ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲು ಸಿಐಟಿಯು ಒತ್ತಾಯ
ಮಂಗಳೂರು, ಎ.29: ದ.ಕ.ಜಿಲ್ಲೆಯಲ್ಲಿ ಬೀಡಿ ಉದ್ಯಮ ಅನವತಿಯ ಸ್ಥಿತಿಯಲ್ಲಿದ್ದು, ಪರ್ಯಾಯ ಉದ್ಯೋಗ ಕಲ್ಪಿಸುವ ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಹಾಲಿ ಬೀಡಿ ಕಾರ್ಮಿಕರಿಗೆ ಭವಿಷ್ಯತ್ತಿನ ಹಿತದೃಷ್ಟಿಯಿಂದ ಗ್ರಾಪಂ ಆಡಳಿತವು ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಬೀಡಿ ಕಾರ್ಮಿಕರಿದ್ದು, ಇದು ಸರಿಯಾದ ಕೆಲಸವಿಲ್ಲದೆ ಬೀಡಿ ಉದ್ಯಮ ಅವನತಿಯ ಸ್ಥಿತಿಯಲ್ಲಿದೆ. ಹಾಗಾಗಿ ಪರ್ಯಾಯ ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಹೊಗೆಸೊಪ್ಪಿನಿಂದ ಕ್ಯಾನ್ಸರ್ ಕಾಯಿಲೆ ಬರುತ್ತಿದೆ ಎಂಬ ವರದಿ ನೀಡಿದ ಕಾರಣ ಕೇಂದ್ರ ಸರಕಾರವು 2004ರಿಂದ ಧೂಮಪಾನ ನಿಷೇಧ ಕಾನೂನು ಜಾರಿಗೊಳಿಸಿತ್ತು. ಈ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರಕಾರವು 2015ರಲ್ಲಿ ಕೋಟ್ಪಾಕಾಯ್ದೆಯನ್ನು ಜಾರಿಗೆ ತಂದಿದೆ. ಈ ಮಧ್ಯೆ ಜಿಎಸ್ಟಿ ನೀತಿಯು ಕೂಡ ಬೀಡಿ ಕೈಗಾರಿಕೆಗೆ ಒಡೆತವನ್ನು ನೀಡಿದೆ.ಇದರಿಂದಾಗಿ ಬೀಡಿ ಕಾರ್ಮಿಕರಿಗೆ ವಾರವಿಡೀ ಕೆಲಸವಿಲ್ಲದೆ ಕಂಗಲಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಈಗ ಕೂಡ ಬೀಡಿ ಕೈಗಾರಿಕೆಯನ್ನೇ ನಂಬಿ ಬದುಕುವ ಸಾವಿರಾರು ಕುಟುಂಬಗಳು ಇವೆ. ಇದೆ ಪರಿಸ್ಥಿತಿ ಮುಂದುವರಿದರೆ ಬೀಡಿ ಕಾರ್ಮಿಕರ ಕುಟುಂಬಗಳು ಆತ್ಮಹತ್ಯೆಗೆ ಶರಣಾಗುವ ಭೀತಿ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕೈಗಾರಿಕೆಯಲ್ಲಿ ಉದ್ಯೋಗ ಕಳೆದುಕೊಳ್ಳುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗವನ್ನು ಒದಗಿಸಬೇಕಾಗಿದೆ ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಬಿಡಿ ಉದ್ಯಮದಲ್ಲಿ ರಾಷ್ಟ್ರಮಟ್ಟದಲ್ಲಿ ಒಂದೇ ರೀತಿಯ ಮಂಜೂರಿ ಇಲ್ಲದಿರುವುದು ಕೂಡ ಕಾರ್ಮಿಕರ ದುಸ್ತಿತಿಗೆ ಇನ್ನೊಂದು ಕಾರಣವಾಗಿದೆ. ಒಂದು ಸಾವಿರ ಬೀಡಿ ಸುತ್ತಲು ದಿನದ 16ಗಂಟೆ ದುಡಿಯಬೇಕಾಗಿದೆ. ದಿನಕ್ಕೆ ಒಂದು ಸಾವಿರ ಬೀಡಿ ಸುತ್ತಿದರೆ ಕಾರ್ಮಿಕರಿಗೆ ಸಿಗುವ ಮಜುರಿ 170 ರೂಪಾಯಿ. ಇದರಲ್ಲಿ ಅವರ ಕುಟುಂಬದ ಜೀವನವನ್ನು ಸಾಗಿಸಬೇಕಾಗಿದೆ.ಮಜೂರಿ ಹೆಚ್ಚಳಕ್ಕಾಗಿ ಹೋರಾಟ ಮಾಡಿದರೆ ಮಾಲಕರು ಬೇರೆ ರಾಜ್ಯದಲ್ಲಿ ಕಡಿಮೆ ಮಜೂರಿಯಲ್ಲಿ ಬೀಡಿ ತಯಾರಾಗುತ್ತದೆ ಎಂದು ಕಾರಣ ನೀಡಿ ಕಾರ್ಮಿಕರ ಬೇಡಿಕೆಯನ್ನು ತಿರಸ್ಕರಿಸುತ್ತಾರೆ. ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಕೆಂಬಾವುಟದ ನೇತೃತ್ವದಲ್ಲಿ ಕಾರ್ಮಿಕರು ಹಲವಾರು ಹೋರಾಟಗಳನ್ನು ಮಾಡಿ ಈ ಕೈಗಾರಿಕೆಯಲ್ಲಿ ಕೆಲವು ಸೌಲಭ್ಯಗಳನ್ನು ಪಡೆಯಲಾಗಿದೆ. 1974ರಲ್ಲಿ ತ್ರಿಪಕ್ಷ ಒಪ್ಪಂದದ ಮೂಲಕ ಬೀಡಿ ಆ್ಯಂಡ್ ಸಿಗರ್ ಆ್ಯಕ್ಟ್ ಜಾರಿಗೊಳಿಸಲಾಯಿತು. ಇದರಿಂದಾಗಿ ಮನೆ ಮನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾನೂನು ಸೌಲಭ್ಯ ಸಿಗುವಂತಾಯಿತು. 1982ರಲ್ಲಿ ಪ್ರಾವಿಡಂಟ್ ಫಂಡ್ ಜಾರಿಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸಾವಿರಾರು ಕಾರ್ಮಿಕರು ಪಿಕೆಟಿಂಗ್ ಮಾಡಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದರು. 7 ಮಂದಿ ಸಿಐಟಿಯು ಮುಖಂಡರು ಅಮರಣ ಉಪವಾಸ ಸತ್ಯಾಗ್ರಹ ಮಾಡಿದ ನಂತರ ಜಿಲ್ಲೆಯ ಬೀಡಿ ಮಾಲಕರು ಕಾರ್ಮಿಕರಿಗೆ ಪ್ರೊವಿಡೆಂಟ್ ಫಂಡ್ ಜಾರಿಗೊಳಿಸಲು ಒಪ್ಪಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಮಿಕರು ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಈ ಕೈಗಾರಿಕೆ ಮತ್ತು ಅದರಲ್ಲಿ ದುಡಿಯುವ ಕಾರ್ಮಿಕರನ್ನು ರಕ್ಷಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ನೀತಿಯನ್ನು ಬದಲಾಯಿಸಬೇಕಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.







