ಮಂಗಳೂರು: ಕಥುವಾ ಅತ್ಯಾಚಾರ, ಕೊಲೆ ಖಂಡಿಸಿ ಸಮಾನಮನಸ್ಕರಿಂದ ಪ್ರತಿಭಟನೆ
ಸೌಜನ್ಯಾ ತಾಯಿಯಿಂದ ಚಾಲನೆ

ಮಂಗಳೂರು, ಎ. 16: ಜಮ್ಮುವಿನ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮಂಗಳೂರಿನ ವಿವಿಧ ಸಮಾನ ಮನಸ್ಕ ಸಂಘಟನೆಗಳು ಮತ್ತು ನಾಗರಿಕರು ಸೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಸೋಮವಾರ ಸಂಜೆ ಮೊಂಬತ್ತಿ ಹಿಡಿದು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು.
ಅತ್ಯಾಚಾರ ಮತ್ತು ಕೊಲೆಗೀಡಾದ ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಅವರು ಮೊಂಬತ್ತಿ ಉರಿಸುವ ಮೂಲಕ ಚಾಲನೆ ನೀಡಿದರು.
ಪ್ರತಿಭಟನಾಕಾರರು ಮೊಂಬತ್ತಿಗಳನ್ನು ಹಿಡಿದು ಸಂತ್ರಸ್ತೆ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಕ್ರೂರ ಕೃತ್ಯ ಎಸಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಒತ್ತಾಯಗಳು ಪ್ರತಿಭಟನಕಾರರಿಂದ ಕೇಳಿಬಂದವು. ಪ್ರತಿಭಟನಕಾರರು ವಿವಿಧ ಸ್ಲೋಗನ್ಗಳನ್ನು ಹಿಡಿದಿದ್ದರು.
ಅನ್ಯಾಯದ ವಿರುದ್ಧದ ಧ್ವನಿ ಅಡಗಿಸಲು ಯತ್ನಿಸಬೇಡಿ
ದೇಶದ ಜನರು ಅನ್ಯಾಯದ ವಿರುದ್ದ ಧ್ವನಿ ಎತ್ತಲು ಹೊರಟರೆ ಅದನ್ನು ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕಾರ್ಯಗಳು ನಿಲ್ಲಬೇಕು. ಅನ್ಯಾಯದ ವಿರುದ್ಧದ ಧ್ವನಿಗಳು ಒಂದಾಗಿ ಹೋರಾಟಕ್ಕಿಳಿದಲ್ಲಿ ಯಾವ ರಾಜಕೀಯ ಪಕ್ಷದಿಂದಲೂ ಅಡಗಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ವಿಚಾರವಾದಿ ವೇದಿಕೆಯ ಅಧ್ಯಕ್ಷ ನೇಂದ್ರ ನಾಯಕ್ ಎಚ್ಚರಿಕೆ ನೀಡಿದರು.
ಅಪಾಯದಲ್ಲಿ ಪ್ರಜಾಪ್ರಭುತ್ವ
ಕಥುವಾದಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡನೀಯವಾಗಿದೆ. ಉನ್ನಾವ, ಕಥುವಾ, ಸೂರತ್ ಮೊದಲಾದೆಡೆಗಳಲ್ಲಿ ನಡೆದಿರುವ ಅತ್ಯಾಚಾರಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಸವಾಲನ್ನು ಎಸೆದಿವೆ. ಉನ್ನಾವದಲ್ಲಿ ಶಾಸನಗಳನ್ನು ರೂಪಿಸುವ ಶಾಸಕನ ಅತ್ಯಾಚಾರ ಮತ್ತು ಕಥುವಾದಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆಯಂತಹ ಕ್ರೂರ ಕೃತ್ಯ ಮಾಡಿದವರ ಪರವಾದ ಪ್ರತಿಭಟನೆಯನ್ನು ಬೆಂಬಲಿಸಿದ ಜನಪ್ರತಿನಿಧಿಗಳು ಮತ್ತು ನ್ಯಾಯವನ್ನು ಒದಗಿಸಿಕೊಡಬೇಕಾದ ನ್ಯಾಯವಾದಿಗಳು ಆರೋಪಿಗಳ ಪರವಾಗಿ ನಿಂತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಕಡೆಗೆ ಸಾಗಿದೆ ಎಂಬುದನ್ನು ಚಿಂತಿಸಬೇಕಾಗಿದೆ. ಈ ಬಗ್ಗೆ ಆತ್ಮಾವಲೋಕನ ಮತ್ತು ವಿಮರ್ಶೆ ನಡೆಯಬೇಕಾದ ಅಗತ್ಯವಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕ ಅಧ್ಯಕ್ಷ ಮುಹಮ್ಮದ್ ಕುಂಞಿ ಹೇಳಿದರು.
ಸಾಮಾಜಿಕ ಕಾರ್ಯಕರ್ತರಾದ ವಿದ್ಯಾದಿನಕರ್, ಸೈಫ್ ಸುಲ್ತಾನ್, ಉಮರ್ ಯು.ಎಚ್., ವಿದ್ಯಾರ್ಥಿನಿ ಶ್ರೇಯಾ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ನನ್ನ ಮಗಳಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲ: ಸೌಜನ್ಯಾ ತಾಯಿ
ನನ್ನ ಮಗಳ ಅತ್ಯಾಚಾರ, ಕೊಲೆಯಾಗಿ ಐದು ವರ್ಷ ಕಳೆದಿವೆ. ಆದರೆ ಈವರೆಗೂ ನನ್ನ ಮಗಳಿಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಕ್ಕಾಗಿ ಐದು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ನನ್ನ ಹೋರಾಟಕ್ಕೆ ನೀವೂ ಸಾಥ್ ನೀಡಬೇಕು ಎಂದು ಅತ್ಯಾಚಾರ ಮತ್ತು ಕೊಲೆಗೀಡಾದ ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಮನವಿ ಮಾಡಿದರು.
ಜಮ್ಮುವಿನ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮಂಗಳೂರಿನ ವಿವಿಧ ಸಮಾನ ಮನಸ್ಕ ಸಂಘಟನೆಗಳು ಮತ್ತು ನಾಗರಿಕರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ವಿಚಾರವಾದಿ ವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್, ಅತ್ಯಾಚಾರ ಮತ್ತು ಕೊಲೆಗೀಡಾದ ಸೌಜನ್ಯಾ ಅವರ ತಾಯಿ ಕುಸುಮಾವತಿ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕ ಅಧ್ಯಕ್ಷ ಮುಹಮ್ಮದ್ ಕುಂಞಿ, ಸಾಮಾಜಿಕ ಕಾರ್ಯಕರ್ತರಾದ ವಿದ್ಯಾದಿನಕರ್, ಸೈಫ್ ಸುಲ್ತಾನ್, ಉಮರ್ ಯು.ಎಚ್., ವಿದ್ಯಾರ್ಥಿನಿ ಶ್ರೇಯಾ ಉಪಸ್ಥಿತರಿದ್ದರು.