ಎ. 22ರಂದು ಕಾಂಗ್ರೆಸ್ನಿಂದ ಜನಾಶೀರ್ವಾದ ಸಮಾವೇಶ: ಸಚಿವ ಪ್ರಮೋದ್
ಉಡುಪಿ, ಎ.18: ಜಿಲ್ಲಾ ಕಾಂಗ್ರೆಸ್, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಎ.22ರಂದು ಅಪರಾಹ್ನ 2:30ಕ್ಕೆ ಉಡುಪಿ ಕಲ್ಸಂಕದ ರಾಯಲ್ ಗಾರ್ಡನ್ನಲ್ಲಿ ಬೃಹತ್ ಜನಾಶೀರ್ವಾದ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಡುಪಿಯ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ 20,000 ಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶ ದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬೈಂದೂರಿನ ಕೆ.ಗೋಪಾಲ ಪೂಜಾರಿ, ಪ್ರತಾಪ್ಚಂದ್ರ ಶೆಟ್ಟಿ, ಗೋಪಾಲ ಭಂಡಾರಿ, ರಾಕೇಶ್ ಮಲ್ಲಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಎಂ.ಎ.ಗಫೂರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಇದೇ ವೇಳೆ ಎ.21ರಂದು ಬೈಂದೂರು ಹಾಗೂ ಶಿರ್ವಗಳಲ್ಲಿ ಗೋಪಾಲ ಪೂಜಾರಿ ಹಾಗೂ ವಿನಯಕುಮಾರ್ ಸೊರಕೆ ಆಯೋಜಿಸುವ ಸಮಾವೇಶದಲ್ಲಿ ತಾವು ಪಾಲ್ಗೊಳ್ಳುವುದಾಗಿ ಅವರು ತಿಳಿಸಿದರು.
ಎ. 23ಕ್ಕೆ ನಾಮಪತ್ರ ಸಲ್ಲಿಕೆ: ಮೇ12ರಂದು ನಡೆಯುವ ವಿಧಾನಸಭಾ ಚುನಾವಣೆಗಾಗಿ ತಾನು ಉಡುಪಿಯಲ್ಲಿ ಎ.23ರ ಸೋಮವಾರ ನನ್ನ ನಾಮಪತ್ರ ಸಲ್ಲಿಸುವುದಾಗಿ ಪ್ರಮೋದ್ ತಿಳಿಸಿದರು.
ಉಡುಪಿಯಲ್ಲಿ ತನ್ನ ಎದುರಾಳಿ ಯಾರೆಂಬುದರ ಬಗ್ಗೆ ನಾನು ತಲೆಕೆಡಿಸಿ ಕೊಂಡಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನನಗೆ ನನ್ನ ಕ್ಷೇತ್ರದ ಮತದಾರರ ಬಗ್ಗೆ ಶೇ.100ರಷ್ಟು ಭರವಸೆ ಇದೆ. ಈವರೆಗೆ ಕ್ಷೇತ್ರದಲ್ಲಿ ಮಾಡಿದ ಜನಸೇವೆ, ಸಂಘಟನೆ, ನಡೆಸಿದ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಿದೆ. ಹೀಗಾಗಿ ಯಾರನ್ನೇ ನನ್ನ ಎದುರಾಳಿಯಾಗಿ ನಿಲ್ಲಿಸಿದರೂ ನಾನು ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಈವರೆಗೆ ನಾನು ನಾಲ್ಕು ಚುನಾವಣೆಗಳನ್ನು ಎದುರಿಸಿದ್ದೇನೆ. ಪ್ರತಿಬಾರಿಯೂ ನನ್ನ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಮತ್ತು ಪಕ್ಷವನ್ನು ನಾನು ಗೌರವಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತನ್ನ ಬಗ್ಗೆ ಕಾರ್ಯಕರ್ತರ ಅಸಮಧಾನ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಪಕ್ಷದ ಸಭೆಯಲ್ಲೂ ಯಾರು ಸಹ ನನ್ನ ಬಗ್ಗೆ ದೂರಿಲ್ಲ ಎಂದರು.
ಕಾರ್ಕಳದ ಪಕ್ಷದ ಟಿಕೆಟ್ಗಾಗಿ ನಡೆದಿರುವ ವಿವಾದದ ಕುರಿತು ಅವರ ಗಮನ ಸೆಳೆದಾಗ, ಟಿಕೆಟ್ ಪ್ರಕಟವಾದ ಆಕಾಂಕ್ಷಿಗಳ, ಕಾರ್ಯಕರ್ತರ ಇಂಥ ಸಮಧಾನ, ಸಿಟ್ಟು ಎಲ್ಲಾ ಪಕ್ಷಗಳಲ್ಲೂ ಸಾಮಾನ್ಯ. ಇದರ ಬಗ್ಗೆ ಹೈಕಮಾಂಡ್ ಸೂಕ್ತ ಕ್ರಮ ಕೈಗೊಂಡು ವಿವಾದ ಬಗೆಹರಿಸಲಿದೆಎಂಬ ವಿಶ್ವಾಸವಿದೆ ಎಂದರು.
ಈ ಬಾರಿಯ ಚುನಾವಣಾ ಪ್ರಣಾಳಿಕೆಯ ಕುರಿತು ಕೇಳಿದಾಗ, ಉಡುಪಿ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ವಾರಾಹಿ ನೀರನ್ನು ಉಡುಪಿಗೆ ತರುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇನ್ನು ಬ್ರಹ್ಮಾವರದಲ್ಲಿ ಮೆಡಿಕಲ್ ಕಾಲೇಜು, ಹೈಟೆಕ್ ಆಸ್ಪತ್ರೆಯ ಸ್ಥಾಪನೆ, ತೆಂಕನಿಡಿಯೂರು ಮತ್ತು ಚಾಂತಾರುಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದೊಂದಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, 94ಸಿ, ಸಿಸಿ ಹಕ್ಕುಪತ್ರಗಳ ವಿತರಣೆಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗುವುದು ಎಂದರು.
ಚುನಾವಣೆಯ ಕುರಿತಂತೆ ಜನರಲ್ಲಿ ಉತ್ಸಾಹದ ಕೊರತೆಗೆ ಕಾರಣವನ್ನು ಕೇಳಿದಾಗ, ಈ ಬಾರಿ ನೀತಿಸಂಹಿತೆಯನ್ನು ಬಿಗುವಾಗಿ ಅನುಷ್ಠಾನಗೊಳಿಸು ತ್ತಿರುವುದು ಒಂದು ಕಾರಣವಾಗಿರಬಹುದು ಎಂದರು. ಇದರಿಂದ ಜನ ಹೆದರಿದ್ದಾರೆ. ಆದರೆ ಇದರಿಂದ ಮತದಾನದ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದೂ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಸಿಎಂಸಿ ಅಧ್ಯಕ್ಷೆ ಮೀನಾಕ್ಷಿ ಮಾಧವ, ನರಸಿಂಹಮೂರ್ತಿ, ಜನಾರ್ದನ ಭಂಡಾರ್ಕರ್, ಸತೀಶ್ ಅಮೀನ್ ಪಡುಕೆರೆ, ದಿನೇಶ್ ಪುತ್ರನ್, ದಿವಾಕರ ಕುಂದರ್ ಹಾಗೂ ಹರೀಶ್ ಕಿಣಿ ಉಪಸ್ಥಿತರಿದ್ದರು.