ಎ.17ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ : ಎಚ್.ಕೆ ಕೃಷ್ಣಮೂರ್ತಿ

ಪುತ್ತೂರು,ಎ.16:ವಿಧಾನ ಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಗೊಳಿಸಿದ್ದು ಎ.17ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಸೂಚಿಸಿದ ಎಲ್ಲಾ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸುವಂತೆ ಚುನಾವಣಾಧಿಕಾರಿಯಾಗಿರುವ, ಸಹಾಯಕ ಆಯುಕ್ತ ಎಚ್.ಕೆ ಕೃಷ್ಣಮೂರ್ತಿ ಹೇಳಿದರು.
ಮಿನಿ ವಿಧಾನ ಸೌಧದಲ್ಲಿರುವ ಸಹಾಯಕ ಆಯಕ್ತ ಸಭಾಂಗಣದಲ್ಲಿ ಎ.16ರಂದು ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ವಿಧಾನ ಸಭಾ ಚುನಾವಣೆಯು ಮೆ.12ರಂದು ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಎ.17ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು ಎ.24 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಮಿನಿ ವಿಧಾನ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಛೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬೇಕು. ರಜಾ ದಿನಗಳನ್ನುಹೊರತು ಪಡಿಸಿ ಉಳಿದ ದಿನಗಳಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 3 ಗಂಟೆಯ ಅವಧಿಯೊಳಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಎ.25 ನಾಮಪತ್ರಗಳ ಪರಿಶೀಲನೆ, ಎ.27 ನಾಮಪತ್ರಗಳ ಹಿಂತೆಗೆಯಲು ಕೊನೆ ದಿನವಾಗಿದೆ. ಮೆ.12ರಂದು ಮತದಾನ ನಡೆಯಲಿದ್ದು ಮೆ.15ರಂದು ಫಲಿತಾಂಶ ಹೊರಬೀಳಲಿದೆ. ಮೇ.18ಕ್ಕೆ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ ಎಂದರು.
ನಾಮಪತ್ರವನ್ನು ನಮೂನೆ 2ಬಿನಲ್ಲಿ ಸಲ್ಲಿಸಬೇಕು. ನಾಮಪತ್ರದಲ್ಲಿ ಸೂಚಕರ ಮತ್ತು ಅಭ್ಯರ್ಥಿಯ ಸಹಿ ಕಡ್ಡಾಯವಾಗಿರಬೇಕು. ಅಭ್ಯರ್ಥಿಯ ವಯಸ್ಸು 25ಕ್ಕಿಂತ ಕಡಿಮೆಯಿರಬಾರದು, ಒಬ್ಬ ಅಭ್ಯರ್ಥಿ 4 ನಾಮಪತ್ರಗಳನ್ನು ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗೆ ರೂ.10ಸಾವಿರ ಠೇವಣಿ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ ರೂ.5ಸಾವಿರ ಠೇವಣಿಯಿಡಬೇಕು. ನಾಮಪತ್ರದ ಜೊತೆಗೆ ಅಭ್ಯರ್ಥಿಯ ಹೆಸರಿರುವ ದೃಡೀಕೃತ ಮತದಾರರ ಪಟ್ಟಿಯನ್ನು ಸಲ್ಲಿಸಬೇಕು. ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾದಲ್ಲಿ ಒಬ್ಬ ಸೂಚಕನ ಸಹಿಯಾಗಿರಬೇಕು. ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಯಾಗಿದ್ದಲ್ಲಿ 10 ಜನ ಸೂಚಕ ಸಹಿ ಮಾಡಿರಬೇಕು. ನಮೂನೆ 26ರಲ್ಲಿ ರೂ.20 ಛಾಪಾ ಕಾಗದಲ್ಲಿ ಅಪಿಡವಿಟ್ ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ಅಫಿಡವಿಟ್ನ ಕ್ರಮ ಸಂಖ್ಯೆ 3ರಲ್ಲಿ ಅಭ್ಯರ್ಥಿಯು ಹೊಂದಿರುವ ಅಧಿಕೃತ ಸಾಮಾಜಿಕ ಜಾಲತಾಣಗಳ ವಿವರ ನೀಡಬೇಕು. ಅಭ್ಯರ್ಥಿಯು ಸರ್ಕಾರಿ ನೌಕರನಾಗಿ ನಿವೃತ್ತಿ ಹೊಂದಿದಲ್ಲಿ/ಸ್ವಯಂ ನಿವೃತ್ತಿ ಬೇಕಿದ್ದಲ್ಲಿ ಕಳೆದ 10ವರ್ಷಗಳಿಂದ ಸರ್ಕಾರಕ್ಕೆ ನೀಡಬೇಕಾದ ಬಾಕಿ ವಿವರವನ್ನು ಕಡ್ಡಾಯವಾಗಿ ಸಲ್ಲಿಸುವುದು. ನಾಮಪತ್ರ ಸಲ್ಲಿಸಿದ ನಂತ ಅಭ್ಯರ್ಥಿಯು ಪ್ರಮಾಣವಚನ ಸ್ವೀಕರಿಸಬೇಕು. 2 ಪಾಸ್ಪೋಟ್ ಹಾಗೂ 2 ಸ್ಟ್ಯಾಂಪ್ ಸೈಜ್ ಭಾವಚಿತ್ರವನ್ನು ಸಲ್ಲಿಸಿಬೇಕು. ಚುನಾವಣಾ ಉದ್ದೇಶಕ್ಕಾಗಿ ಅಭ್ಯರ್ಥೀ ಹೊಸ ಬ್ಯಾಂಕ್ ಖಾತೆ ಪಾಸ್ ಪುಸ್ತಕದ 2 ನಕಲು ಪ್ರತಿಯನ್ನು ನೀಡಬೇಕು. ಚುನಾವಣಾಧಿಕಾರಿಗಳ ಕಛೇರಿಯ 100ಮೀ.ಒಳಗೆ ಕೇವಲ ಮೂರು ವಾಹನಗಳಿಗೆ ಮಾತ್ರ ಪ್ರವೇಶ ಹಾಗೂ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕೊಠಡಿ ಒಳಗೆ ಅಭ್ಯರ್ಥಿಯ ಜೊತೆಗೆ ಇತರ 4 ಮಂದಿಗೆ ಮಾತ್ರವೇ ಅವಕಾಶವಿರುವುದು ಎಂದು ಎಚ್.ಕೆ ಕೃಷ್ಣ ಮೂರ್ತಿ ಹೇಳಿದರು.
ಸಾಮಾಜಿಕ ಜಾಲತಾಣಗಳಿಗೂ ನೀತಿ ಸಂಹಿತೆ:
ವಾಟ್ಸಪ್, ಫೇಸ್ಬುಕ್, ಟ್ವಟ್ಟರ್ ಮೊದಲಾದ ಸಾಮಾಜಿಕ ಜಾಲತಾಣಗಳ ಮೂಲಕ ನಡೆಸುವ ಪ್ರಚಾರಗಳ ಮೇಲೂ ನಿಗಾ ಇಡಲಾಗವುದು. ಇನ್ನೊಬ್ಬರನ್ನು ತೇಜೋವಧೆ ಮಾಡುವುದು, ವೈಯಕ್ತಿಕ ಧ್ವೇಷ, ನಿಂದಿಸುವುದು ಕಂಡುಬಂದಲ್ಲಿ ಅಂತವರ ವಿರುದ್ದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿಲ್ಲಿ ಕ್ರಮಕೈಗೊಳ್ಳಲಾಗವುದು. ಅಪ್ ಲೋಡ್ ಮಾತ್ರವಲ್ಲದೆ ಫಾವರ್ಡ್ ಮಾಡುವುದು ಅಪರಾಧವಾಗಿದೆ ಎಂದು ಎಚ್.ಕೆ ಕೃಷ್ಣ ಮೂರ್ತಿ ಹೇಳಿದರು.
