್. ಅಂಗಾರ ಅವರನ್ನೇ ಬಿಜೆಪಿ ಕಣಕ್ಕಿಳಿಸಿದೆ. ಸತತ ಮೂರು ಬಾರಿ ಸೋಲುಂಡಿರುವ ಡಾ. ರಘು ಅವರನ್ನು ಬದಲಿಸಲು ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದ್ದರೂ ಕೂಡಾ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಅನಿವಾರ್ಯವಾಗಿ ಡಾ. ರಘು ಅವರನ್ನೇ ಕಣಕ್ಕಿಳಿಸಲು ಯೋಚಿಸಿದೆ. ಇನ್ನೂ ಪಟ್ಟಿ ಬಿಡುಗಡೆಯಾಗದಿದ್ದರೂ ಕೂಡ ಮೌಖಿಕ ಸೂಚನೆಯ ಮೇರೆಗೆ ಡಾ. ರಘು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಕಣಕ್ಕಿಳಿಯುವ ಸಾಧ್ಯತೆ ನಿಚ್ಛಳವಾಗಿದೆ. ಆದರೂ ಇಲ್ಲಿನ ಪ್ರಭಾವಿ ನಾಯಕ ಹೇಮನಾಥ ಶೆಟ್ಟಿ ಕೂಡ ಟಿಕೆಟ್ಗಾಗಿ ಪ್ರಯತ್ನ ಸಾಗಿಸಿದ್ದಾರೆ. ಬಿಜೆಪಿಯು ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೂ ಬಿಜೆಪಿಯೊಳಗೆ ಟಿಕೆಟ್ಗಾಗಿ ಭಾರೀ ಪೈಪೋಟಿ ಇದೆ.
ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಹಾಲಿ ಶಾಸಕ ವಸಂತ ಬಂಗೇರಾ ಅವರನ್ನೇ ಕಣಕ್ಕಿಳಿಸಲಿದೆ. ಇಲ್ಲಿ ಕೂಡ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಎಂಬುದು ಅಂತಿಮಗೊಂಡಿಲ್ಲ.
ಮೂಡುಬಿದಿರೆಯಲ್ಲಿ ಹಾಲಿ ಶಾಸಕ ಅಭಯಚಂದ್ರ ಜೈನ್ ಸ್ಪರ್ಧೆಗೆ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮಾಜಿ ಮೇಯರ್ ಕವಿತಾ ಸನಿಲ್ ಟಿಕೆಟ್ಗಾಗಿ ಪ್ರಯತ್ನಿಸಿದ್ದರು. ಮಿಥುನ್ ರೈ ಪರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಲಾಬಿ ನಡೆಸಿದ್ದರೆ, ಐವನ್ ಡಿಸೋಜ ಹೊಸದಿಲ್ಲಿ ಮಟ್ಟದಲ್ಲಿ ಪ್ರಯತ್ನ ಸಾಗಿಸಿದ್ದಾರೆ. ತನಗೆ ಟಿಕೆಟ್ ಬೇಡ, ಮಿಥುನ್ಗೆ ನೀಡಿ ಎಂದು ಶಾಸಕ ಅಭಯಚಂದ್ರ ಜೈನ್ರ ಮನವಿಯನ್ನು ತಿರಸ್ಕರಿಸುವ ಹೈಕಮಾಂಡ್ ತಾವು ಸ್ಪರ್ಧಿಸುವುದಿದ್ದರೆ ಸ್ಪರ್ಧಿಸಿ. ಇಲ್ಲದಿದ್ದರೆ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದ ಕಾರಣ ಜೈನ್ ಮತ್ತೆ ಸ್ಪರ್ಧೆಗೆ ಒಲವು ತೋರಿದ್ದಾರೆ. ಆದರೆ, ಐವನ್ ಡಿಸೋಜ ಟಿಕೆಟ್ಗಾಗಿ ಪ್ರಯತ್ನ ಮುಂದುವರಿಸಿದ್ದಾರೆ.
ಅಭಯಚಂದ್ರ ಜೈನ್ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರಿಂದ ನಾನು ಮೂಡುಬಿದಿರೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದೆ. ಆದರೆ, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ‘ಟಿಕೆಟ್ ಇಲ್ಲ’ ಎಂದ ಬಳಿಕ ತಾನು ಪೈಪೋಟಿಯಿಂದ ಹಿಂದೆ ಸರಿದಿದ್ದೇನೆ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.
