ದ.ಕ.: ಬಸವೇಶ್ವರ ಜಯಂತಿ ಆಚರಣೆ

ಮಂಗಳೂರು, ಎ.18: ದ.ಕ., ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ನಗರದ ತುಳುಭವನದಲ್ಲಿ ಇಂದು ಬಸವೇಶ್ವರ ಜಯಂತಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಸವಣ್ಣನವರು ವಚನಗಳ ಮೂಲಕ ಬದುಕಿಗೆ ಪೂರಕವಾದ ಚಿಂತನೆಗಳನ್ನು ನೀಡಿದ್ದಾರೆ. ಕಬ್ಬಿಣದ ಕಡಲೆಯಾಗಿದ್ದ ಜೀವನ ಧರ್ಮದ ನಡೆ, ಅನುಭವ ಕಥನಗಳನ್ನು ಜನರಿಗೆ ಅನುಕೂಲಕರ ಮಾತುಗಳ ಮೂಲಕ ಬೋಧಿಸಿದ್ದಾರೆ ಎಂದರು.
ಬಸವಣ್ಣ ಕೇವಲ ನಮ್ಮ ಸಮಾಜ, ರಾಜ್ಯ, ರಾಷ್ಟ್ರಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಇಡೀ ಮನುಕುಲ ಪೂಜ್ಯ ಭಾವದಿಂದ ಕಾಣಬೇಕಾದ ದಾರ್ಶನಿಕರು. ಅವರ ತತ್ವಗಳನ್ನು ನಮ್ಮದಾಗಿಸಿದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದವರು ಹೇಳಿದರು. ಪ್ರಸ್ತುತ ಚುನಾವಣಾ ಸಮಯವಾಗಿದ್ದು, ಕರ್ಮ ತತ್ವವನ್ನು ನಂಬುವ ನಾವು ಯೋಗ್ಯ ಜನನಾಯಕರನ್ನು ಆಯ್ಕೆ ಮಾಡಲು ಬಸವತತ್ವ ಅನುಸರಿಸಬೇಕು ಎಂದು ಕಲ್ಕೂರ ಹೇಳಿದರು.
ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಚೆನ್ನಯ್ಯ ಸ್ವಾಮಿ, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ನಿರ್ಮಲಾ ಚಂದ್ರಶೇಖರ್, ಡಯಟ್ ಹಿರಿಯ ಉಪನ್ಯಾಸಕಿ ಚಂದ್ರಪ್ರಭಾ, ರಾಜೇಶ್ ಜಿ. ಉಪಸ್ಥಿತರಿದ್ದರು.