ಮುನಿಯಾಲು ಉದಯ ಶೆಟ್ಟಿಗೆ ಕೈ ತಪ್ಪಿದ ಕಾರ್ಕಳ ಟಿಕೆಟ್: ಬೆಂಬಲಿಗರಿಂದ ಹೆಬ್ರಿಯಲ್ಲಿ ಪ್ರತಿಭಟನೆ

ಹೆಬ್ರಿ, ಎ.17: ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಇವರಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹೆಬ್ರಿ ಕುಬೇರಾ ಕಟ್ಟಡದಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರ ನಾಯಕರಾಗಿ ಬೆಳೆದ ವೀರಪ್ಪಮೊಯ್ಲಿ ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸದೆ, ನಮ್ಮೆಲ್ಲರ ಒಮ್ಮತದ ಅಭ್ಯರ್ಥಿಗೆ ಟಿಕೆಟ್ ನೀಡದೆ ಸೀಟು ತಪ್ಪಿಸಿ ಕಾರ್ಯಕರ್ತರಿಗೆ ದ್ರೋಹವೆಸಗಿದ್ದಾರೆ. ಉದಯ ಕುಮಾರ್ ಶೆಟ್ಟಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿ ಪಕ್ಷ ಸಂಘಟಿಸಿ, ಯುವ ಪಡೆಯನ್ನು ನಿರ್ಮಾಣ ಮಾಡಿದ್ದರು. ಇನ್ನು 4 ದಿನಗಳ ಕಾಲಾವಕಾಶವಿದ್ದು ಕಾರ್ಯಕರ್ತರ ಅಭ್ಯರ್ಥಿಯಾದ ಉದಯ ಕುಮಾರ್ ಶೆಟ್ಟಿಯವರಿಗೆ ಪಕ್ಷದ ಬಿ ಫಾರ್ಮ್ ನೀಡಬೇಕು ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ನ ನವೀನ್ ಅಡ್ಯಂತಾಯ ಒತ್ತಾಯಿಸಿದರು.
ನಮ್ಮೆಲ್ಲರ ಒಮ್ಮತದ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರಿಗೇ ಟಿಕೆಟ್ ನೀಡಬೇಕು. ಟಿಕೆಟ್ ನೀಡದೆ ಅನ್ಯಾಯ ಮಾಡಿದರೆ ಉಡುಪಿ ಜಿಲ್ಲಾಯಾದ್ಯಂತ ಕಾಂಗ್ರೆಸ್ ವಿರುದ್ಧ ಬೃಹತ್ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಮುಖಂಡ ಎಚ್.ಪ್ರವೀಣ್ ಬಲ್ಲಾಳ್ ಎಚ್ಚರಿಸಿದರು.
ನಾಡ್ಪಾಲು ವೆಂಕಟೇಶ ಶೆಟ್ಟಿ, ರಂಗನಾಥ ಪೂಜಾರಿ ಮಾತನಾಡಿ ಕಾರ್ಕಳ ಕ್ಷೇತ್ರದ 203 ಬೂತ್ಗಳ ಪೈಕಿ 190 ಬೂತ್ಗಳಲ್ಲಿ ಉದಯ ಕುಮಾರ್ ಶೆಟ್ಟಿ ಅವರೇ ಗೆಲ್ಲುವ ಸೂಚನೆ ಇದ್ದು, ಅವರಿಗೆ ಟಿಕೆಟ್ ನೀಡದಿದ್ದರೆ ನಾವೆಲ್ಲರೂ ಕಾಂಗ್ರೆಸ್ ತ್ಯಜಿಸಿ ಪಕ್ಷೇತರರಾಗಿ ಹೋರಾಟ ಮಾಡುತ್ತೇವೆ. ಉಡುಪಿ ಜಿಲ್ಲಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ನಾಡ್ಪಾಲು ವೆಂಕಟೇಶ ಶೆಟ್ಟಿ, ರಂಗನಾಥ ಪೂಜಾರಿ ಮಾತನಾಡಿ ಕಾರ್ಕಳ ಕ್ಷೇತ್ರದ 203 ಬೂತ್ಗಳ ಪೈಕಿ 190 ಬೂತ್ಗಳಲ್ಲಿ ಉದಯ ಕುಮಾರ್ ಶೆಟ್ಟಿ ಅವರೇ ಗೆಲ್ಲುವ ಸೂಚನೆ ಇದ್ದು, ಅವರಿಗೆ ಟಿಕೆಟ್ ನೀಡದಿದ್ದರೆ ನಾವೆಲ್ಲರೂ ಕಾಂಗ್ರೆಸ್ ತ್ಯಜಿಸಿ ಪಕ್ಷೇತರರಾಗಿ ಹೋರಾಟ ಮಾಡುತ್ತೇವೆ. ಉಡುಪಿ ಜಿಲ್ಲಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು. ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬಲಿಕೊಡಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು, 'ಮೊಯ್ಲಿ ಹಟಾವೋ... ಕಾಂಗ್ರೆಸ್ ಬಚಾವೋ....,' ಎಂದು ಮೊಯ್ಲಿಗೆ ಧಿಕ್ಕಾರದ ಘೋಷಣೆಗಳನ್ನು ಕಾರ್ಯಕರ್ತರು ಕೂಗಿದರು.
