‘ಕೈ’ ಪ್ರಣಾಳಿಕೆ ಸುಳ್ಳು ಭರವಸೆಗಳ ಪತ್ರ: ಕೇಂದ್ರ ಸಚಿವ ಅನಂತ್ ಕುಮಾರ್

ಬೆಂಗಳೂರು, ಎ. 27: ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿಂದು ಬಿಡುಗಡೆ ಮಾಡಿದ ಪ್ರಣಾಳಿಕೆ, ಸುಳ್ಳು ಭರವಸೆಗಳ ಪತ್ರ. ಅಂಕಿ-ಅಂಶ, ದಿಕ್ಕು-ದೆಸೆ, ದೃಷ್ಟಿ-ಗುರಿ ಯಾವುದು ಇಲ್ಲದ ಖಾಲಿ ಪ್ರಣಾಳಿಕೆಯಾಗಿದ್ದು, ಜನರಿಗೆ ಮಂಕುಬೂದಿ ಎರಚುವ, ವಿಶ್ವಾಸ ದ್ರೋಹ ಬಗೆಯುವ ಪ್ರಯತ್ನವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಟೀಕಿಸಿದ್ದಾರೆ.
ಶುಕ್ರವಾರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 53 ವರ್ಷ, ಕೇಂದ್ರದಲ್ಲಿ 40 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಸಾಧನೆಗಳ ಪಟ್ಟಿ ಸೇರಿಸಬೇಕಿತ್ತು. ಆದರೆ, ಸತ್ಯ ಸಂಗತಿಗಳು, ವಸ್ತುಸ್ಥಿತಿಯ ಬಗ್ಗೆ ಏನನ್ನೂ ಹೇಳದೆ, ಪೊಳ್ಳು ಭರವಸೆಗಳನ್ನಷ್ಟೇ ನೀಡಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಇಡೀ ದೇಶದಲ್ಲೇ ಅತಿಹೆಚ್ಚು 3,800 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಕಾರಣವೇನು, ಪರಿಹಾರವೇನು ಎಂಬ ಬಗ್ಗೆ ಸಿದ್ದರಾಮಯ್ಯ ಸರಕಾರ ಪ್ರಸ್ತಾಪಿಸಿಯೇ ಇಲ್ಲ. ಅಷ್ಟೇ ಅಲ್ಲದೆ, 2013-2018ರ ವರೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದಿರುವ ಕರ್ನಾಟಕ ರಾಜ್ಯ, ಅಪರಾಧ, ಭ್ರಷ್ಟಾಚಾರ, ಆತ್ಮಹತ್ಯೆ ಪ್ರಮಾಣಗಳಲ್ಲಿ ಮುಂದಿದೆ.
ಜನರ ಜೀವನ ಮಟ್ಟ ಸುಧಾರಣೆ ಬಗ್ಗೆ ಪ್ರಸ್ತಾಪವಿಲ್ಲ. ಈ ಅವಧಿಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣವೂ ಹೆಚ್ಚಾಗಿದೆ. ಭ್ರಷ್ಟಾಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ನಂ.1 ಎಂದು ಅನೇಕ ಏಜೆನ್ಸಿಗಳು ವರದಿಗಳನ್ನು ನೀಡಿವೆ. ಕೃಷ್ಣಾ ಕೊಳ್ಳದಲ್ಲಿ ಅಧಿಕ ಸಂಖ್ಯೆಯ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಕೃಷ್ಣಾ ನದಿ ಯೋಜನೆಗಳಿಗೆ 5 ವರ್ಷದಲ್ಲಿ 50 ಸಾವಿರ ಕೋಟಿ ರೂ.ವೆಚ್ಚ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ನೀಡಿದ್ದು ಕೇವಲ 6,800 ಕೋಟಿ ರೂ. ಮರಳು, ಗುತ್ತಿಗಾರರು, ಕಸದ ಮಾಫಿಯಾಗಳು ಸೃಷ್ಟಿಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 240 ಭರವಸೆಗಳನ್ನು ನೀಡಿತ್ತು. ಆದರೆ, ಇದರಲ್ಲಿ ಅರ್ಧಕ್ಕೂ ಹೆಚ್ಚು ಭರವಸೆ ಈಡೇರಿಸಿಲ್ಲ. ಈಗ ಮತ್ತೊಮ್ಮೆ ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡಲು ಹೊರಟಿದೆ. ಈ ಎಲ್ಲ ವಿಷಯಗಳನ್ನು ಜನರ ಮುಂದಿಡುತ್ತೇವೆ. ನಾಡಿನ ಜನತೆ ಈ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಂದರೆ, ನಾಶ. ಬಿಜೆಪಿ ಅಂದರೆ ಅಭಿವೃದ್ಧಿ. ಅಭಿವೃದ್ಧಿಯ ವಿಕಾಸ ಮಂತ್ರದೊಂದಿಗೆ ಬಿಜೆಪಿ ಚುನಾವಣೆ ಎದುರಿಸಲಿದ್ದು, ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಜೋಡಿಯಿಂದ ಕರ್ನಾಟಕ ಮತ್ತೊಮ್ಮೆ ಪ್ರಗತಿಯ ಹಾದಿಯಲ್ಲಿ ಸಾಗಲಿದೆ ಎಂದು ಅವರು ಹೇಳಿದರು.
ಕೇಂದ್ರದ ಯೋಜನೆಗಳಿಗೆ ಹೊಸ ಲೇಪ: ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅದೇ ಆಶ್ವಾಸನೆಗಳನ್ನು ಬೇರೆ ಭಾಷೆಯಲ್ಲಿ ನೀಡಿದೆ. ಕೇಂದ್ರದ ಯೋಜನೆಗಳನ್ನು ಬೇರೆ ಹೆಸರಿನಲ್ಲಿ ಪ್ರಸ್ತಾಪಿಸಿದೆ. ಪ್ರಣಾಳಿಕೆಯಲ್ಲಿ ನಿರ್ದಿಷ್ಟ ಯಾವುದೇ ಆಶ್ವಾಸನೆಗಳಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಲೋಕಾಯುಕ್ತವನ್ನು ಬಲಪಡಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವುದು ಹಾಸ್ಯಾಸ್ಪದ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ಆರಂಭಿಸಲಾದ ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಪಾಪ ಕಾಂಗ್ರೆಸ್ಗೆ ತಟ್ಟುತ್ತದೆ ಎಂದರು.
‘ಪ್ರಣಾಳಿಕೆ ಬರೆದವರು ಸುಳ್ಳಿನ ಸರದಾರ ಎಂದೆ ಖ್ಯಾತರಾಗಿರುವ ವೀರಪ್ಪ ಮೊಯ್ಲಿ, ಇದನ್ನು ರೂಪಿಸಿದವರು ನಿದ್ದೆ ಸಾರ್ವಭೌಮ ಎಂದೇ ಜನಜನಿತರಾಗಿರುವ ಸಿದ್ದರಾಮಯ್ಯ. ಪ್ರಣಾಳಿಕೆಗೆ ಸ್ಫೂರ್ತಿಯಾದವರು ದೂರದೃಷ್ಟಿ ಇಲ್ಲದ, ನೈಜ ಸ್ಥಿತಿಯ ಅರಿವಿಲ್ಲದ ರಾಹುಲ್ ಗಾಂಧಿಯಾಗಿದ್ದಾರೆ’
-ಅನಂತಕುಮಾರ್ ಕೇಂದ್ರ ಸಚಿವ