ವಾಹನಗಳಿಗೆ ಮೂಲಪ್ರತಿ ಅಂಟಿಸಿ:
ಚುನಾವಣಾ ಕೆಲಸ ಕಾರ್ಯಗಳಿಗೆ ಪಕ್ಷ ಅಥವಾ ಅಭ್ಯರ್ಥಿಗಳು ಪರವಾಣಿಗೆ ಪಡೆದು ಬಳಸುವ ವಾಹನಗಳಲ್ಲಿ ತಮಗೆ ನೀಡಲಾಗುವ ಹಳದಿ ಬಣ್ಣದ ಮೂಲ ಪ್ರತಿಯನ್ನೇ ಅಂಟಿಸಬೇಕು. ಮೂಲ ಪ್ರತಿಯಿಲ್ಲದ ವಾಹನಗಳ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಸಭೆ ಸಮಾರಂಭಗಳನ್ನು ನಡೆಸಲು 48 ಗಂಟೆಗೆ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು. ಪ್ರಚಾರ ಸಭೆ ನಡೆಸುವಲ್ಲಿ ಬ್ಯಾನರ್ ಅಥವಾ ಬಂಟಿಂಗ್ಸ್ ಗಳನ್ನು ಸಭೆಗೆ 2 ಗಂಟೆ ಮುಂಚಿತವಾಗಿ ಅಳವಡಿಸಿ, ಸಭೆ ಮುಗಿದ 2 ಗಂಟೆಯೊಳಗೆ ತೆರವುಗೊಳಿಸಬೇಕು. ಅನುಮತಿ ಪಡೆದುಕೊಳ್ಳಲು ಸಿಂಗಲ್ ವಿಂಡೋ(ಏಕಗವಾಕ್ಷಿ)ಪದ್ದತಿಯನ್ನು ಪ್ರಾರಂಭಿಸಲಾಗಿದ್ದು ಶೀಘ್ರ ಪರವಾಣಿಗೆ ನೀಡಲಾಗುತ್ತದೆ ಎಂದು ಎಚ್.ಕೆ ಕೃಷ್ಣ ಮೂರ್ತಿ ಹೇಳಿದರು.
ಸುವಿಧಾದಲ್ಲಿ ಅರ್ಜಿ ಸಲ್ಲಿಸಿ
ಚುನಾವಣಾ ಸಂಬಂಧಿಸಿ ಪಕ್ಷ ಹಾಗೂ ಅಭ್ಯರ್ಥಿಗಳ ಪ್ರಚಾರ ಸಭೆಗಳನ್ನು ನಡೆಸಲು ಸುವಿಧಾದ ಮೂಲಕ ಆನ್ಲೈನ್ನಲ್ಲಿ ಅರ್ಜಿಸಲ್ಲಿಸಬಹುದು. ಅಥವಾ ಮ್ಯಾನುವಲ್ ಆಗಿಯೂ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಸಭೆಗೆ 48 ಗಂಟೆ ಮುಂಚಿತವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು. ಚುನಾವಣೆಗೆ ಸಂಬಂಧಿಸಿ ಯಾವುದೇ ಸಂದೇಹಗಳಿದ್ದಲ್ಲಿ ಕೇಳಿ ಮಾಹಿತಿ ನೀಡಲಾಗವುದು ಸಹಾಯಕ ಆಯುಕ್ತರು ಹೇಳಿದರು.
ಸಹಾಯಕ ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್ ಅನಂತ ಶಂಕರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಉಪತಹಶೀಲ್ದಾರ್ ಶ್ರೀಧರ್, ಚುನಾವಣಾ ಶಾಖಾ ನಾಗೇಶ್, ನಗರ ಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್, ಬಿಜೆಪಿ ಪಕ್ಷದ ಶಂಭು ಭಟ್, ಕಾಂಗ್ರೆಸ್ ಪಕ್ಷದಿಂದ ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಉಲ್ಲಾಸ್ ಕೋಟ್ಯಾನ್, ಕೃಷ್ಣ ಪ್ರಸಾದ್ ಆಳ್ವ, ಇಸಾಖ್ ಸಾಲ್ಮರ, ರೋಷಣ್ ರೈ ಬನ್ನೂರು, ಜೆಡಿಎಸ್ ಪಕ್ಷದಿಂದ ಇಬ್ರಾಹಿಂ ಗೋಳಿಕಟ್ಟೆ ಸಭೆಯಲ್ಲಿ ಉಪಸ್ಥಿತರಿದ್ದರು.