ಸಿಎಸ್ಕೆಗೆ ಮತ್ತೊಂದು ಆಘಾತ
ಪುಣೆ, ಎ.29: ಈಗಾಗಲೇ ಪ್ರಮುಖ ಆಲ್ರೌಂಡರ್ ಕೇದಾರ್ ಜಾಧವ್ ಗಾಯಾಳುವಾಗಿ ಹೊರಬಿದ್ದ ಆಘಾತದಲ್ಲಿರುವ ಚೆನ್ನೈ ಸೂಪರ್ಕಿಂಗ್ಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಹೊಡೆತ ಬಿದ್ದಿದೆ. ತಂಡದ ಪ್ರಮುಖ ಬೌಲರ್ ದೀಪಕ್ ಚಹಾರ್ ಮಂಡಿ ಸೆಳೆತದ ಕಾರಣ ಗಾಯಗೊಂಡಿದ್ದು, ಕನಿಷ್ಟ ಎರಡು ವಾರದ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿದುಬಂದಿದೆ. 25ರ ಹರೆಯದ ಚಹಾರ್ ಈ ಬಾರಿಯ ಟೂರ್ನಿಯಲ್ಲಿ 6 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು.
ಶನಿವಾರ ಮುಂಬೈ ಎದುರಿನ ಪಂದ್ಯದಲ್ಲಿ 2.1 ಓವರ್ ಎಸೆದ ಸಂದರ್ಭ ಮಂಡಿ ಸೆಳೆತದ ಕಾರಣ ಅಂಗಣ ತೊರೆದಿದ್ದು, ಆ ಓವರ್ನ ಉಳಿದ ಐದು ಎಸೆತಗಳನ್ನು ಹರ್ಭಜನ್ ಸಿಂಗ್ ಪೂರ್ತಿಗೊಳಿಸಿದ್ದರು. ತಂಡಕ್ಕೆ ಇದೊಂದು ಭಾರೀ ಆಘಾತವಾಗಿದೆ . “ಚಹಾರ್ ನಮ್ಮ ಪ್ರಮುಖ ಬೌಲರ್ ಆಗಿದ್ದರು” ಎಂದು ಸಿಎಸ್ಕೆ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಈ ಮಧ್ಯೆ, ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ವಾಪಸಾಗಿದ್ದ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ ಇದೀಗ ಮರಳಿ ತಂಡವನ್ನು ಸೇರಿಕೊಂಡಿದ್ದಾರೆ.