ನಮ್ಮ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು : ತಾರಾನಾಥ ಕೋಟ್ಯಾನ್
ಕಾರ್ಕಳ, ಎ.16: ಕಾರ್ಕಳ ವಿಧಾನಸಭಾ ಕ್ಷೇತ್ರದ 34 ಸ್ಥಾನೀಯ ಸಮಿತಿಗಳು ಒಮ್ಮತದಿಂದ ನಮ್ಮ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ಎಂದು ತೀರ್ಮಾನಿಸಿ, ಅವರ ಹೆಸರನ್ನು ಶಿಪಾರಸ್ಸು ಮಾಡಿ ಕೆಪಿಸಿಸಿಗೆ ಕಳುಹಿಸಿ ಕೊಟ್ಟಿದ್ದೇವೆ. ಆದರೆ ವೀರಪ್ಪ ಮೊಯ್ಲಿ ಅವರು ತಮ್ಮ ಪ್ರಭಾವ ಬಳಸಿ, ತಮ್ಮ ಮಗನಿಗೆ ಕೊಡಲಾಗದ ಟಿಕೇಟ್ನ್ನು ಎಚ್.ಗೋಪಾಲ ಭಂಡಾರಿ ಅವರಿಗೆ ನೀಡಲು ಕಾರಣರಾಗಿದ್ದಾರೆ. ಇದನ್ನು ಸಹಿಸುವುದಿಲ್ಲ. ಕಾರ್ಯಕರ್ತರ ಅಭಿಪ್ರಾಯವನ್ನು ಧಿಕ್ಕರಿಸಿದರೆ ತಕ್ಕ ಪಾಠವನ್ನು ಕಲಿಸುವುದಾಗಿ ಮಿಯ್ಯಾರು ಗ್ರಾಪಂ ಸದಸ್ಯ ತಾರಾನಾಥ ಕೋಟ್ಯಾನ್ ಹೇಳಿದ್ದಾರೆ.
ಕಾರ್ಕಳದ ಹೊಟೇಲ್ ಕಟೀಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಟ್ವೀಟ್ ಪ್ರಕರಣದಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿ ಟಿಕೆಟ್ ಪಡೆಯುವ ಅವಕಾಶದಿಂದ ವಂಚಿತನಾದ ಪುತ್ರ ಹರ್ಷ ಮೊಯ್ಲಿಗೆ ಮುಂದಿನ ಬಾರಿ ಟಿಕೆಟ್ ನೀಡುವ ಉದ್ದೇಶದಿಂದ, ಈ ಬಾರಿ ಭಂಡಾರಿ ಅವರಿಗೆ ಟಿಕೆಟ್ ನೀಡಿ ಸೋಲಿಸಲು ವೀರಪ್ಪ ಮೊಯ್ಲಿ ಷಡ್ಯಂತ್ರ ಹೂಡಿದ್ದಾರೆ ಎಂದು ಆರೋಪಿಸಿದರು.
ಗೆಲ್ಲುವ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ಅವರಿಗೆ ಟಿಕೆಟ್ ನಿರಾಕರಿಸಿದ್ದಾರೆ. ಇದರ ಹಿಂದೆ ಪುತ್ರನ ಭವಿಷ್ಯದ ಲೆಕ್ಕಾಚಾರವಿದೆ ಎಂದು ದೂರಿದರು. ಕಾರ್ಕಳ ಕಾಂಗ್ರೆಸ್ ವೀರಪ್ಪ ಮೊಯ್ಲಿ ಹಾಗೂ ಗೋಪಾಲ ಭಂಡಾರಿ ಅವರ ಆಸ್ತಿಯಲ್ಲ. ಇದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದರು.
ಮುಂದಿನ ಎರಡು ದಿನಗಳಲ್ಲಿ ಉದಯ ಶೆಟ್ಟಿ ಅವರನ್ನು ಅಬ್ಯರ್ಥಿಯಾಗಿ ಘೋಷಿಸದಿದ್ದಲ್ಲಿ ಗ್ರಾಮ ಗ್ರಾಮಗಳಲ್ಲಿ ಮೊಯ್ಲಿ ಮತ್ತು ಎಚ್.ಗೋಪಾಲ ಭಂಡಾರಿ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ಕೋಟ್ಯಾನ್ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೇಮಿರಾಜ ರೈ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಬ್ಲಾಕ್ ಪದಾಧಿಕಾರಿಗಳ ಬದಲಾವಣೆಯಾಗಿಲ್ಲ. ಎಲ್ಲಾ ಪದಾಧಿಕಾರಿಗಳು ಕೂಡಾ ಅನಧಿಕೃತವೇ ಆಗಿದ್ದಾರೆ. ಗೋಪಾಲ ಭಂಡಾರಿ ಅವರ ಹಿಂದೆ ಓಡಾಡುವ ಹತ್ತು ಮಂದಿ ಪದಾಧಿಕಾರಿಗಳು ಅನಧಿಕೃತರು. ಅನಧಿಕೃತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅ್ಯರ್ಥಿ ಸ್ಥಾನಕ್ಕೆ ಭಂಡಾರಿ ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಡೇನಿಯಲ್ ರೇಂಜರ್, ಶೇಖ್ ಶಬ್ಬೀರ್, ತಾಪಂ ಸದಸ್ಯ ಸುಧಾಕರ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವೀನ್ ಅಡ್ಯಂತಾಯ ಉಪಸ್ಥಿತರಿದ್ದರು.