ಅಶ್ರಫ್ ಕಲಾಯಿ, ಜಲೀಲ್ ಕರೋಪಾಡಿ ಹತ್ಯಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಹರಿಕೃಷ್ಣ ಬಂಟ್ವಾಳ

ಬಂಟ್ವಾಳ, ಎ. 20: ಅಶ್ರಫ್ ಕಲಾಯಿ ಹಾಗೂ ಜಲೀಲ್ ಕರೋಪಾಡಿ ಹತ್ಯಾ ಪ್ರಕರಣಗಳನ್ನು ಸಿಬಿಐ ತನಿಖೆ ಒಪ್ಪಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಮೂಲಕ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ಬಿಜೆಪಿಯ ಬಂಟ್ವಾಳ ಅಭ್ಯರ್ಥಿ ರಾಜೇಶ್ ನಾಯ್ಕಾ ಉಳಿಪ್ಪಾಡಿಗುತ್ತು ಅವರ ಚುನಾವಣಾ ನಾಮಪತ್ರ ಸಲ್ಲಿಕೆಯ ಪೂರ್ವ ಭಾವಿಯಾಗಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶರತ್ ಮಡಿವಾಳ, ಪ್ರಶಾಂತ್ ಪೂಜಾರಿ, ದೀಪಕ್, ಅಶ್ರಫ್ ಕಲಾಯಿ, ಅದೇ ರೀತಿ ತನ್ನ ಮಿತ್ರನಾದ ಅಬ್ದುಲ್ ಜಲೀಲ್ ಹತ್ಯೆಯೂ ತನಗೆ ಬೇಸರ ತಂದಿದೆ. "ತನ್ನ ಮಗನನ್ನು ಕೊಂದದ್ದು, ಹಾಗೂ ಅದಕ್ಕೆ ಪ್ರೇರಣೆ ನೀಡಿದ್ದು, ಈ ಕ್ಷೇತ್ರದ ಸಚಿವರು" ಎಂದು ತನ್ನ ಮಿತ್ರ ಉಸ್ಮಾನ್ ಕರೋಪಾಡಿ ಅವರು ಬೆರಳು ತೋರಿಸಿ ಅಳಲನ್ನು ತೋರ್ಪಡಿಸಿಕೊಂಡರೂ, ಇದುವರೆಗೂ ಆರೋಪಿಗಳ ಬಂಧನವಾಗದಿರುವುದು ಖೇದಕರ ಎಂದ ಹರಿಕೃಷ್ಣ ಬಂಟ್ವಾಳ, ಇದರಿಂದ ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದಾಗ ಇದರ ಹಿಂದಿರುವ ನೈಜ ದುಷ್ಕರ್ಮಿಗಳು ಯಾರೆಂಬುವುದು ಬಂಟ್ವಾಳದ ಜನತೆಗೆ ಗೊತ್ತಾಗಲಿದೆ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಬಂಟ್ವಾಳವನ್ನು ಬಿಜೆಪಿ ಗೆದ್ದರೆ ಉಳಿದ ಏಳು ಸ್ಥಾನಗಳನ್ನೂ ಗೆದ್ದಂತೆ. ರಾಜ್ಯ ಮಟ್ಟದಲ್ಲಿ ಬಿಜೆಪಿ ಬಂಟ್ವಾಳದ ವಿಜಯದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಬಂಟ್ವಾಳ ಗೆದ್ದರೆ ಜಿಲ್ಲೆ ಮಾತ್ರವಲ್ಲ, ಕರ್ನಾಟಕವೇ ಗೆದ್ದಂತೆ ಎಂದು ಹೇಳಿದರು.
ರಮಾನಾಥ ರೈ ಮನೆಯಲ್ಲಿ ಕುಳಿತುಕೊಳ್ಳುವ ಕಾಲ ಬಂದಿದೆ. ಮಂತ್ರಿಯಾಗಿ, ಶಾಸಕರಾಗಿ ರಮಾನಾಥ ರೈ ಸಂಪೂರ್ಣ ವಿಫಲರಾಗಿದ್ದಾರೆ ಎಂದ ನಳಿನ್, ಈ ಬಾರಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಜಯಗಳಿಸಲಿದೆ ಎಂದು ನಳಿನ್ ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದ್ದು, ಬಂಟ್ವಾಳದಲ್ಲೂ ಗೆಲ್ಲಿಸಬೇಕಾಗಿದೆ. ಗೆದ್ದರೆ ರಾಜಧರ್ಮ ಪಾಲಿಸುತ್ತೇನೆ, ಪಕ್ಷದ ಕಾರ್ಯಕರ್ತರಿಗೆ ಆದ ಅನ್ಯಾಯ ಸರಿಪಡಿಸುತ್ತೇನೆ ಎಂದರು. ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿದರು.
ವೇದಿಕೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಪ್ರಮುಖರಾದ ಮೋನಪ್ಪ ಭಂಡಾರಿ, ಪದ್ಮನಾಭ ಕೊಟ್ಟಾರಿ, ಜಿ. ಆನಂದ, ಜಿತೇಂದ್ರ ಕೊಟ್ಟಾರಿ, ಕಮಲಾಕ್ಷಿ ಪೂಜಾರಿ, ಸುಲೋಚನಾ ಭಟ್, ಸುಗುಣ ಕಿಣಿ, ತುಂಗಪ್ಪ ಬಂಗೇರ, ಕೇರಳ ಬಿಜೆಪಿ ಮುಖಂಡ ಕೆ. ಸುರೇಂದ್ರನ್, ಬೃಜೇಶ್ ಚೌಟ ಉಪಸ್ಥಿತರಿದ್ದರು.
ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿದರು.
ಭ್ರಮೆ ಬಿಡಿ
ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಕಾಲು ಹಿಡಿದರೆ ಬಿಲ್ಲವ ಸಮಾಜವೇ ನಿಮ್ಮ ಬಳಿಗೆ ಬರುತ್ತದೆ ಎಂಬ ಭ್ರಮೆ ಬಿಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ನ ಪ್ರಮುಖ ನಾಯಕರು ಇದೇ ಜನಾರ್ದನ ಪೂಜಾರಿ ಅವರ ಮನೆ ಬಳಿ ಐದೈದು ಬಾರಿ ಓಡಾಡಿದರೂ ಪೂಜಾರಿಯವರ ನೆನಪಾಗಲಿಲ್ಲ, ಕಾಂಗ್ರೆಸ್ ಸಮಾವೇಶ ನಡೆಸಿದಾಗಲೂ ಜನಾರ್ದನ ಪೂಜಾರಿ ನೆನಪಾಗಲಿಲ್ಲ. ಆದರೆ ನಾಮಪತ್ರ ಸಲ್ಲಿಕೆ ವೇಳೆ ಪೂಜಾರಿ ಮನೆ ಭೇಟಿಗಳು ನಡೆಯುತ್ತಿವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಎಂದು ಆರೋಪಿಸಿದರು.