ಸುಮಾರು 62 ಸಾವಿರ ಬಿಲ್ಲವ ಮತದಾರರನ್ನು ನೆಚ್ಚಿರುವ ಬಿಜೆಪಿಯು ಮೂಡುಬಿದಿರೆಯಲ್ಲಿ ಉಮನಾಥ ಕೋಟ್ಯಾನ್ರನ್ನು ಕಣಕ್ಕಿಳಿಸಲು ಮುಂದಾಗಿದೆ. ಈ ಮಧ್ಯೆ ಜಿಪಂ ಸದಸ್ಯ ಈಶ್ವರ ಕಟೀಲ್ ಕೂಡ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಶಾಸಕ ಮೊಯ್ದಿನ್ ಬಾವರಿಗೆ ಟಿಕೆಟ್ ಖಾತ್ರಿಯಾಗಿದೆ. ಬಿಜೆಪಿಯಿಂದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಸಂಘ ಪರಿವಾರದ ಸತ್ಯಜಿತ್ ಸುರತ್ಕಲ್, ಬಿಜೆಪಿ ಯುವ ಮೋರ್ಚಾದ ಬ್ರಿಜೇಶ್ ಚೌಟರ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಇದೆ. ಮಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ನಿಂದ ಶಾಸಕ ಜೆ.ಆರ್. ಲೋಬೋ ಸ್ಪರ್ಧಿಸಲಿದ್ದಾರೆ. ಇಲ್ಲೂ ಬಿಜೆಪಿಯಿಂದ ವೇದವ್ಯಾಸ ಕಾಮತ್, ಬದ್ರಿನಾಥ ಕಾಮತ್ ಮಧ್ಯೆ ಪೈಪೋಟಿ ಇದೆ. ಈ ಮಧ್ಯೆ ಮಾಜಿ ಬಿಜೆಪಿಗ ಶ್ರೀಕರ ಪ್ರಭು ಮತ್ತು ನಿವೃತ್ತ ಎಸ್ಸೈ ಮದನ್ ನಾಯಕ್ ಕೂಡ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ.
ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸಚಿವ ಯು.ಟಿ.ಖಾದರ್ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಬಂಟ ಸಮಾಜದ ಸಂತೋಷ್ ಕುಮಾರ್ ಶೆಟ್ಟಿ ಮತ್ತು ಬಿಲ್ಲವ ಸಮಾಜದ ಸತೀಶ್ ಕುಂಪಲ ಅವರ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಇದ್ದು, ಬಿಲ್ಲವರಿಗೆ ಟಿಕೆಟ್ ನೀಡಬೇಕೋ, ಬಂಟ ಸಮುದಾಯಕ್ಕೆ ನೀಡಬೇಕೋ ಎಂಬ ಗೊಂದಲದಲ್ಲಿ ಬಿಜೆಪಿ ಇದೆ.
ಬಂಟ್ವಾಳ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸಚಿವ ರಮಾನಾಥ ರೈ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಬಂಟ ಸಮಾಜದ ರಾಜೇಶ್ ನಾಕ್ ಉಳೆಪಾಡಿಗುತ್ತು ಸ್ಪರ್ಧಿಸುವುದು ಖಚಿತವಾಗಿದೆ. ಬಿಲ್ಲವರು ಇಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬಿಲ್ಲವರ ಮತ ಸೆಳೆಯಲು ರೈಗೆ ಸಡ್ಡು ಹೊಡೆದು ಬಿಜೆಪಿ ಸೇರಿದ ಹರಿಕೃಷ್ಣ ಬಂಟ್ವಾಳ್ರಿಗೆ ಟಿಕೆಟ್ ಸಿಕ್ಕಿದರೂ ಅಚ್ಚರಿ ಇಲ್ಲ. ಈ ಮಧ್ಯೆ ಮುಸ್ಲಿಮರೂ ಈ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಕಾರಣ ಎಸ್ಡಿಪಿಐ ಪಕ್ಷವು ರಿಯಾಝ್ ಫರಂಗಿಪೇಟೆ ಅವರನ್ನು ಈಗಾಗಲೆ ಕಣಕ್ಕಿಳಿಸಿದೆ.
