ವಿರಾಜಪೇಟೆ ವಿಧಾನಸಭಾ ಕ್ಷೇತ್ರ: ಸಂತ್ರಸ್ತರೊಂದಿಗೆ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ
ಮಡಿಕೇರಿ,ಎ.21: ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಅವರು ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಸಂದರ್ಭ ಕಾಡಾನೆ, ಹುಲಿ ದಾಳಿಗೆ ತುತ್ತಾದ ಸಂತ್ರಸ್ತರು, ವಿಧವೆಯರಾದ ಬಸವಿ, ಲಕ್ಷ್ಮಿ, ಕೃಷ್ಣಮ್ಮ ಹಾಗೂ ಲಕ್ಷ್ಮಿ ರಮೇಶ್ ಜೊತೆಯಲ್ಲಿದ್ದದ್ದು ವಿಶೇಷ.
ಸಂಕೇತ್ ಆಸ್ತಿ
ಒಟ್ಟು ಆಸ್ತಿ; ರೂ. 11ಕೋಟಿ 65ಲಕ್ಷ, ಸಾಲ ರೂ. 59,96,630. 30 ಎಕರೆ ಕಾಫಿ ತೋಟವಿದ್ದು, ಇದರ ಮೌಲ್ಯ ರೂ 6.ಕೋಟಿ 40 ಲಕ್ಷ, ಪತ್ನಿ ಹೆಸರಿನಲ್ಲಿ 40,000 ಠೇವಣಿ, ಮಗ ವಿವೇಕ್ನ ಹೆಸರಿನಲ್ಲಿ ರೂ 4 ಲಕ್ಷ ಠೇವಣಿ, ಚಿನ್ನಾಭರಣ ಮೌಲ್ಯ 16 ಲಕ್ಷ, ಒಂದು ಆರ್.ಡಿ. ಕಾರು ರೂ 37 ಲಕ್ಷ, ಬೋಲೆರೋ ಪಿಕ್ ಅಪ್ ರೂ 6 ಲಕ್ಷ, ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ಎರಡು ಮನೆ, 97ಸೆಂಟು ನಿವೇಶನ ಸೇರಿದಂತೆ ಒಟ್ಟು 11 ಕೋಟಿ 65 ಲಕ್ಷ ಆಸ್ತಿ ಇರುವುದಾಗಿ ಸಂಕೇತ್ ಪೂವಯ್ಯ ಘೋಷಿಸಿಕೊಂಡಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಕೇತ್ ಪೂವಯ್ಯ ಪಕ್ಷದ ಪ್ರಣಾಳಿಕೆಯಂತೆ ರೈತರ ಹಾಗೂ ಬೆಳೆಗಾರರ ಸಾಲವನ್ನು 24 ಗಂಟೆಯೊಳಗೆ ಮನ್ನಾ ಮಾಡಲಾಗುವುದು. ರೈತ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ನೇರ ಸ್ಪಂದನ, ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಆರ್ಥಿಕ ಸಹಾಯದೊಂದಿಗೆ ಸಬಲೀಕರಣ, ಸಮಾಜದ ಬಡವರಿಗೆ ದುರ್ಬಲರಿಗೆ ಆರ್ಥಿಕ ಸಹಾಯ, ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸೂಚಿಸಲಾಗುವುದು ಎಂದರು.
ವಿರಾಜಪೇಟೆ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಸ್.ಎಚ್.ಮತೀನ್, ಎಂ.ಸಿ.ಬೆಳ್ಳಿಯಪ್ಪ ನಾಪೋಕ್ಲಿನ ಮನ್ಸೂರ್ ಆಲಿ, ಮಲಚೀರ ದೇವಯ್ಯ, ವಿಷಿ ದೇವರಾಜು, ಪಿ.ಎ.ಮಂಜುನಾಥ್, ಸುನೀತಾ ಮತ್ತಿತರರು ಹಾಜರಿದ್ದರು.