ಹೆಬ್ರಿ ಗ್ರಾಪಂ ಮಾಜಿ ಅಧ್ಯಕ್ಷ ಗುಳಿಬೆಟ್ಟು ಸುರೇಶ್ ಶೆಟ್ಟಿ, ಪಕ್ಷದ ಪ್ರಮುಖರಾದ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಚಿರಂಜಿತ್ ಅಜಿಲ, ಜಗದೀಶ ಹೆಗ್ಡೆ, ತಾಪಂ ಸದಸ್ಯ ಸುಧಾಕರ ಶೆಟ್ಟಿ, ಬೇಳಂಜೆಯ ರೋಶನ್ ಕುಮಾರ್ ಶೆಟ್ಟಿ, ಭೂತುಗುಂಡಿ ಕರುಣಾಕರ ಶೆಟ್ಟಿ, ಸೀತಾನದಿ ಧೀರಜ್ ಶೆಟ್ಟಿ, ಗುಳ್ಕಾಡು ಭಾಸ್ಕರ ಶೆಟ್ಟಿ, ಕಾಂಗ್ರೆಸ್ ಮುಖಂಡ ಗೋಪಿನಾಥ್ ಭಟ್ ಮುನಿಯಾಲು ಸೇರಿದಂತೆ ಪಕ್ಷದ ವಿವಿಧ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಿಕೆಟ್ ನೀಡುವ ಭರವಸೆ ಇದೆ...
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮುನಿಯಾಲು ಉದಯ ಶೆಟ್ಟಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ, ಇನ್ನೂ ಸಮಯ ಇದೆ. ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ಶಾಸಕರು ಜಯಗಳಿಸಬೇಕು ಎಂಬ ಆಸೆಯಲ್ಲಿ ನಮ್ಮ ನಾಯಕರಾದ ವೀರಪ್ಪ ಮೊಯ್ಲಿ ಹಾಗೂ ಗೋಪಾಲ ಭಂಡಾರಿ ನನ್ನನ್ನು ಮತ್ತೆ ಕರೆದು ಸೀಟು ಕೊಡುತ್ತಾರೆಂಬ ಭರವಸೆ ಇದೆ. ಕಾರ್ಯಕರ್ತರು ಮತ್ತು ಅಭಿಮಾನಿಗಳು ಯಾರೂ ನಿರಾಶರಾಗಬಾರದು ಎಂದು ಮನವಿ ಮಾಡಿದರು.
ಪುತ್ರ ವ್ಯಾಮೋಹ ಬಿಡಿ, ಪಕ್ಷ ವ್ಯಾಮೋಹ ಇರಲಿ
ರಾಷ್ಟ್ರೀಯ ಮಟ್ಟದ ಕಾಂಗ್ರೆಸಿನ ಹಿರಿಯ ಪ್ರಭಾವಿ ನಾಯಕರಾದ ವೀರಪ್ಪಮೊಯ್ಲಿ ಪುತ್ರ ವ್ಯಾಮೋಹ ಬಿಟ್ಟು ಪಕ್ಷದಿಂದ ಎಲ್ಲರ ಒಮ್ಮತದ ಅಭ್ಯರ್ಥಿಯಾಗಿರುವ ಮುನಿಯಾಲು ಉದಯ ಶೆಟ್ಟಿ ಅವರಿಗೆ ಕಾರ್ಕಳದಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವಂತೆ ಪ್ರಯತ್ನಿಸಬೇಕು ಎಂದು ಬೆಂಗಳೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಜಪ್ತಿ ಸಂತೋಷ ಕುಮಾರ್ ಶೆಟ್ಟಿ ಒತ್ತಾಯಿಸಿದರು.
ಅಭಿಮಾನಿಯಿಂದ ಆತ್ಮಾಹುತಿ ಪ್ರಯತ್ನ
ಪ್ರತಿಭಟನಾ ಸಭೆ ನಡೆಯುವ ಸಂದರ್ಭದಲ್ಲಿ ಉದಯ ಶೆಟ್ಟಿ ಅಭಿಮಾನಿ ಎನ್ನಲಾದ ಮುರತಂಗಡಿಯ ಆಸೀಫ್ ಎಂಬವರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ಅಲ್ಲಿದ್ದವರು ತಕ್ಷಣ ಮಧ್ಯಪ್ರವೇಶಿಸಿ ಅವರನ್ನು ತಡೆಯುವಲ್ಲಿ ಯಶಸ್ವಿಯಾದರು.
ತಾನು ಸಾಣೂರು ಮುರತಂಗಡಿ ನಿವಾಸಿಯಾಗಿದ್ದು, ಉದಯ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಕೈತಪ್ಪಿರುವುದರಿಂದ ತೀವ್ರ ಬೇಸರವಾಗಿದ್ದು, ಇದರಿಂದ ನೊಂದು ಈ ಕೃತ್ಯಕ್ಕೆ ಮುಂದಾದೆ ಎಂದವರು ಹೇಳಿಕೊಂಡರು.