"ಪ್ರೀತಿಯ ಆಸಿಫಾ, ನೀನು ಬಿಟ್ಟು ಹೋಗಿರುವ ಬಟ್ಟೆ, ಚಪ್ಪಲಿಗಳನ್ನು ತೋರಿಸುತ್ತ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಾರೆ"
ಪತ್ರಕರ್ತ ತಾರಿಕ್ ಅನ್ವರ್ ಅವರ ಪತ್ರ
ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಅಲೆಮಾರಿ ಮುಸ್ಲಿಂ ಬಕರವಾಲ್ ಬುಡಕಟ್ಟು ಸಮುದಾಯದ ಎಂಟರ ಹರೆಯದ ಬಾಲಕಿ ಆಸಿಫಾಳನ್ನು ದುಷ್ಕರ್ಮಿಗಳು ಅಪಹರಿಸಿ, ದೇವಸ್ಥಾನವೊಂದರಲ್ಲಿ ದಿಗ್ಬಂಧನದಲ್ಲಿ ರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಕೊಂದಿರುವ ಘಟನೆ ಭಾರತದ ಇತಿಹಾಸದಲ್ಲಿಯೇ ಅಳಿಸಲಾಗದ ಕಳಂಕವಾಗಿದೆ. ಅದಾಗಲೇ ಜೀವಚ್ಛವವಾಗಿದ್ದ ಆ ಪುಟ್ಟಬಾಲೆಯನ್ನು ಕೊಲ್ಲುವ ಮುನ್ನ ಆರೋಪಿಗಳ ಪೈಕಿ ಓರ್ವ ಪೊಲೀಸ್ ಕೊನೆಯ ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ಎಂತಹವರಲ್ಲೂ ರೋಷ ಹುಟ್ಟಿಸುವ ಅಮಾನುಷತೆಯಾಗಿದೆ. ಇಂತಹ ಆರೋಪಿಗಳನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದವರಲ್ಲಿ ವಕೀಲರು, ಜಮ್ಮು-ಕಾಶ್ಮೀರದ ಇಬ್ಬರು ಬಿಜೆಪಿ ಸಚಿವರೂ ಸೇರಿದ್ದರು ಎನ್ನುವುದಕ್ಕಿಂತ ಹೆಚ್ಚಿನ ನಾಚಿಕೆಗೇಡಿನ ವಿಷಯ ಈ ದೇಶಕ್ಕೆ ಇನ್ನೊಂದಿಲ್ಲ. ಇತ್ತೀಚಿಗಷ್ಟೇ ಆಸಿಫಾಳ ಹೆತ್ತವರನ್ನು ಭೇಟಿಯಾದ ‘ನ್ಯೂಸ್ಕ್ಲಿಕ್.ಇನ್’ನ ಪತ್ರಕರ್ತ ತಾರಿಕ್ ಅನ್ವರ್ ಅವರು ಆಸಿಫಾಗೆ ಪತ್ರರೂಪದಲ್ಲಿ ಸಿದ್ಧಗೊಳಿಸಿರುವ ಮನಕಲಕುವ ವರದಿ ಇಲ್ಲಿದೆ.....
ಪ್ರೀತಿಯ ಆಸಿಫಾ,
ಜಮ್ಮುವಿನ ಕಥುವಾ ಜಿಲ್ಲೆಯ ರಸಾನಾದಲ್ಲಿ ನಿನ್ನ ಪೋಷಕರನ್ನು ಇತ್ತೀಚಿಗಷ್ಟೇ ನಾವು ಭೇಟಿಯಾಗಿದ್ದೇವೆ. ಅವರು ನಿನ್ನನ್ನು ತುಂಬ ನೆನಪು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯವನ್ನು ಅವರು ಎದುರಿಸುತ್ತಿರುವುದು ಇದು ಎರಡನೇ ಬಾರಿ. ನೀನು ಈ ಹಿಂದೆ ಅಪಘಾತವೊಂದರಲ್ಲಿ ನಿನ್ನ ಅಕ್ಕ ಮತ್ತು ಇಬ್ಬರು ಸೋದರರನ್ನು ಕಳೆದುಕೊಂಡಿದ್ದು, ನೀನೊಬ್ಬಳೇ ಈಗ ಉಳಿದಿದ್ದ ಕುಟುಂಬದ ಹೆಣ್ಣುಮಗುವಾಗಿದ್ದೆ ಎನ್ನುವುದು ಗೊತ್ತಾದಾಗ ಉಂಟಾದ ಆಘಾತ ದಿಂದ ನಾವಿನ್ನೂ ಹೊರಗೆ ಬಂದಿಲ್ಲ.
