ಕಾಂಗ್ರೆಸ್-ಬಿಜೆಪಿ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ: ವಸಂತ ಆಚಾರಿ
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಿಪಿಎಂ ರಾಜಕೀಯ ಸಮಾವೇಶ

ಮಂಗಳೂರು, ಎ.15: ಈ ದೇಶ-ರಾಜ್ಯವನ್ನಾಳಿದ ಮತ್ತು ಆಳುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ, ಆರ್ಥಿಕ ನೀತಿಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.
ನಗರದ ಡಾನ್ಬಾಸ್ಕೋ ಹಾಲ್ನಲ್ಲಿ ರವಿವಾರ ನಡೆದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಿಪಿಎಂ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಪಿಎಂ ಬಡವರ, ದೀನ ದಲಿತರ, ಮರ್ದಿತರ ಪರವಾಗಿ ಹೋರಾಟ ಮಾಡುತ್ತಲೇ ಬಂದಿದೆ. ಅನ್ಯಾಯಕ್ಕೊಳಗಾದವರ ಪರ ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಡುವುದೇ ಪಕ್ಷದ ಧ್ಯೇಯವಾಗಿದೆ. ನಮಗೆ ಜಾತಿ, ಧರ್ಮದ ಹಂಗಿಲ್ಲ. ಆದರೆ, ಬಿಜೆಪಿ-ಕಾಂಗ್ರೆಸ್ ಹಾಗಲ್ಲ. ಅದು ನ್ಯಾಯದ ಬದಲು ಜಾತಿ-ಧರ್ಮವನ್ನು ನೋಡುತ್ತದೆ. ಅದಕ್ಕೆ ಜಮ್ಮುವಿನಲ್ಲಿ ಇತ್ತೀಚೆಗೆ ನಡೆದ 8ರ ಹರೆಯದ ಅಮಾಯಕ ಬಾಲಕಿಯ ಮೇಲಿನ ಅತ್ಯಾಚಾರ-ಕೊಲೆ ಸಾಕ್ಷಿಯಾಗಿದೆ ಎಂದರು.
ಸಿಪಿಎಂ ಪಕ್ಷ ಸ್ಪರ್ಧಿಸಿದರೆ ಬಿಜೆಪಿಗೆ ಲಾಭವಾಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ನಾವು ಯಾರನ್ನೋ ಗೆಲ್ಲಿಸಲು ಸ್ಪರ್ಧಿಸುವುದಲ್ಲ. ನಮ್ಮ ಗೆಲುವಿಗಾಗಿ ಮತ್ತು ನಮ್ಮ ಅಸ್ತಿತ್ವಕ್ಕಾಗಿ ಹಾಗೂ ಬಿಜೆಪಿ-ಕಾಂಗ್ರೆಸ್ಸನ್ನು ಸೋಲಿಸುವುದಕ್ಕಾಗಿಯೇ ನಾವು ಸ್ಪರ್ಧಿಸುತ್ತೇವೆ. ನಮಗೆ ಜಯ ಖಂಡಿತಾ ಲಭಿಸಲಿದೆ ಎಂದ ವಸಂತ ಆಚಾರಿ, ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಹುನ್ನಾರ ಮಾಡುವ ಬಿಜೆಪಿಯ ವಿರುದ್ಧ ಕಾಂಗ್ರೆಸ್ಸಿಗರು ಏನು ಮಾಡಿದ್ದಾರೆ? ಇಲ್ಲಿ ಅನೇಕ ಕೊಲೆ, ಕೋಮುಗಲಭೆಗಳಾಗಿವೆ. ಕೋಮು ಪ್ರಚೋದನಕಾರಿ ಭಾಷಣ ಮಾಡುವ ಕಲ್ಲಡ್ಕ ಪ್ರಭಾಕರ ಭಟ್ರನ್ನು ಬಂಧಿಸಿ ಜೈಲಿಗಟ್ಟಲು ಕಾಂಗ್ರೆಸ್ಸಿಗರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಬಡವರ-ಶ್ರೀಮಂತರ ನಡುವಿನ ಚುನಾವಣೆ
