"ತನ್ನನ್ನು ಆಯ್ಕೆ ಮಾಡಿ ಐಪಿಎಲ್ ನ್ನು ಉಳಿಸಿದರು"
ಪಂಜಾಬ್ ಮುಖ್ಯ ಕೋಚ್ ಸೆಹ್ವಾಗ್ ಗೆ ಕೃತಜ್ಞತೆ ಸಲ್ಲಿಸಿದ ಗೇಲ್
ಹೊಸದಿಲ್ಲಿ, ಎ.20: ಐಪಿಎಲ್ ಆಟಗಾರರ ಹರಾಜಿನಲ್ಲಿ ಮೊದಲ ಸುತ್ತಿನಲ್ಲಿ ಯಾವ ಫ್ರಾಂಚೈಸಿಗೂ ಬೇಡವಾಗಿದ್ದ ವೆಸ್ಟ್ಇಂಡೀಸ್ನ ದೈತ್ಯ ದಾಂಡಿಗ ಕ್ರಿಸ್ ಗೇಲ್ ಕೊನೆಗೂ ಮುಖ್ಯ ಕೋಚ್ ವೀರೇಂದ್ರ ಸೆಹ್ವಾಗ್ ಒತ್ತಾಯದ ಮೇರೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಳಯ ಸೇರಿಕೊಂಡಿದ್ದರು. ಇದೀಗ ಪಂಜಾಬ್ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ಗೇಲ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಲ್ಲದೆ, ಈವರ್ಷದ ಐಪಿಎಲ್ನಲ್ಲಿ ತನಗೆ ಅವಕಾಶ ನೀಡಿದ ಸೆಹ್ವಾಗ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ
‘‘ನಾನು ಐಪಿಎಲ್ನಲ್ಲಿ ಪ್ರತಿನಿಧಿಸಿದ ಎಲ್ಲ ಫ್ರಾಂಚೈಸಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದೇನೆ. ಪಂಜಾಬ್ ನನಗೆ ಹೊಸ ಫ್ರಾಂಚೈಸಿ. ಹಲವು ಜನರು ಗೇಲ್ಗೆ ಸಾಬೀತುಪಡಿಸಲು ಸಾಕಷ್ಟಿದೆ ಎಂದು ಗೇಲಿ ಮಾಡಿದ್ದರು. ಆಟಗಾರರ ಹರಾಜಿನಲ್ಲಿ ನನ್ನನ್ನು ಆರಂಭದಲ್ಲಿ ಯಾರೂ ಆಯ್ಕೆ ಮಾಡಿರಲಿಲ್ಲ. ಸೆಹ್ವಾಗ್ ನನ್ನನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ನ್ನು ಉಳಿಸಿದ್ದಾರೆ. ಒಂದು ವೇಳೆ ಗೇಲ್ ಎರಡು ಪಂದ್ಯಗಳನ್ನು ಗೆದ್ದುಕೊಟ್ಟರೆ ಹಾಕಿದ ಹಣ ವಾಪಾಸು ಬರುತ್ತದೆ. ಎಂದು ವೀರೂ ಸಂದರ್ಶನದಲ್ಲಿ ಹೇಳಿದ್ದರು. ಮುಂದೇನಾಗುತ್ತದೆ ಎಂದು ನೋಡಿ ಎಂದು ವೀರೂಗೆ ಹೇಳಲು ನಾನು ಬಯಸುತ್ತೇನೆ'' ಎಂದು 38ರ ಹರೆಯದ ಗೇಲ್ ಹೇಳಿದ್ದಾರೆ.
ಗೇಲ್ ಸನ್ರೈಸರ್ಸ್ ಹೈದರಾಬ್ ವಿರುದ್ಧದ ಪಂದ್ಯದಲ್ಲಿ ಕೇವಲ 63 ಎಸೆತಗಳಲ್ಲಿ ಔಟಾಗದೆ 104 ರನ್ ಗಳಿಸಿದರು. ಈ ವರ್ಷದ ಐಪಿಎಲ್ನಲ್ಲಿ ಶತಕ ಸಿಡಿಸಿದ ಮೊದಲಿಗ ಎನಿಸಿಕೊಂಡಿದ್ದರು. ಐಪಿಎಲ್ನಲ್ಲಿ ಆರನೇ ಶತಕ ಸಿಡಿಸಿದ್ದ ಗೇಲ್, ಪಂಜಾಬ್ 15 ರನ್ನಿಂದ ಗೆಲ್ಲಲು ಕಾರಣರಾಗಿದ್ದರು.
ಪಂಜಾಬ್ಗೆ ಟೂರ್ನಿಯಲ್ಲಿ ಮೂರನೇ ಗೆಲುವು ತಂದುಕೊಟ್ಟಿದ್ದ ಗೇಲ್ ‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾಗಿದ್ದರು.