ನಕಲಿ ನೋಟು ಹಾವಳಿ ಆರೋಪ
ಮಂಗಳೂರು, ಎ.16: ಕೆಎಸ್ಆರ್ಟಿಸಿ ಐರಾವತ ಬಸ್ಗಳಲ್ಲಿ ಕಳ್ಳನೋಟ್ಗಳ ಚಲಾವಣೆಯಾಗುತ್ತಿದ್ದು, ಬಸ್ಸು ನಿರ್ವಾಹಕರ ಜೇಬಿಗೆ ಕತ್ತರಿ ಬೀಳುತ್ತಿರುವ ಆರೋಪವೊಂದು ಬಸ್ಸು ನಿರ್ವಾಹಕರಿಂದಲೇ ಕೇಳಿ ಬಂದಿದೆ.
ಇತ್ತೀಚೆಗೆ ಮಂಗಳೂರು-ಭಟ್ಕಳ ನಡುವೆ ಸಂಚರಿಸುವ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ನೀಡಿದ ನಕಲಿ ನೋಟಿನಿಂದಾಗಿ ತಾನು ತನ್ನ ಕೈಯಿಂದ ಹಣವನ್ನು ಭರಿಸುವ ಪ್ರಸಂಗವನ್ನು ಎದುರಿಸಿದ್ದನ್ನು ಹೆಸರು ಹೇಳಲಿಚ್ಚಿಸದ ಬಸ್ ನಿರ್ವಾಹಕರೊಬ್ಬರು ಉಡುಪಿಯಿಂದ ಮಂಗಳೂರಿಗೆ ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ಮಂಗಳೂರಿನ ಪರಿಚಯಸ್ಥ ಪತ್ರಕರ್ರೊಬ್ಬರ ಗಮನಕ್ಕೆ ತಂದಿದ್ದಾರೆ.
ಭಟ್ಕಳದಿಂದ ಮಂಗಳೂರಿಗೆ ಬರುವ ಐರಾವತ ಬಸ್ಗಳಲ್ಲಿ ಹೆಚ್ಚಾಗಿ ರಾತ್ರಿ ವೇಳೆಯೇ 2 ಸಾವಿರ ಮತ್ತು ಐನೂರು ಮುಖಬೆಲೆಯ ಕಳ್ಳನೋಟುಗಳ ಚಲಾವಣೆಯಾಗುತ್ತಿದೆ ಎಂದು ಹೇಳಿರುವ ಬಸ್ ನಿರ್ವಾಹಕರು, ಇತ್ತೀಚೆಗೆ ಪ್ರಯಾಣಿಕರೊಬ್ಬರು ಎರಡು ಸಾವಿರ ಮುಖಬೆಲೆಯ ನೋಟು ನೀಡಿ ಟಿಕೆಟ್ ಪಡೆದಿದ್ದರು. ಬಸ್ ನಿರ್ವಾಹಕರು ದಿನದ ಕರ್ತವ್ಯ ಮುಗಿಸಿ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಹಣ ಪಾವತಿಸುವ ವೇಳೆ ನೋಟುಗಳನ್ನು ಕೌಂಟಿಂಗ್ ಮಿಷಿನ್ಗೆ ಹಾಕಿದಾಗ ಅದರಲ್ಲಿ 2 ಸಾವಿರ ಮುಖಬೆಲೆಯ ಒಂದು ನೋಟು ನಕಲಿಯಾಗಿತ್ತು. ನಕಲಿ ನೋಟಿನ ಕಾರಣದಿಂದಾಗಿ ಆ 2 ಸಾವಿರವನ್ನು ಅವರು ತಮ್ಮ ವೇತನದಿಂದ ಭರಿಸಿದ್ದಾರೆ.
‘‘ಕೆಲವೊಮ್ಮೆ ರಾತ್ರಿ ಭಟ್ಕಳದಿಂದ ಬರುವಾಗ್ ಬಸ್ ಪ್ರಯಾಣಿಕರಿಂದ ತುಂಬಿರುತ್ತದೆ. ಈ ವೇಳೆಯೇ ನಕಲಿ ನೋಟುಗಳ ಚಲಾವಣೆಯಾಗುತ್ತದೆ. ಟಿಕೆಟ್ ನೀಡುವ ವೇಳೆ ನಕಲಿ ಯಾವುದು ಅಸಲಿ ಯಾವುದು ಎಂದು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ತನಗೆ ದೊರೆತ ನಕಲಿ 2 ಸಾವಿರ ಮುಖಬೆಲೆಯ ನೋಟು ನೋಡಲು ಅಸಲಿ ನೋಟಿನಂತೆಯೇ ಇತ್ತು. ಆದರೆ ಸಂಸ್ಥೆಗೆ ಹಣಪಾವತಿಸುವ ವೇಳೆ ಹಣ ಕೌಂಟಿಂಗ್ ಮಿಷಿನ್ಗೆ ಹಾಕಿದಾಗ ನಕಲಿ ಎಂಬುದು ಗೊತ್ತಾಯಿತು. ಯಾವ ಪ್ರಯಾಣಿಕರು ಎಂದು ಪತ್ತೆಹಚ್ಚುವುದೂ ಕಷ್ಟ. ಇತ್ತೀಚೆಗಷ್ಟೇ ಸಂಸ್ಥೆಗೆ ಸೇರಿಕೊಂಡಿದ್ದೇನೆ. ನಮಗೆ ಸಂಬಳ ಇರುವುದು 9100 ಅದರಲ್ಲಿ ಕಳೆದ ತಿಂಗಳು ನಕಲಿ ನೋಟಿನಿಂದಾಗಿ 2 ಸಾವಿರವನ್ನು ನಾನೇ ಭರಿಸಬೇಕಿತ್ತು. ನಕಲಿ ನೋಟು ಚಲಾವಣೆ ಬಗ್ಗೆ ಇದೀಗ ಎಚ್ಚರಿಕೆ ವಹಿಸಿದ್ದೇವೆ. ಒಂದುವೇಳೆ ಅಂತಹ ನೋಟುಗಳು ಪತ್ತೆಹಚ್ಚಿದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’’ ಎಂಬುದು ನೊಂದ ಬಸ್ ನಿರ್ವಾಹಕ ಒತ್ತಾಯಿಸಿದ್ದಾರೆ.