ಕಲ್ಲಡ್ಕ ಗಲಭೆಯಲ್ಲಿ ಕಾಂಗ್ರೆಸ್ ಅಮಾಯಕ ಮುಸ್ಲಿಮರ ಪರ ಧ್ವನಿ ಎತ್ತಲಿಲ್ಲ: ರಿಯಾಝ್
.jpeg)
ಬಂಟ್ವಾಳ, ಎ. 14: ಕಲ್ಲಡ್ಕ ಗಲಭೆ ಸಂದರ್ಭದಲ್ಲಿ ಅಮಾಯಕ ಮುಸ್ಲಿಮರನ್ನು ಪೊಲೀಸರು ಬಂಧಿಸಿದಾಗ, ಕಾಂಗ್ರೆಸ್ನ ಯಾವುದೇ ನಾಯಕ ಈ ಬಗ್ಗೆ ತುಟಿಬಿಚ್ಚಿಲಿಲ್ಲ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಆರೋಪಿಸಿದ್ದಾರೆ.
ಗೋಳ್ತಮಜಲು ಗ್ರಾಮ ಸಮಿತಿ ವತಿಯಿಂದ ಕಲ್ಲಡ್ಕದಲ್ಲಿ ಶುಕ್ರವಾರ ರಾತ್ರಿ ನಡೆದ ಎಸ್ಡಿಪಿಐ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಈ ಗಲಭೆಯಲ್ಲಿ ಎರಡೂ ಧರ್ಮದ ಅಮಾಯಕರು ಬಂಧನಕ್ಕೆ ಒಳಗಾಗಿದ್ದರು. ಆದರೆ ಹಿಂದೂಗಳನ್ನು ಮಾತ್ರ ಬಿಡುಗಡೆಗೊಳಿಸುವ ಮೂಲಕ ಮುಸ್ಲಿಮರನ್ನು ಅವಮಾನಿಸಿದೆ ಎಂದು ಆರೋಪಿಸಿದರು.
ಜಾತಿ ಜಾತಿಗಳ ನಡುವೆ ಒಡಕನ್ನು ತರುವುದರ ಮೂಲಕ ಕಾಂಗ್ರೆಸ್ ನಕಲಿ ಜಾತ್ಯತೀತ ಸಿದ್ಧಾಂತವನ್ನು ಅನುಸರಿಸುತ್ತಿದೆ. ತಾಲೂಕಿನಲ್ಲಿ 61 ದಿನಗಳ ಕಾಲ ಸುದೀರ್ಘವಾಗಿ ಸೆಕ್ಷನ್ 144 ನಿಷೇಧಾಜ್ಞೆಯನ್ನು ಜಾರಿಗೊಳಿಸುವ ಮೂಲಕ ತಾಲೂಕಿನ ಜನರನ್ನು ಒಂದು ರೀತಿಯ ಭಯದ ವಾತಾವರಣವನ್ನು ಉಂಟು ಮಾಡಿದ್ದು, ಇದು ಇಲ್ಲಿನ ಸಾಮರಸ್ಯಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದರು.
ಎಸ್ಡಿಪಿಐ ಮುಖಂಡ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಾಹುಲ್ ಎಸ್. ಎಚ್, ಸದಸ್ಯ ಅಕ್ಬರ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಇಕ್ಬಾಲ್, ಝಕರಿಯಾ ಗೋಳ್ತಮಜಲು ಉಪಸ್ಥಿತರಿದ್ದರು. ಸಿದ್ದೀಕ್ ಪನಾಮ ಸ್ವಾಗತಿಸಿ, ನಿರೂಪಿಸಿದರು.