ಕಾಂಗ್ರೆಸ್ ಮತ್ತು ಬಿಜೆಪಿ ಶೇ.10ರಷ್ಟಿರುವ ಬಂಡವಾಳ ಶಾಹಿಗಳ ಪರವಾಗಿದ್ದಾರೆ. ಅವರ ದೇಣಿಗೆ ಪಡೆದೇ ಚುನಾವಣೆ ಎದುರಿಸುತ್ತಿವೆ. ಶೇ.90ರಷ್ಟಿರುವ ಬಡವರ ಬಳಿ ಬಂದು ಮತಯಾಚಿಸುತ್ತಿವೆ. ಗೆದ್ದ ಬಳಿಕ ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿದೆ. ಆದರೆ, ಸಿಪಿಎಂ ಹಾಗಲ್ಲ, ಬಂಡವಾಳ ಶಾಹಿಗಳ ದೇಣಿಗೆಯನ್ನು ಪಡೆಯುವುದಿಲ್ಲ. ಸ್ವಾಭಿಮಾನಿ ದುಡಿಯುವ ವರ್ಗದ ದೇಣಿಗೆಯೊಂದಿಗೆ ಮತ ಪಡೆಯುವ ಹುಮ್ಮಸ್ಸಿನಲ್ಲಿದೆ. ಈ ಬಾರಿಯ ಚುನಾವಣೆಯು ಬಡವರ ಮತ್ತು ಶ್ರೀಮಂತರ ನಡುವಿನ ಚುನಾವಣೆಯಾಗಿದ್ದು, ಶೇ. 90ರಷ್ಟಿರುವ ಬಡವರು ಸಿಪಿಎಂ ಪಕ್ಷದ ಪರ ನಿಲ್ಲಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಕರೆ ನೀಡಿದರು.
ಕಳಂಕರಹಿತ ಪಕ್ಷ
ಸಿಪಿಎಂ ಕಳಂಕರಹಿತ ಪಕ್ಷವಾಗಿದೆ. ಶಿಸ್ತಿನ ಪಕ್ಷ ಎನ್ನುವ ಬಿಜೆಪಿಯಲ್ಲಿ ಈಗ ಶಿಸ್ತಿಲ್ಲ. ಬಡವರ ಬಂಧು ಎನ್ನುವ ಕಾಂಗ್ರೆಸ್ ಕೂಡ ಬಡವರ ಬಂಧುವಾಗಿ ಉಳಿದಿಲ್ಲ. ಬಿಜೆಪಿಗರು ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದಾಗ ಸೂಕ್ತ ಕ್ರಮ ಜರಗಿಸಬೇಕಾಗಿದ್ದ ಕಾಂಗ್ರೆಸ್ ಮೌನ ತಾಳಿತ್ತು. ಹಾಗಾಗಿ ಸಿಪಿಎಂ ಜನರ ಪ್ರತಿನಿಧಿಯಾಗಲು ಮುಂದಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆಯೇ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದೆ. ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಕ್ಷೇತ್ರದ ಶಾಸಕರಾಗಿದ್ದ ಬಿಜೆಪಿ-ಕಾಂಗ್ರೆಸ್ನ ಪ್ರತಿನಿಧಿಗಳು ಏನೇನೂ ಅಭಿವೃದ್ಧಿ ಮಾಡಿಲ್ಲ ಎಂಬುದು ಜನರಿಗೆ ಮನದಟ್ಟಾಗಿದೆ. ಹಾಗಾಗಿ ಸಿಪಿಎಂ ಪಕ್ಷ ಈ ಬಾರಿ ಅಧಿಕ ಮತದಿಂದ ಗೆಲ್ಲಲಿದೆ ಎಂದು ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಈ ಸಂದರ್ಭ ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಯಶವಂತ ಮರೋಳಿ ಅವರು ಸಿಪಿಎಂ ಪಕ್ಷದ ಪ್ರಚಾರದ ಸಿಡಿ ಹಾಗೂ ಪ್ಲೇ ಕಾರ್ಡ್ ಅನಾವರಣಗೊಳಿಸಿದರು.
ಪಕ್ಷದ ಮುಖಂಡ ಯೋಗೀಶ್ ಜಪ್ಪಿನಮೊಗರು ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಜಯಂತಿ ಶೆಟ್ಟಿ, ಮಂಜುಳಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿದರು. ಸಂತೋಷ್ ಶಕ್ತಿನಗರ ಕಾರ್ಯಕ್ರಮ ನಿರೂಪಿಸಿದರು.