ಎ. 21ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ರಮಾನಾಥ ರೈ ನಾಮಪತ್ರ ಸಲ್ಲಿಕೆ

ಬಂಟ್ವಾಳ, ಎ. 14: "ಸುಳ್ಳು ಹೇಳಿ ಪಕ್ಷ ಕಟ್ಟುವ ಅಗತ್ಯ ನಮಗಿಲ್ಲ. ಸಾಮರಸ್ಯಕ್ಕೆ ಒತ್ತು ನೀಡಿದ್ದೇನೆ. ಕೆಲವರಿಗೆ ಅದು ಅಪಥ್ಯವಾಗಿರಬಹುದು" ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.
ಶನಿವಾರ ಬಿ.ಸಿ.ರೋಡಿನ ಪ್ರಚಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ, ತಾನು ಸಾವಿರ ಕೋಟಿಗೂ ಮಿಕ್ಕಿ ಅನುದಾನವನ್ನು ಕ್ಷೇತ್ರದ ಅಭ್ಯುದಯಕ್ಕಾಗಿ ತರಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದು, ಇದನ್ನು ಸಹಿಸದೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಪಕ್ಷವೊಂದರಲ್ಲಿ ಪೇಜ್ ಪ್ರಮುಖ್ ಎಂಬ ನೇಮಕವಾಗಿದೆ. ನಮ್ಮಲ್ಲಿ ಪೇಜ್ಗೊಬ್ಬ ಸತ್ಯವಾದಿ ಕಾರ್ಯಕರ್ತರಿದ್ದಾರೆ. ಕೆಲವರು ಮನೆಮನೆಗೆ ಸುಳ್ಳಿನ ಪ್ರಚಾರವನ್ನು ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವುದರ ವಿರುದ್ಧ ಸತ್ಯವಾದಿಯಾಗಿ, ಅಭಿವೃದ್ಧಿಗಾಗಿ ಸಾಮಾಜಿಕ ಸಾಮರಸ್ಯಕ್ಕಾಗಿ ಮತ ನೀಡಿ ಎಂದರು.
ಸಚಿವ ಯು.ಟಿ.ಖಾದರ್ ಮಾತನಾಡಿ, ಇದು ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆಯಾಗಿದೆ. ಅಪಪ್ರಚಾರ ಮಾಡುವವರು ವಿಭಜನವಾದಿಗಳು. ರಮಾನಾಥ ರೈ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಅಪಪ್ರಚಾರ ಮಾಡುವವರು ತಮ್ಮ ಅವಧಿಯಲ್ಲಿ ಯಾಕೆ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಎ. 21ರಂದು ನಾಮಪತ್ರ ಸಲ್ಲಿಕೆ: ಎ.21ರಂದು ತಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸುವುದಾಗಿ ಹೇಳಿದ ರಮಾನಾಥ ರೈ, ಶಕ್ತಿಮೀರಿ ಜನತೆಗೆ ಕೊಟ್ಟ ಭರವಸೆ ಈಡೇರಿಸಿದ್ದೇನೆ. ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.