ಕೋಮುವಾದಿ ಪಕ್ಷಗಳನ್ನು ಸೋಲಿಸಲು ಜಾತ್ಯತೀತ ಅಭ್ಯರ್ಥಿಗಳಿಗೆ ಬೆಂಬಲ: ಎಸ್ಡಿಪಿಐ

ಮಂಗಳೂರು, ಎ.26: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವು 2019ರ ಲೋಕಸಭಾ ಚುನಾವಣೆಗೆ ಮುನ್ನುಡಿಯಾಗಲಿದೆ. ಸದ್ಯ ದೇಶದ 29 ರಾಜ್ಯಗಳಲ್ಲಿ 21 ರಾಜ್ಯಗಳು ಕೋಮುವಾದಿ ಪಕ್ಷದ ಕೈವಶವಾಗಿವೆ. ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಡಳಿತ ಹಿಡಿಯಲು ಕೋಮುವಾದಿ ಪಕ್ಷಗಳು ಹರಸಾಹಸಪಡುತ್ತಿವೆ. ಈ ವಿಷಮ ಪರಿಸ್ಥಿತಿಯಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಏಕೈಕ ಉದ್ದೇಶದಿಂದ ಮೇ 12ರ ಚುನಾವಣೆಯಲ್ಲಿ ಪ್ರಬಲ ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸಲು ಎಸ್ಡಿಪಿಐ ತೀರ್ಮಾನಿಸಿದೆ ಎಂದು ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ಸದ್ಯ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲುಗೊಳಿಸುತ್ತಿದೆ. ದೇಶಾದ್ಯಂತ ಅತ್ಯಾಚಾರ, ಗುಂಪು ಹತ್ಯೆ, ಅನೀತಿ, ಅಕ್ರಮಗಳ ಮೂಲಕ ಅರಾಜಕತೆ ಸೃಷ್ಟಿಯಾಗುತ್ತಿದೆ. ಜನ ಪ್ರಾತಿನಿಧ್ಯ ,ನ್ಯಾಯನೀತಿ ವ್ಯವಸ್ಥೆ , ಕಾನೂನ ಪಾಲನೆ, ಆರ್ಥಿಕ ವ್ಯವಸ್ಥೆ, ಇತಿಹಾಸ, ಸಂಸ್ಕೃತಿ, ಸೇರಿದಂತೆ ನಮ್ಮ ದೇಶದ ಸಂವಿಧಾನದ ಮೌಲ್ಯಗಳು ಗಂಭೀರ ಬೆದರಿಕೆಗೆ ಒಳಾಗಾಗಿವೆ. ನೋಟು ಅಮಾನ್ಯೀಕರಣ, ಜಿ.ಎಸ್.ಟಿ., ಕಾರ್ಮಿಕ ಕಾಯ್ದೆ , ಶರೀಅತ್ ಮೇಲಿನ ಹಸ್ತಕ್ಷೇಪ ಇತ್ಯಾದಿ ಜನವಿರೋಧಿ ನೀತಿಗಳ ಸರ್ವಾಧಿಕಾರ ಧೋರಣೆಗಳಿಂದ ದೇಶ ತತ್ತರಿಸಿದೆ. ಬಂಡವಾಳಶಾಹಿಗಳು ದೇಶದ ಹಣವನ್ನು ದೋಚಿಕೊಂಡು ವಿದೇಶಕ್ಕೆ ಪರಾರಿಯಾದರೆ ರೈತರು, ಬಡವರು ಸಾಲದ ಹೊರೆಯನ್ನು ಸಹಿಸದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಅರ್ಥೈಸಿಕೊಂಡು ಎಸ್ಡಿಪಿಐ ಈ ನಿರ್ಧಾರಕ್ಕೆ ಬಂದಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಕ್ಷವು ಈ ಬಾರಿ ಗೆಲ್ಲುವ ಸಾಧ್ಯತೆ ಇರುವ ಮೈಸೂರಿನ ನರಸಿಂಹ ರಾಜ, ಬೆಂಗಳೂರಿನ ಚಿಕ್ಕಪೇಟೆ ಹಾಗೂ ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ನಿರ್ಧರಿಸಿದೆ. ಬಾಕಿ 221 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಲು ಸಾಮರ್ಥ್ಯವಿರುವ ಪ್ರಬಲ ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ಮಾನಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದಲ್ಲೂ ನಾಮಪತ್ರ ಹಿಂದೆಗೆಯಲಿದ್ದೇವೆ ಎಂದು ಅಥಾವುಲ್ಲಾ ಹೇಳಿದ್ದಾರೆ.
ಜಾತ್ಯತೀತ ಪಕ್ಷಗಳನ್ನು ನಮ್ಮ ಪಕ್ಷದ ರಾಜಕೀಯ ಎದುರಾಳಿಯಾಗಿ ವಿರೋಧಿಸುತ್ತೇವೆಯೇ ಹೊರತು ಶತ್ರುಗಳ ರೀತಿಯಲ್ಲಿ ಅಲ್ಲ. ನಮ್ಮ ಮತ್ತು ಇಡೀ ದೇಶದ ಶತ್ರು ಕೋಮುವಾದಿ ಬಿಜೆಪಿಯಾಗಿದೆ. ಇದು ದೇಶದ ಎಲ್ಲ ನಾಗರಿಕರು ಅರ್ಥಮಾಡಿಕೊಳ್ಳಬೇಕಾಗಿದೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಯಾವುದೇ ನಕರಾತ್ಮಾಕ ಚರ್ಚೆಗಳನ್ನು ನಡೆಸದೇ ಸಕರಾತ್ಮಕ ಚುನಾವಣಾ ರಾಜಕೀಯ ಮತ್ತು ಹೋರಾಟ ರಾಜಕೀಯದಲ್ಲಿ ದೂರದೃಷ್ಟಿ ಇಟ್ಟುಕೊಂಡ ಪಕ್ಷದ ನಿರ್ಧಾರದಲ್ಲಿ ಕೈ ಜೋಡಿಸುವಂತೆ ಅಥಾವುಲ್ಲಾ ಜೋಕಟ್ಟೆ ಹೇಳಿಕೆಯಲ್ಲಿ ಕೋರಿದ್ದಾರೆ.