ಮೈಸೂರು: 'ಪ್ರಜಾಸತ್ತೆಯ ಉಳಿವಿಗಾಗಿ ಮತದಾನ' ಅಭಿಯಾನಕ್ಕೆ ಚಾಲನೆ
![ಮೈಸೂರು: ಪ್ರಜಾಸತ್ತೆಯ ಉಳಿವಿಗಾಗಿ ಮತದಾನ ಅಭಿಯಾನಕ್ಕೆ ಚಾಲನೆ ಮೈಸೂರು: ಪ್ರಜಾಸತ್ತೆಯ ಉಳಿವಿಗಾಗಿ ಮತದಾನ ಅಭಿಯಾನಕ್ಕೆ ಚಾಲನೆ](https://www.varthabharati.in/sites/default/files/images/articles/2018/04/13/Election Photos.jpg)
ಮೈಸೂರು,ಎ.13: ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವ ಪ್ರಗತಿಪರ ಚಿಂತಕರ ಸಂಘದ ವತಿಯಿಂದ ಶುಕ್ರವಾರ ನಗರದ ಪುರಭವನದ ಮುಂಭಾಗವಿರುವ ಹೊಸ ಅಂಬೇಡ್ಕರ್ ಪ್ರತಿಮೆ ಎದುರು 'ಪ್ರಜಾಸತ್ತೆಯ ಉಳಿವಿಗಾಗಿ ಮತದಾನ' ಎಂಬ ಘೋಷವಾಕ್ಯದೊಂದಿಗೆ ಮತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ.ಬಸವರಾಜು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಮತಜಾಗೃತಿ ಕುರಿತಾದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಕರಪತ್ರದಲ್ಲಿ ಮತದಾರರಾಗಿ ನಮಗೆ ಇರಬೇಕಾದ ಕಾಳಜಿಗಳೇನೆಂಬುದನ್ನು ಸೂಚಿಸಲಾಗಿದೆ. '18 ವರ್ಷ ದಾಟಿದವರನ್ನು ಪ್ರೌಢರೆಂದು ಗುರುತಿಸಿ ಮತದಾನದ ಹಕ್ಕನ್ನು ನೀಡಲಾಗಿದೆ. ಹಾಗಾಗಿ ಮತದಾನವು ಪ್ರೌಢಿಮೆಯಿಂದ ಕೂಡಿರಲಿ. ಮತದಾನವು ಪವಿತ್ರವಾದದು ಹಾಗಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ ಸ್ವತಂತ್ರವಾಗಿ ನಿರ್ಭೀತಿಯಿಂದ ಮತ ಚಲಾಯಿಸೋಣ. ನಾವು ಆಯ್ಕೆ ಮಾಡುವ ಪ್ರತಿನಿಧಿಯ ಜಾತಿ, ಭಾಷೆ, ಧರ್ಮ, ಸ್ಥಳ, ಪಕ್ಷ ಇವುಗಳಿಗೆ ಮಹತ್ವ ನೀಡದೆ ಆತನ ಜನಪರ ಕಾಳಜಿ ಹಾಗೂ ಉತ್ತಮ ಚಾರಿತ್ರ್ಯಕ್ಕೆ ಆದ್ಯತೆಕೊಟ್ಟು ಮತ ನೀಡೋಣ. ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಭಾರತ ಸಂವಿಧಾನದ ಮೌಲ್ಯಗಳನ್ನು ಗೌರವಿಸುವ ಹಾಗೂ ಜಾರಿಗೆ ತರುವ ಬದ್ಧತೆಯುಳ್ಳ ಪ್ರಾಮಾಣಿಕ ಅಭ್ಯರ್ಥಿಗೆ ಮತ ಚಲಾಯಿಸೋಣ. ಭ್ರಷ್ಟತೆ, ಜಾತೀಯತೆ, ಕೋಮುವಾದ, ಅಪರಾಧ, ಲಿಂಗತಾರತಮ್ಯ, ಅಸ್ಪೃಶ್ಯತೆ ಮುಂತಾದ ಮೌಢ್ಯ ಅಸಮಾನತೆಗಳನ್ನು ಆಚರಿಸದ ಅಭ್ಯರ್ಥಿಯ ಆಯ್ಕೆ ನಮ್ಮದಾಗಲಿ. ಭಾರತವನ್ನು ಸರ್ವ ಜನಾಂಗದ ಶಾಂತಿಯ ರಾಷ್ಟ್ರವನ್ನಾಗಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದಿದೆ.
ಈ ಸಂದರ್ಭದಲ್ಲಿ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್, ಮಹಾರಾಜ ಕಾಲೇಜು ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್.ಯಶೋಧ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ.ಲೋಲಾಕ್ಷಿ, ಸಂಘದ ಗೌರವಾಧ್ಯಕ್ಷ ಡಾ.ಚಂದ್ರಗುಪ್ತ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಡೆದೊರೆ ಮಹದೇವಯ್ಯ ಸೇರಿದಂತೆ ಹಲವರು ಹಾಜರಿದ್ದರು.