ಮಂಗಳೂರು: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶುಭಾರಂಭ

ಮಂಗಳೂರು, ಎ. 29: ಪ್ರಸಾದ್ ನೇತ್ರಾಲಯದ ವತಿಯಿಂದ ನಗರದ ಉಜ್ಜೋಡಿ -ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿ ಬಳಿಯ ಸುಸಜ್ಜಿತ ಕಟ್ಟಡದಲ್ಲಿ ನೂತನ ‘ಪ್ರಸಾದ್ ನೇತ್ರಾಲಯಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ’ ರವಿವಾರ ಶುಭಾರಂಭಗೊಂಡಿತು.
ಕೇಂದ್ರದ ಆಯುಷ್ ಸಚಿವ ಶ್ರೀಪಾದ ನಾಯಕ್ ನೂತನ ಆಸ್ಪತ್ರೆಯ ಉದ್ಘಾಟನೆಯನ್ನು ನೆರವೇರಿಸಿದರು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ಅವರು, ಪ್ರಸಾದ್ ನೇತ್ರ್ರಾಲಯದ ಐದನೆ ಆಸ್ಪತ್ರೆಯನ್ನು ಉದ್ಘಾಟಿಸುವುದಕ್ಕೆ ಸಂತೋಷವಾಗುತ್ತಿದೆ. 25 ವರ್ಷಗಳ ಹಿಂದೆ ಸಣ್ಣದೊಂದು ಕ್ಲಿನಿಟ್ನೊಂದಿಗೆ ಆರಂಭಗೊಂಡ ಪ್ರಸಾದ್ ನೇತ್ರಾಲಯವು ಐದು ಕಣ್ಣಿನ ಆಸ್ಪತ್ರೆಗಳನ್ನು ಸ್ಥಾಪಿಸಿ ಸಾಧನೆ ಮಾಡಿದೆ. ಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಪ್ರಸಾದ್ ಕೂಡ್ಲು ಅವರು ಗುರು, ತಂದೆ-ತಾಯಿ ಮತ್ತು ದೇವರಿಗೆ ನೀಡುತ್ತಿರುವ ಗೌರವದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ.ಕೃಷ್ಣ ಪ್ರಸಾದ್ ಕೂಡ್ಲು ಮಾತನಾಡಿ, ಪ್ರಸಾದ್ ನೇತ್ರಾಲಯವು ವಾರ್ಷಿಕವಾಗಿ ಸುಮಾರು 500 ಉಚಿತ ಕಣ್ಣಿತ ತಪಾಸಣಾ ಶಿಬಿರಗಳನ್ನು ಆಯೋಜಿಸಿದೆ. ಇದೀಗ ಉದ್ಘಾಟನೆಗೊಂಡಿರುವ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ವೈದ್ಯಕೀಯ ಸೌಲಭ್ಯ ಲಭ್ಯವಿದೆ ಎಂದರು.
ಕ್ರೈಸ್ತ ಧರ್ಮಗುರು ಫಾ.ಗಾಡ್ಫ್ರಿ ಎಲ್.ಎ.ಸಲ್ದಾನಾ, ಮುಸ್ಲಿಂ ಧರ್ಮಗುರು ಅಬೂ ಸುಫ್ಯಾನ್ ಮದನಿ, ಉಡುಪಿಯ ಜ್ಯೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ, ಡಾ.ಎಚ್.ಎಸ್.ಬಲ್ಲಾಳ್, ಡಾ.ವಿನಯ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು.
ನಿಟ್ಟೆ ಡೀಮ್ಡ್ ಯುನಿವರ್ಸಿಟಿಯ ಚಾನ್ಸಲರ್ ಡಾ.ಎನ್.ವಿನಯ ಹೆಗ್ಡೆ, ಬೆಂಗಳೂರಿನ ಸಂಚುರಿ ಗ್ರೂಪ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ದಯಾನಂದ ಪೈ, ಅವರ ಸಹೋದರ ಡಾ.ಪಿ.ಸತೀಶ್ ಪೈ, ಬೆಂಗಳೂರಿನ ಕಾರ್ಲ್ ಝೈಸ್ ಇಂಡಿಯಾ ಪ್ರೈ. ಲಿ.ನ ವಿಭಾಗೀಯ ವ್ಯವಸ್ಥಾಪಕ ಅರುಣ್ ಶೆಟ್ಟಿ, ಕಾರ್ಪೊರೇಟರ್ ಆಶಾ ಡಿಸಿಲ್ವ, ಕೆ.ರಘುರಾಂ ರಾವ್, ಎಂ.ಎ.ಗಫೂರ್, ಪ್ರಸಾದ್ ನೇತ್ರಾಲಯದ ಪಾಲುದಾರರು ಹಾಗೂ ನೇತ್ರ ತಜ್ಞರಾದ ಡಾ.ವಿಕ್ರಮ್ ಜೈನ್, ಡಾ.ಚಿನ್ನಪ್ಪ ಎ.ಜಿ., ಡಾ.ಹರೀಶ್ ಶೆಟ್ಟಿ, ಡಾ.ಜೇಕಬ್ ಚಾಕೋ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.