ನಿನ್ನ ಬಗ್ಗೆ ನಿನ್ನ ಅಣ್ಣಂದಿರಿಬ್ಬರ ಬಳಿ ವಿಚಾರಿಸಿದಾಗ ಅವರು ಕಣ್ಣೀರಾಗಿಬಿಟ್ಟಿದ್ದರು. ಒಂದೇ ಒಂದು ಶಬ್ದವನ್ನು ಉಸುರಲೂ ಅವರಿಗೆ ಸಾಧ್ಯವಾಗಿರಲಿಲ್ಲ. ತುಂಬ ಮಾತುಗಾರನಾಗಿದ್ದ, ಸದಾ ನಿನ್ನನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ನಿನ್ನ ಕಿರಿಯ ಅಣ್ಣನಂತೂ ಮಾತುಗಳನ್ನೇ ನಿಲ್ಲಿಸಿಬಿಟ್ಟಿದ್ದಾನೆ ಎಂದು ನಿನ್ನ ಅಪ್ಪ-ಅಮ್ಮ ನಮಗೆ ತಿಳಿಸಿದರು. ನೀನು ‘ಮಮ್ಮಾ’ ಎಂದು ಕರೆಯುತ್ತಿದ್ದ ನಿನ್ನ ಅಮ್ಮ ನೀನು ಬಿಟ್ಟು ಹೋಗಿರುವ ಬಟ್ಟೆಗಳು, ಶಾಲಾಬ್ಯಾಗ್, ಚಪ್ಪಲಿ ಮತ್ತು ಶೂಗಳನ್ನು ನಮಗೆಲ್ಲ ತೋರಿಸುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಮಗೂ, ಅವರನ್ನು ಸಮಾಧಾನಗೊಳಿಸಲು ನಮ್ಮ ಬಳಿ ಶಬ್ದಗಳೇ ಇರಲಿಲ್ಲ.
ನಿನಗೆ ಎಂದೂ ಹಸಿವೆಯನ್ನು ತಡೆದುಕೊಳ್ಳಲಾಗುತ್ತಿರಲಿಲ್ಲ ಎಂದು ನಿನ್ನ ಅಮ್ಮ ಹೇಳಿದರು. ನಿನ್ನನ್ನು ಕೊಲ್ಲುವ ಮುನ್ನ ಆ ರಾಕ್ಷಸರು ಅನ್ನಾಹಾರವಿಲ್ಲದ ನಿನ್ನನ್ನು ದೇವಸ್ಥಾನದಲ್ಲಿ ಮತ್ತು ದನದ ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದರು. ನೀನು ಅನುಭವಿಸಿದ ಕ್ರೌರ್ಯದ ಬಗ್ಗೆ ಹೇಳುವಾಗ ನಿನ್ನ ಅಮ್ಮ ಸಂಪೂರ್ಣವಾಗಿ ನಡುಗುತ್ತಿದ್ದರು.
