ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಆರೋಪ: ಯುವಕ ವಶಕ್ಕೆ
ಬೆಂಗಳೂರು, ಎ.29: ಶಾಂತಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ಅವರಿಗೆ ಬೆದರಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಇಲ್ಲಿನ ಅಶೋಕನಗರ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ನಗರದ ನೀಲಸಂದ್ರದ ಫಸರ್ಖಾನ್ ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶನಿವಾರ ತಡರಾತ್ರಿ ಶ್ರೀಧರ್ ರೆಡ್ಡಿ ಮನೆ ಬಳಿಗೆ ಬಂದು ಬೈಕ್ ನಿಲ್ಲಿಸಿ, ಅಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಶ್ರೀಧರ್ ಮನೆಗೆ ಯಾವಾಗ ಬರುತ್ತಾರೆ ಎಂದು ವಿಚಾರಣೆ ನಡೆಸಿದ್ದಾರೆ. ಆತನ ವರ್ತನೆಯನ್ನು ನೋಡಿದ ಸ್ಥಳೀಯರು ಬೈಕ್ ಪರಿಶೀಲನೆ ನಡೆಸಿದಾಗ ಮಾರಕಾಸ್ತ್ರಗಳು ಕಂಡು ಬಂದಿವೆ ಎನ್ನಲಾಗಿದೆ.
ಬಳಿಕ ಜೆಡಿಎಸ್ ಕಾರ್ಯಕರ್ತರು, ಫಸರ್ಖಾನ್ನ ಬಗ್ಗೆ ಅಶೋಕನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.
Next Story





