ಬಿಜೆಪಿ ಟಿಕೆಟ್ ಗೊಂದಲ: ಗಡುವು ನೀಡಿದ ಸತ್ಯಜಿತ್ ಸುರತ್ಕಲ್

ಮಂಗಳೂರು, ಎ.23: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿಯೂ ಆಗಿರುವ ಸತ್ಯಜಿತ್ ಸುರತ್ಕಲ್ ಎ. 24ರ ಮಂಗಳವಾರ ಬೆಳಗ್ಗೆ 8 ಗಂಟೆಯೊಳಗೆ ಸೂಕ್ತ ನಿರ್ಧಾರ ತಾಳಬೇಕು ಎಂದು ಬಿಜೆಪಿ ನಾಯಕರಿಗೆ ಗಡುವು ನೀಡಿದ್ದಾರೆ.
ಸತ್ಯಜಿತ್ ಸುರತ್ಕಲ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಹಿರಿಯ ಮುಖಂಡರು ಸೋಮವಾರ ಬೆಳಗ್ಗೆ ಮತ್ತು ಸಂಜೆ ಎರಡು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ, ಈ ಮಾತುಕತೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಮಧ್ಯೆ ವಿಧಾನ ಪರಿಷತ್ ವಿಪಕ್ಷ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಹಾಗೂ ಸಂಘಪರಿವಾರದ ಮುಖಂಡ ನಾ. ಸೀತಾರಾಮ ಅವರು ಸೋಮವಾರ ಸತ್ಯಜಿತ್ ಸುರತ್ಕಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ತಾನು ಕಳೆದ 35 ವರ್ಷಗಳಿಂದ ಪಕ್ಷ ಹಾಗೂ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯೂ ಆಗಿದ್ದೆ. ಟಿಕೆಟ್ ತಪ್ಪಿದ್ದರಿಂದ ನನ್ನ ಮನಸ್ಸಿಗೆ ನೋವಾಗಿದೆ. ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧಿಸಲು ಒತ್ತಡ ಹಾಕುತ್ತಿದ್ದಾರೆ. ಯಾತಕ್ಕಾಗಿ ತನಗೆ ಟಿಕೆಟ್ ತಪ್ಪಿತು ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಮತ್ತು ತನಗೆ ನ್ಯಾಯ ಒದಗಿಸಬೇಕು. ಎ.24ರ ಬೆಳಗ್ಗೆ 8ರೊಳಗೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳದೇ ಇದ್ದರೆ ಹಿರಿಯರು ಹಾಗೂ ಬೆಂಬಲಿಗರ ಜೊತೆ ಚರ್ಚಿಸಿ ತಾನೇ ಒಂದು ನಿರ್ಧಾರಕ್ಕೆ ಬರುವೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದ್ದರೂ ಬಳಿಕ ಮೌನಕ್ಕೆ ಶರಣಾಗಿದ್ದರು. ಸತ್ಯಜಿತ್ ಸುರತ್ಕಲ್ ಬೆಂಬಲಿಗರು ರವಿವಾರ ಸಭೆಯೊಂದನ್ನು ನಡೆಸಿ ಸೋಮವಾರ 10 ಗಂಟೆಯೊಳಗೆ ಸೂಕ್ತ ನಿರ್ಧಾರ ತಾಳಬೇಕು ಎಂದು ಪಕ್ಷದ ಜಿಲ್ಲಾ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದರೂ ಸೋಮವಾರ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಅಸಮಾಧಾನ ಮುಂದುವರಿದಿದ್ದು, ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಕಾರಣ ಸತ್ಯಜಿತ್ ನಾಯಕರ ಮಾತಿಗೆ ಮನ್ನಣೆ ನೀಡುವರೋ ಅಥವಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವರೋ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿಯ ಟಿಕೆಟ್ ಗೊಂದಲ ಮುಂದುವರಿದಿದೆ.