ಮಗೂ, ನಿನ್ನನ್ನು ತುಂಬ ಹಚ್ಚಿಕೊಂಡಿದ್ದ ನಿನ್ನ ಅಪ್ಪ ನೀನಿಲ್ಲದೆ ಖಿನ್ನತೆಗೊಳಗಾಗಿದ್ದಾರೆ. ಖಿನ್ನತೆ ನಿವಾರಕ ಔಷಧಿಗಳ ಹೆಚ್ಚಿನ ಡೋಸ್ಗಳ ಬಲದಲ್ಲಿ ಅವರು ಬದುಕುಳಿದಿದ್ದಾರೆ. ಅವರಿಗೆ ವೈದ್ಯರು ಔಷಧಿಗಳನ್ನು ಬರೆದುಕೊಟ್ಟಿರುವ ಚೀಟಿಯನ್ನೂ ನಾವು ನೋಡಿದ್ದೇವೆ. ಪ್ರೀತಿಯ ಆಸಿಫಾ, ನನ್ನನ್ನು ನಂಬು. ನೀನು ಅವರ ಹೃದಯಗಳಲ್ಲಿ ತುಂಬಿಕೊಂಡಿದ್ದೀಯಾ. ಅವರ ನಡುವೆ ನೀನು ಜೀವಂತವಾಗಿಯೇ ಇದ್ದೀಯಾ. ನೀನು ಸತ್ತೇ ಇಲ್ಲ ಮಗೂ.
ಒಂದು ವಿಷಯ ನಿನಗೆ ಗೊತ್ತಿದೆಯೇ?, ನೀನು ಸತ್ತಿಲ್ಲ, ಆದರೆ ನಮ್ಮ ಆತ್ಮಸಾಕ್ಷಿ ಈಗ ಸಂಪೂರ್ಣವಾಗಿ ಸತ್ತುಹೋಗಿದೆ. ಕೆಲವು ವರ್ಷಗಳ ಹಿಂದೆ ದಿಲ್ಲಿಯಲ್ಲಿ ನಿನ್ನಂತೆಯೇ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದ ನಿರ್ಭಯಾಳಿಗೆ ನ್ಯಾಯಕ್ಕೆ ಆಗ್ರಹಿಸಿ ನಾವು ಬೀದಿಗಿಳಿದಿದ್ದಾಗ ನಮ್ಮಲ್ಲಿ ಸ್ವಲ್ಪ ಆತ್ಮಸಾಕ್ಷಿ ಎನ್ನುವುದು ಉಳಿದುಕೊಂಡಿತ್ತು. ಈಗ ನಾವು ಯಾವ ಎತ್ತರವನ್ನು ತಲುಪಿದ್ದೇವೆ ಎಂದರೆ ನಿನಗೆ ನ್ಯಾಯವನ್ನು ಬೇಡುವ ಬದಲು ಕೈಗಳಲ್ಲಿ ರಾಷ್ಟ್ರಧ್ವಜವನ್ನು ಬೀಸುತ್ತ, ರಾಷ್ಟ್ರೀಯವಾದಿ ಘೋಷಣೆಗಳನ್ನು ಕೂಗುತ್ತ ನಿನಗೆ ಪರಮ ಅನ್ಯಾಯವನ್ನು ಬಗೆದಿರುವ ರಕ್ತಪಿಪಾಸು ರಾಕ್ಷಸರನ್ನು ಬೆಂಬಲಿಸಿ ರಸ್ತೆಗಿಳಿದಿದ್ದೇವೆ. ಮಗೂ, ನಿನಗೆ ಅಚ್ಚರಿಯಾಗಬಹುದು, ಈ ಎಲ್ಲ ಅಮಾನವೀಯ ಕೃತ್ಯಗಳನ್ನು ಇಂದು ನಮ್ಮ ‘ನವ ಭಾರತ’ದಲ್ಲಿ ಹೊಸ ಸಹಜ ವಿಷಯಗಳೆಂಬಂತೆ ಸ್ವೀಕರಿಸಲಾಗುತ್ತಿದೆ!
ನಿನ್ನ ಪ್ರೀತಿಯ ಅಂಕಲ್ ತಾರಿಕ್ ಅನ್ವರ್