ಮಂಗಳೂರು: ‘ಏಸ್-ಐಎಎಸ್’ ತರಬೇತಿ ಕೇಂದ್ರ ಉದ್ಘಾಟನೆ

ಮಂಗಳೂರು, ಎ.22: ಕರಾವಳಿ ಕರ್ನಾಟಕದ ಯುವ ಜನತೆಯು ಸರಕಾರಿ ಉದ್ಯೋಗದ ಬಗ್ಗೆ ತೀರಾ ನಿರ್ಲಕ್ಷ್ಯತೆಯನ್ನು ಹೊಂದಿದ್ದು, ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಯುವ ಉದ್ಯಮಿ ಹಾಗೂ ಸಮಾಜ ಸೇವಕ ಮನ್ಸೂರ್ ಅಹ್ಮದ್ (ಅಝಾದ್) ಹೇಳಿದರು.
‘ಏಸ್ ಫೌಂಡೇಶನ್’ ವತಿಯಿಂದ ನಡೆಸಲ್ಪಡುತ್ತಿರುವ ‘ಕರ್ನಿರೆ ಏಸ್’ ಸಿವಿಲ್ ಸರ್ವಿಸ್ ಅಕಾಡಮಿಯು ಮಂಗಳೂರಿನ ಫಳ್ನೀರ್ ರಸ್ತೆಯಲ್ಲಿನ ಲುಲು ಸೆಂಟರ್ನಲ್ಲಿ ಪ್ರಾರಂಭಿಸಿರುವ ‘ಏಸ್-ಐಎಎಸ್’ ಎಂಬ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೀಗ ‘ಏಸ್-ಐಎಎಸ್’ ನಂತಹ ಸಂಸ್ಥೆಗಳು ಆಧುನಿಕ ಸೌಲಭ್ಯದೊಂದಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡುತ್ತಿದ್ದು, ಇಲ್ಲಿನ ಯುವ ಜನತೆಯು ಇದನ್ನು ಸದುಪಯೋಗಿಸಿ ಉನ್ನತ ಮಟ್ಟದ ಸರಕಾರಿ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಸಾದುದ್ದೀನ್ ಸಾಲಿಹಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ಸಾಹೇಬ್ ದುಆಶೀರ್ವಚನ ನೀಡಿದರು. ಸಂಸ್ಥೆಯ ಟ್ರಸ್ಟಿಗಳಾದ ಪಿ.ಬಿ.ಎ. ರಝಾಕ್, ಬಿ.ಎಸ್.ಬಶೀರ್, ಅಬೂಬಕರ್ ಸಿದ್ದೀಕ್, ಫರ್ವೇಝ್ ಅಲಿ, ನಝೀರ್ ಅಹ್ಮದ್ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸಂದರ್ಭ ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿ ಇಮ್ತಿಯಾಝ್ ಖತೀಬ್ ವಂದಿಸಿದರು.