ಶಿಕಾರಿಪುರ: ತಾಲೂಕಿನ ವಿವಿಧೆಡೆ ಯಡಿಯೂರಪ್ಪ ಮಿಂಚಿನ ಚುನಾವಣಾ ಪ್ರಚಾರ

ಶಿಕಾರಿಪುರ,ಎ.25: ತಾಲೂಕಿನಲ್ಲಿ ರೈತರ ಸ್ವಾಭಿಮಾನದ ಬದುಕಿಗೆ ಅಗತ್ಯವಾದ ನೀರಾವರಿ ಸೌಲಭ್ಯ, ವಿದ್ಯುತ್, ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ಪ್ರಮುಖ ಆದ್ಯತೆಯನ್ನು ನೀಡುವುದಾಗಿ ಯಡಿಯೂರಪ್ಪ ಬರವಸೆ ನೀಡಿದರು.
ಬುಧವಾರ ತಾಲೂಕಿನ ಹೊಸೂರು ಹೋಬಳಿಯ 20 ಕ್ಕೂ ಅಧಿಕ ಗ್ರಾಮಗಳಲ್ಲಿ ಮಿಂಚಿನ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 'ಶಾಶ್ವತ ನೀರಾವರಿ ಯೋಜನೆ ತಾಲೂಕಿನ ರೈತರ ಬಹು ಪ್ರಮುಖ ಬೇಡಿಕೆಯಾಗಿದ್ದು, ಈಗಾಗಲೇ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ 1 ಲಕ್ಷ ಕೋಟಿ ಹಣವನ್ನು ಮುಖ್ಯಮಂತ್ರಿಯಾದ ಕೂಡಲೇ ಮೀಸಲಿಡುವುದಾಗಿ ನೀಡಿದ ಬರವಸೆಯನ್ನು ಕಾರ್ಯಗತಗೊಳಿಸಲು ಸಿದ್ದವಿರುವುದಾಗಿ ತಿಳಿಸಿದ ಅವರು, 20 ದಿನದ ನಂತರದಲ್ಲಿ ಮುಖ್ಯಮಂತ್ರಿಯಾಗಿ ತಾಲೂಕಿಗೆ ಆಗಮಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಅಧಿಕವಾಗಿರುವ ಮೆಕ್ಕೆಜೋಳಕ್ಕೆ ಕೇಂದ್ರ 1250 ರೂ. ಬೆಂಬಲ ಬೆಲೆಯನ್ನು ಘೋಷಿಸಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷದಿಂದ ಮಾರುಕಟ್ಟೆ ಆರಂಭವಾಗದೆ. 950-1000 ರೂ.ಗಳಿಗೆ ರೈತರು ಖಾಸಗಿ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿ 1500 ಕ್ಕೆ ಹೆಚ್ಚಿಸಿ ಕೃಷಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ಕೈಗಾರಿಕೆ,ಕಾರ್ಖಾನೆಗಳಿಗೆ ನೀಡಲಾಗುತ್ತಿರುವ ನಿರಂತರ ವಿದ್ಯುತ್ ಕಡಿತಗೊಳಿಸಿ ಪಂಪ್ಸೆಟ್ಗಳಿಗೆ ನಿತ್ಯ ಕನಿಷ್ಠ 10 ಗಂಟೆ ವಿದ್ಯುತ್,ರೈತನ ಬೆಳೆಗೆ ಕೇಂದ್ರ ನಿಗದಿಪಡಿಸಿದ 1.5 ಪಟ್ಟು ಅಧಿಕ ಬೆಲೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಆವರ್ತ ನಿಧಿ ತೆಗೆದು ತುಂಬಿಕೊಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ರೈಲ್ವೆ ಸಂಪರ್ಕ ತಾಲೂಕಿನ ಜನತೆಯ ಬಹು ದೊಡ್ಡ ಬೇಡಿಕೆಯಾಗಿದ್ದು ಈ ದಿಸೆಯಲ್ಲಿ ಶಿವಮೊಗ್ಗ ರಾಣೆಬೆನ್ನೂರಿಗೆ ಶಿಕಾರಿಪುರ ಮಾರ್ಗವಾಗಿ ಸಂಪರ್ಕ ಕಲ್ಪಿಸಲು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಮೂಲಕ ತಿಂಗಳ ಅವಧಿಯಲ್ಲಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದ ಅವರು, ವೃದ್ದಾಪ್ಯ ವಿಧವಾ ವೇತನ 1000 ಕ್ಕೆ ಹೆಚ್ಚಿಸಿ, ಭಾಗ್ಯಲಕ್ಷ್ಮಿ ಬಾಂಡ್ ಪುನಃ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕ ಬಿ.ವೈ ರಾಘವೇಂದ್ರ ಮಾತನಾಡಿ, ತಾಲೂಕಿನ ಸಮಸ್ತ ಜನತೆ ಜಾತಿ ಬೇಧ ಮರೆತು ಪಕ್ಷಕ್ಕೆ ಶಕ್ತಿ ತುಂಬಿದ್ದು ಜನತೆಯ ಆಶೀರ್ವಾದದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಪ್ರತಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ, ನೀರು, ದೇವಾಲಯ ಜೀರ್ಣೋದ್ದಾರಕ್ಕೆ ಶ್ರಮಿಸಿದ್ದಾರೆ. ಭೀಕರ ಬರಗಾಲದಲ್ಲಿ ಜನಜಾನುವಾರುಗಳಿಗೆ ತೊಂದರೆಯಾಗದಂತೆ ಜಲಾಶಯದಿಂದ ಕೆರೆಕಟ್ಟೆ ತುಂಬಿಸುವ ಪ್ರಯತ್ನ ಮಾಡಲಾಗಿದೆ. ಶಾಶ್ವತ ನೀರಾವರಿಗೆ 800 ಕೋಟಿ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ಕೇಂದ್ರದಿಂದ 1 ಸಾವಿರ ಕೋಟಿ ನೆರವಿಗೆ ಮನವಿ ಸಲ್ಲಿಸಲಾಗಿದೆ. ಶಾಶ್ವತ ನೀರಾವರಿಗೆ ಯಡಿಯೂರಪ್ಪ ಸಂಕಲ್ಪ ಕೈಗೊಂಡಿದ್ದು, ರೈತ ನಾಯಕನ ಅಧಿಕಾರಕ್ಕೆ ಸತತ 15 ದಿನ ಕಣ್ಣಿಗೆ ಎಣ್ಣೆ ಹಾಕಿಕೊಂಡು ಶ್ರಮಿಸುವಂತೆ ತಿಳಿಸಿದರು.
ಪ್ರತಿ ಗ್ರಾಮದಲ್ಲಿ ಮಹಿಳೆಯರು ಯಡಿಯೂರಪ್ಪನವರಿಗೆ ಆರತಿ ಬೆಳಗಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸ್ವಾಗತಿಸಿದರು. ಪುರುಷರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮದಲ್ಲಿ ರೋಡ್ಶೋ ನಡೆಸಿದರು. ದೊಡ್ಡತಾಂಡಾ,ಬೆಂಡೆಕಟ್ಟೆ, ಬೇಗೂರು, ಬೈರನಹಳ್ಳಿ, ಬಗನಕಟ್ಟೆ, ಸಂಕ್ಲಾಪುರ ಮತ್ತಿತರ 20 ಕ್ಕೂ ಅಧಿಕ ಗ್ರಾಮಗಳಲ್ಲಿ ಮತಯಾಚಿಸಿದರು. ಈ ಸಂದರ್ಬದಲ್ಲಿ ಮುಖಂಡ ಗುರುಮೂರ್ತಿ,ಕೊಳಗಿ ರೇವಣಪ್ಪ, ಸಣ್ಣ ಹನುಮಂತಪ್ಪ,ರಾಮಾನಾಯ್ಕ,ವಸಂತಗೌಡ,ಟಿ.ಎಸ್ ಮೋಹನ,ಚನ್ನವೀರಪ್ಪ,ಚಾರ್ಗಲ್ಲಿ ಪರಶುರಾಮ,ಗುರುರಾಜ ಜಗತಾಪ್, ಸುಕೇಂದ್ರಪ್ಪ, ರುದ್ರೇಶ್, ಗುರುರಾಜ ಜಕ್ಕಿನಕೊಪ್ಪ ಮತ್ತಿತರರು ಹಾಜರಿದ್ದರು.







