ಬದಿಯಡ್ಕ: ಮಹಿಳೆಯ ನಿಗೂಢ ಮೃತ್ಯು ಪ್ರಕರಣ ಬಯಲು

ಕಾಸರಗೋಡು, ಎ.27: ಬದಿಯಡ್ಕ ನೆಲ್ಲಿಕಟ್ಟೆಯ ರಸ್ತೆ ಬದಿಯಲ್ಲಿ ಸೋಮವಾರ ಮಹಿಳೆಯೊಬ್ಬರು ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ವಾಹನ ಢಿಕ್ಕಿ ಹೊಡೆದಿರುವುದು ಸಾವಿಗೆ ಕಾರಣ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಟಿಪ್ಪರ್ವೊಂದನ್ನು ವಶಪಡಿಸಿಕೊಂಡಿರುವ ವಿದ್ಯಾನಗರ ಪೊಲೀಸರು ಅದರ ಚಾಲಕನೊಬ್ಬನನ್ನು ಬಂಧಿಸಿದ್ದಾರೆ.
ನೆಲ್ಲಿಕಟ್ಟೆಯ ಝುಹಾರ (48) ಎಂಬವರು ಸೋಮವಾರ ನೆಲ್ಲಿಕಟ್ಟೆ ಚರ್ಲಡ್ಕದ ರಸ್ತೆ ಬದಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಗಮನಿಸಿದ ನಾಗರಿಕರು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ದಾರಿಮಧ್ಯೆ ಅವರು ಮೃತಪಟ್ಟಿದ್ದರು. ಮೃತದೇಹದ ಮೇಲೆ ಗಾಯಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಕೊಲೆ ಶಂಕೆ ವ್ಯಕ್ತವಾಗಿತ್ತು.
ಬಳಿಕ ಆಗಮಿಸಿದ ಬದಿಯಡ್ಕ ಠಾಣಾ ಪೊಲೀಸರು ಪರಿಶೀಲಿಸಿದಾಗ ಘಟನಾ ಸ್ಥಳದಲ್ಲಿ ಟಿಪ್ಪರ್ ಲಾರಿಯೊಂದರ ಹೆಡ್ಲೈಟ್ ಹುಡಿಯಾಗಿ ಬಿದ್ದಿರುವುದು ಕಂಡುಬಂದಿತ್ತು. ತನಿಖೆ ಆರಂಭಿಸಿದ ಪೊಲೀಸರು ಅಪಘಾತ ಎಸಗಿದ ಲಾರಿಯ ಪತ್ತೆಗೆ ಬಲೆ ಬೀಸಿದ್ದರು. ಈ ನಡುವೆ ಎಡನೀರಿನಲ್ಲಿ ಬಲ್ಬ್ ಹುಡಿಯಾಗಿರುವ ಹಿನ್ನೆಲೆಯಲ್ಲಿ ಸ್ಟಿಕ್ಕರ್ ಅಂಟಿಸಿರುವ ಟಿಪ್ಪರ್ವೊಂದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅದರ ಚಾಲಕನನ್ನು ವಿಚಾರಣೆಗೊಳಪಡಿಸಿದಾಗ ಝುಹರಾ ಅವರ ಸಾವಿನ ರಹಸ್ಯ ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಟಿಪ್ಪರ್ ಚಾಲಕ ಎಡನೀರಿನ ಸಿ.ಐ.ಮುಹಮ್ಮದ್(42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅತೀ ವೇಗದಿಂದ ಟಿಪ್ಪರ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.