ಉಡುಪಿಗೆ ಪ್ರಧಾನಿ ಮೋದಿ ಭೇಟಿ: ಸಂಚಾರದಲ್ಲಿ ಬದಲಾವಣೆ
ಉಡುಪಿ, ಎ.29: ಪ್ರಧಾನಿ ನರೇಂದ್ರ ಮೋದಿ ಮೇ 1ರಂದು ಉಡುಪಿ ಜಲ್ಲೆಗೆ ಭೇಟಿ ನೀಡುವ ಹಿನ್ನಲೆಯಲ್ಲಿ ವಾಹನ ಪಾರ್ಕಿಂಗ್ ಮತ್ತು ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಶಿವಳ್ಳಿ ಗ್ರಾಮದ ಎಸ್.ಕೆ.ಎಂ. ಜಂಕ್ಷನ್ ಬಳಿಯ ಸುಧೀಂದ್ರ ಮಂಟಪ ರಸ್ತೆ ಮತ್ತು ಗೋಸುಲಟ್ಟೆ ರಸ್ತೆ(ಎಂಜಿಎಂ ಲೇಡಿಸ್ ಹಾಸ್ಟೆಲ್ ಬಳಿ ರಸ್ತೆ)ಯನ್ನು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳವಾಗಿ ಆದೇಶಿಸಿದೆ. ಇಲ್ಲಿ ಬೇರೆ ವಾಹನಗಳ ಓಡಾಟವನ್ನು ನಿಷೇಧಿಸ ಲಾಗಿದೆ. ಎಂಜಿಎಂ ಕಾಲೇಜು ಮೈದಾನದಲ್ಲಿ ಪ್ರಧಾನಮಂತ್ರಿಯವರ ಸಬಾ ಕಾರ್ಯ ಕ್ರಮ ನಡೆಯುವುದರಿಂದ ಮಧ್ಯಾಹ್ನ 12 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯವಾಗುವವರೆಗೂ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.
ಕಾರ್ಕಳ -ಹೆಬ್ರಿ -ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಘನ ವಾಹನಗಳು ಇಂದ್ರಾಳಿ ಜಂಕ್ಷನ್ ಸೇತುವೆ ಬಳಿ ಯು ಟರ್ನ್ ಪಡೆದು ಮರಳಿ ಹೋಗಬೇಕು. ಮಣಿಪಾಲದಿಂದ ಉಡುಪಿಗೆ ಬರುವ ಲಘು ವಾಹನ ಗಳು ಇಂದ್ರಾಳಿ, ಬುಡ್ನಾರು ಮಾರ್ಗವಾಗಿ ಬೀಡಿನಗುಡ್ಡೆ ಮಿಷನ್ ಕಾಂಪೌಂಡ್ ಮಾರ್ಗವಾಗಿ ಉಡುಪಿಗೆ ಬರಬೇಕು.
ಮಂಗಳೂರಿನಿಂದ ಉಡುಪಿಗೆ ಬರುವ ಎಲ್ಲಾ ಬಸ್ ಹಾಗೂ ವಾಹನಗಳು ಅಂಬಲಪಾಡಿ, ಅಜ್ಜರಕಾಡು, ಜೋಡುಕಟ್ಟೆಗೆ ಬಂದು ಕಿನ್ನಿಮೂಲ್ಕಿ ಬಲಾಯಿ ಪಾದೆ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕು. ಮಲ್ಪೆಯಿಂದ ಉಡುಪಿಗೆ ಬರುವ ಎಲ್ಲಾ ಬಸ್ ಹಾಗೂ ವಾಹನಗಳು ಕಲ್ಮಾಡಿಯಾಗಿ ಅಂಬಲಪಾಡಿ ಅಜ್ಜರಕಾಡು ಜೋಡುಕಟ್ಟೆಗೆ ಬಂದು ಅಲ್ಲಿಂದ ಕಿನ್ನಿಮೂಲ್ಕಿ ಮೂಲಕ ಮಲ್ಪೆಗೆ ಹೋಗಬೇಕು.
ಅಂಬಾಗಿಲಿನಿಂದ ಉಡುಪಿಗೆ ಬರುವ ಎಲ್ಲಾ ಬಸ್ ಹಾಗೂ ವಾಹನಗಳು ಗುಂಡಿಬೈಲು ರಸಿಕಾ ಬಾರ್ ಜಂಕ್ಷನ್ನಿಂದಲೇ ಯು ಟರ್ನ್ ಪಡೆದು ವಾಪಾಸು ಹೋಗಬೇಕು. ಕುಂದಾಪುರ ಕಡೆಯಿಂದ ಉಡುಪಿಗೆ ಆಗಮಿಸುವ ಬಸ್ಸುಗಳು ಹಾಗೂ ಇತರೆ ವಾಹನಗಳು ಕರಾವಳಿಗೆ ಬಂದು ಶಾರದಾ ಹೋಟೆಲ್ ಬಳಿಯೇ ಯು ಟರ್ನ್ ಪಡೆದು ವಾಪಸ್ ಹೋಗಬೇಕು.
ಕೊಡವೂರು ಗ್ರಾಮದ ಮೂಡಬೆಟ್ಟುವಿನಿಂದ ಆದಿಉಡುಪಿ ಜಂಕ್ಷನ್ ವರೆಗಿನ ರಸ್ತೆಯನ್ನು ಸಂಚಾರ ಮುಕ್ತವಾಗಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧಿಸೂಚನೆ ಹೊರಡಿಸಿ ಆದೇಶಿಸಿದ್ದಾರೆ.
ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ
ಮಲ್ಪೆ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಕಡಿಯಾಳಿ ಕಮಲಾ ಬಾಯಿ ಹೈಸ್ಕೂಲ್ ಮೈದಾನ, ಕಾರುಗಳಿಗೆ ಆತೀಫ್ ಹುಸೇನ್ ಎಸ್ಟೇಟ್, ಕುಂದಾಪುರ- ಕಾರವಾರ- ಬೈಂದೂರು- ಬ್ರಹ್ಮಾವರದಿಂದ ಬರುವ ಕಾರು ಗಳಿಗೆ ರಾಜಾಂಗಣ ಬಳಿಯ ಪಾರ್ಕಿಂಗ್ ಸ್ಥಳ, ಬಸ್ಗಳಿಗೆ ರಾಯಲ್ ಗಾರ್ಡನ್, ಕಾರ್ಕಳ-ಹೆಬ್ರಿ- ಚಿಕ್ಕಮಗಳೂರು ಕಡೆಯಿಂದ ಬರುವ ಕಾರು ಗಳಿಗೆ ಬೀಡಿನಗುಡ್ಡೆ ಮೈದಾನ, ಬಸ್ಗಳಿಗೆ ಮಣಿಪಾಲ ಎಂಜೆಸಿ ಮೈದಾನ, ಕಾಪು- ಪಡುಬಿದ್ರೆ- ಮುಲ್ಕಿ- ಮಂಗಳೂರು ಕಡೆಯಿಂದ ಬರುವ ಕಾರು, ಬಸ್ಗಳಿಗೆ ಬೀಡಿನಗುಡ್ಡೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.