ವಿಶೇಷ ಪಿಪಿಗೆ ಸೂಕ್ತ ಭದ್ರತೆ: ಎಸ್ಪಿಗೆ ಕೋರ್ಟ್ ಮರು ಆದೇಶ
ಉಡುಪಿ ನ್ಯಾಯಾಲಯದಲ್ಲಿ ಶೂ ಎಸೆತ ಪ್ರಕರಣ

ಉಡುಪಿ, ಎ.20: ಉಡುಪಿ ನ್ಯಾಯಾಲಯದಲ್ಲಿ ಶೂ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಮತ್ತೊಮ್ಮೆ ಆದೇಶ ನೀಡಿದ್ದಾರೆ.
ಎ.12ರಂದು ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಅಪರಾಧಿ ಪ್ರಶಾಂತ್ ಕುಲಾಲ್ ಅಭಿಯೋಜನ ಪರ ವಾದಿಸಿದ್ದ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಮೇಲೆ ತನ್ನ ಕಾಲಿನಲ್ಲಿದ್ದ ಎರಡು ಶೂಗಳು ಎಸೆದು ಕೊಲೆ ಬೆದರಿಕೆಯೊಡ್ಡಿದ್ದನು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ವಿಶೇಷ ಸರಕಾರಿ ಅಭಿಯೋಜಕರಿಗೆ ಭದ್ರತೆ ಒದಗಿಸುವಂತೆ ಅದೇ ಸಂದರ್ಭ ದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆದೇಶ ನೀಡಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಈ ಕೃತ್ಯದ ಹಿಂದೆ ಬೇರೆ ವ್ಯಕ್ತಿಗಳು ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವಿಜಯ ವಾಸು ಪೂಜಾರಿ, ಪ್ರಕರಣದ ಆರೋಪಿಯನ್ನು ಪೊಲೀಸ್ ಕಸ್ಟಡಿ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಬೇಕು ಮತ್ತು ಅಗತ್ಯ ಕಂಡುಬಂದಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಎ.16ರಂದು ಉಡುಪಿ ನಗರ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಘಟನೆ ನಡೆದು ವಾರ ಕಳೆದರೂ ಭದ್ರತೆ ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಜಿಲ್ಲಾ ಎಸ್ಪಿಯವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿರುವ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ, ಈ ಹಿಂದೆ ನೀಡಿದ ಆದೇಶವನ್ನು ಸಮರ್ಪಕವಾಗಿ ಪಾಲಿಸುವಂತೆ ಎಸ್ಪಿಯವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಎ.19ರಂದು ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ಈ ಮನವಿಯನ್ನು ಪರಿಶೀಲಿಸಿದ ನ್ಯಾಯಾಧೀಶ ವೆಂಕೇಶ್ ನಾಯ್ಕಾ, ವಿಶೇಷ ಸರಕಾರಿ ಅಭಿಯೋಜಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಎಸ್ಪಿಯವರಿಗೆ ಮರು ಆದೇಶ ನೀಡಿ, ಅದರ ಪ್ರತಿಯನ್ನು ಮಂಗಳೂರು ಪಶ್ಚಿಮ ವಲಯ ಐಜಿಪಿಯವರಿಗೂ ಕಳುಹಿಸುವಂತೆ ಸೂಚನೆ ನೀಡಿದರು.
‘ನ್ಯಾಯಾಲಯದಲ್ಲೇ ನನ್ನ ಮೇಲೆ ಶೂ ಎಸೆದು ಕೊಲೆ ಬೆದರಿಕೆಯೊಡ್ಡಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿ ನನಗೆ ಇನ್ನು ಸರಿಯಾಗಿ ಭದ್ರತೆಯನ್ನು ಪೊಲೀಸ್ ಇಲಾಖೆ ಒದಗಿಸಿಲ್ಲ. ನನಗೆ ಇದರಲ್ಲಿ ಸರಿಯಾಗಿ ನ್ಯಾಯ ಸಿಗದಿದ್ದರೆ ಮುಂದೆ ಹೈಕೋರ್ಟ್ ಮೆಟ್ಟಿಲೇರಲಾಗುವುದು’ ಎಂದು ವಿಜಯ ವಾಸು ಪೂಜಾರಿ ತಿಳಿಸಿದ್ದಾರೆ.