ಜಿಲ್ಲೆಯ 1 ಮೀಸಲು ಕ್ಷೇತ್ರ ಹೊರತುಪಡಿಸಿ 7 ಕ್ಷೇತ್ರದಲ್ಲಿ ಬಿಲ್ಲವ, ಬಂಟರು, ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ಕಳೆದ ಬಾರಿ ಬಂಟ ಸಮಾಜದ ಇಬ್ಬರಿಗೆ, ಮುಸ್ಲಿಮ್ ಸಮಾಜದ ಇಬ್ಬರಿಗೆ, ಬಿಲ್ಲವ ಸಮಾಜದ ಒಬ್ಬರಿಗೆ ಟಿಕೆಟ್ ನೀಡಿತ್ತು. ಈ ಬಾರಿ ಕೂಡ ಅದನ್ನೇ ಪುನರಾವರ್ತನೆ ಮಾಡುವ ಸಾಧ್ಯತೆ ಇದೆ. ಅಂದರೆ ಜಿಲ್ಲೆಯಲ್ಲಿ ಸುಮಾರು 4.25 ಲಕ್ಷ ಬಿಲ್ಲವ ಮತದಾರರಿದ್ದರೂ ಕೂಡ ಕೇವಲ ಒಬ್ಬರಿಗೆ ಮಾತ್ರ ಟಿಕೆಟ್ ನೀಡುವುದು ನಿಚ್ಛಳವಾಗಿದ್ದು, ಈ ಬಗ್ಗೆ ಬಿಲ್ಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಸಲ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಬಿಲ್ಲವರಿಗೆ ಅನ್ಯಾಯ ಆಗಿತ್ತು. ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ಅಥವಾ ನೇಮಕದ ಸಂದರ್ಭ ಬಿಲ್ಲವರಿಗೆ ಅವಕಾಶ ಕಲ್ಪಿಸಬಹುದಿತ್ತು. ಆವಾಗಲೂ ಮಾಡದೆ ಬಂಟ ಮತ್ತು ಕ್ರೈಸ್ತ ಸಮುದಾಯಕ್ಕೆ ಮಣೆ ಹಾಕಲಾಯಿತು. ಇದು ಕಾಂಗ್ರೆಸ್ಗಾಗಿ ದುಡಿದ ಬಿಲ್ಲವ ಕಾರ್ಯಕರ್ತರಿಗೆ ಪಕ್ಷದ ನಾಯಕರು ಮಾಡುವ ಅನ್ಯಾಯವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಲ್ಲವ ನಾಯಕಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಡಿಸಿಸಿ ಅಧ್ಯಕ್ಷರ ವಿರುದ್ಧ ಅಸಮಾಧಾನ: ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ವಿರುದ್ಧವೂ ಕಾಂಗ್ರೆಸ್ ಪಕ್ಷದಲ್ಲಿರುವ ಬಿಲ್ಲವ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿ ದ್ದಾರೆ. ಬಿಲ್ಲವ ಸಮಾಜದ ಹಿರಿಯ ಮುಖಂಡ ಜನಾರ್ದನ ಪೂಜಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನಿರಂತರ ಅವಮಾನಿಸುತ್ತಿದ್ದು, ಅದರ ವಿರುದ್ಧ ಹರೀಶ್ ಕುಮಾರ್ ಧ್ವನಿ ಎತ್ತುತ್ತಿಲ್ಲ. ಬದಲಾಗಿ ತನಗೊಂದು ಸ್ಥಾನ ಸಿಕ್ಕಿದ್ದೇ ದೊಡ್ಡದು ಎಂಬಂತೆ ವರ್ತಿಸಿ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಾತಿನಿಧ್ಯ ಸಿಗಲಿ: ಪಕ್ಷ ಯಾವುದಾದರೂ ಪರವಾಗಿಲ್ಲ-ಪ್ರಾತಿನಿಧ್ಯ ಸಿಗಲಿ ಎಂಬುದು ಬಿಲ್ಲವ ಮತ್ತು ಬಂಟ ಸಮಾಜದ ನಾಯಕರ ಅಭಿಮತವಾಗಿದೆ. ಎರಡೂ ಸಮಾಜದ ನಾಯಕರು, ಕಾರ್ಯಕರ್ತರು ಪ್ರಮುಖ ಎರಡು ಪಕ್ಷಗಳಲ್ಲಿ ತೊಡಗಿಸಿಕೊಂಡಿದ್ದು, ಇವರಿಗೆ ಪಕ್ಷಕ್ಕಿಂತಲೂ ‘ಜಾತಿ’ ಮುಖ್ಯವಾಗಿದೆ. ಎರಡೂ ಪಕ್ಷದೊಳಗಿನ ಜಾತಿ ಮುಖಂಡರು ಪಕ್ಷಾತೀತವಾಗಿ ತಮ್ಮ ಸಮಾಜದ ಮುಖಂಡರಿಗೆ ಟಿಕೆಟ್ ಸಿಗಲಿ ಎಂದು ಅಪೇಕ್ಷಿಸುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಗೆ ಟಿಕೆಟ್ ಹಂಚಿಕೆಯ ಬಿಸಿ ತಾಗಿದೆ.