ಅಸಮರ್ಪಕ ನಾಡ್ಪಾಲು ಕಾಸನಮಕ್ಕಿ ಒಳಬೈಲು ರಸ್ತೆ ಕಾಮಗಾರಿ: ಗ್ರಾಮಸ್ಥರ ಆಕ್ರೋಶ; ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಲು ಆಗ್ರಹ

ಹೆಬ್ರಿ, ಎ.14: ತಾಲೂಕಿನ ನಾಡ್ಪಾಲು ಗ್ರಾಮದ ಕಾಸನಮಕ್ಕಿ ಮುರ್ಸೆ ಒಳಬೈಲು ರಸ್ತೆಯ ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಿರುವುದರಿಂದ ರಸ್ತೆ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿರುವುದಾಗಿ ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ಸಮಯದ ಹಿಂದೆ ನಾಡ್ಪಾಲು ಗ್ರಾಮದ ವಿವಿಧ ರಸ್ತೆಗಳ ಕಾಮಗಾರಿಗೆ 90 ಲಕ್ಷ ರೂ. ಮಂಜೂರುಗೊಂಡಿದೆ ಎಂದು ಹೇಳಿ ಜನಪ್ರತಿನಿಧಿ ಗಳು ಗುದ್ದಲಿ ಪೂಜೆ ನೆರವೇರಿಸಿದ್ದರು. ಬಳಿಕ 200 ಮೀ.ನಷ್ಟು ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿತ್ತು. ಕಾಂಕ್ರಿಟ್ ರಸ್ತೆ ಮಾಡಲು ಉಳಿದ 300 ಮೀ. ನಷ್ಟು ದೂರದ ಮಣ್ಣಿನ ರಸ್ತೆಯನ್ನು ಅಗೆದು ಹಾಕಿ 5 ತಿಂಗಳು ಕಳೆದರೂ ಕಾಮಗಾರಿ ನಡೆಯುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.
ಈ ಕಾಮಗಾರಿಗೆ ಗುತ್ತಿಗೆದಾರರು ಯಾರು ಎಂಬುದು ತಿಳಿಯುತ್ತಿಲ್ಲ. ರಸ್ತೆಯನ್ನು ಗುಂಡಿ ಮಾಡಿ ಮಣ್ಣು ತೆಗೆದಿದ್ದರಿಂದ ರಸ್ತೆಯುದ್ದಕ್ಕೂ ನೀರು ನಿಂತು ಸಂಚರಿಸಲು ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರಾದ ಒಳಬೈಲು ಅಣ್ಣಯ್ಯ ಶೆಟ್ಟಿ ದೂರಿದ್ದಾರೆ.
ಮೊದಲಿನ ಮಣ್ಣಿನ ರಸ್ತೆಯೇ ಸರಿಯಿತ್ತು. ಈಗ ನಡೆದುಕೊಂಡು ಹೋಗಲೂ ಆಗುತ್ತಿಲ್ಲ. ಬೈಕ್, ರಿಕ್ಷಾದವರು ಬರುತ್ತಿಲ್ಲ. ಮಹಿಳೆಯರು ಮತ್ತು ಮಕ್ಕಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ಮಹಿಳೆಯರು ಆಕ್ರೊೀಶ ವ್ಯಕ್ತಪಡಿಸಿದರು.
ಮೊದಲಿನ ಮಣ್ಣಿನ ರಸ್ತೆಯೇ ಸರಿಯಿತ್ತು. ಈಗ ನಡೆದುಕೊಂಡು ಹೋಗಲೂ ಆಗುತ್ತಿಲ್ಲ. ಬೈಕ್, ರಿಕ್ಷಾದವರು ಬರುತ್ತಿಲ್ಲ. ಮಹಿಳೆಯರು ಮತ್ತು ಮಕ್ಕಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ‘ನಾನು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ. ಗ್ರಾಮಸ್ಥರು ರಸ್ತೆ ಸಮಸ್ಯೆ ಬಗ್ಗೆ ನನ್ನಲ್ಲಿ ಕೇಳುತ್ತಾರೆ. ಜಿಲ್ಲಾಧಿಕಾರಿಗಳ ಸಹಿತ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಈ ರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕು.’ ಎಂದು ನಾಡ್ಪಾಲು ಗ್ರಾಪಂ ಸದಸ್ಯ ಕಾಸನಮಕ್ಕಿ ವಿಶುಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.