ಪಿಯುಸಿ ಫಲಿತಾಂಶ: ಮತ್ತೆ ದ್ವಿತೀಯ ಸ್ಥಾನಕ್ಕೆ ಜಾರಿದ ಉಡುಪಿ ಜಿಲ್ಲೆ
► ವೆಂಕಟೇಶ್ ಪುರಾಣಿಕ್ಗೆ ಕಾಮರ್ಸ್ನಲ್ಲಿ ದ್ವಿತೀಯ ರ್ಯಾಂಕ್ ► ನಿಸರ್ಗಗೆ ಸಾಯನ್ಸ್ನಲ್ಲಿ ನಾಲ್ಕನೇ ರ್ಯಾಂಕ್

ಉಡುಪಿ, ಎ.30: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಮತ್ತೆ ದ್ವಿತೀಯ ಸ್ಥಾನಕ್ಕೆ ಜಾರಿದೆ. ಸತತ ಮೂರು ವರ್ಷಗಳ ಪ್ರಯತ್ನದ ಬಳಿಕ ಕಳೆದ ವರ್ಷ ಅಗ್ರಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಸಿದುಕೊಂಡಿದ್ದ ಉಡುಪಿ ಜಿಲ್ಲೆ ಈ ಬಾರಿ ಎರಡೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಇಂದು ಪ್ರಕಟಗೊಂಡು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 91.49 ಫಲಿತಾಂಶದೊಂದಿಗೆ ಅಗ್ರಸ್ಥಾನಕ್ಕೇರಿದರೆ, ಉಡುಪಿ ಜಿಲ್ಲೆ ಶೇ.90.67 ಫಲಿತಾಂಶದೊಂದಿಗೆ ಮತ್ತೆ ಎರಡನೇ ಸ್ಥಾನ ಅಲಂಕರಿಸಿದೆ. ಕೊಡಗು ಶೇ.83.94 ಫಲಿತಾಂಶದೊಂದಿಗೆ ಮೂರನೇ ಸ್ಥಾನದಲ್ಲಿದೆ.
2013ರಲ್ಲಿ ಶೇ.86.24 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದ್ದ ಉಡುಪಿ, 2014ರಲ್ಲಿ ಶೇ.85.57ನೊಂದಿಗೆ ಅಗ್ರಸ್ಥಾನವನ್ನು ಪಕ್ಕದ ದ.ಕ. ಜಿಲ್ಲೆಗೆ ಬಿಟ್ಟುಕೊಟ್ಟಿತ್ತು. 2015ರಲ್ಲಿ ಫಲಿತಾಂಶದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದರೂ ಶೇ.92.32 ಸಾಧನೆಯೊಂದಿಗೆ ಎರಡನೇ ಸ್ಥಾನವನ್ನಷ್ಟೇ ಪಡೆಯುವಲ್ಲಿ ಯಶಸ್ವಿಯಾಗಿತ್ತು. 2016ರಲ್ಲೂ ಮತ್ತೆ 90.35ಶೇ. ಫಲಿತಾಂಶ ದೊಂದಿಗೆ ದ.ಕ. (ಶೇ.90.48) ಅಂತರದ ಸ್ಥಾನವನ್ನು ಪಡೆದಿತ್ತು.
ಸತತ ಪ್ರಯತ್ನದ ಬಳಿಕ 2017ರಲ್ಲಿ ಶೇ.90.01 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಉಡುಪಿ, 0.09ಶೇ. ಅಂತರದಲ್ಲಿ ದಕ ವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿತ್ತು.
ಕಳೆದ ಬಾರಿ ವಿಜ್ಞಾನ ವಿಭಾಗದ ಅಗ್ರ ರ್ಯಾಂಕ್ ಉಡುಪಿ ಪಾಲಾಗಿದ್ದರೆ, ಈ ಬಾರಿ ಕಾಮರ್ಸ್ ವಿಭಾಗದ ಎರಡನೇ ರ್ಯಾಂಕ್ ಜಿಲ್ಲೆಗೆ ಒಲಿದಿದೆ. ಈವರೆಗೆ ಸಿಕ್ಕಿದ ಮಾಹಿತಿಯಂತೆ ವಿಜ್ಞಾನ ವಿಭಾಗದಲ್ಲಿ ಉಡುಪಿಯ ಇಬ್ಬರು ವಿದ್ಯಾರ್ಥಿಗಳು ಸಹ ನಾಲ್ಕನೇ ರ್ಯಾಂಕ್ನ್ನು ಹಂಚಿಕೊಂಡಿದ್ದಾರೆ.
ಕುಂದಾಪುರ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವೆಂಕಟೇಶ್ ಪುರಾಣಿಕ್ ಕಾಮರ್ಸ್ ವಿಭಾಗದಲ್ಲಿ ಗರಿಷ್ಠ 600ರಲ್ಲಿ 594 ಅಂಕಗಳನ್ನು (ಶೇ.99) ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿದ್ದಾನೆ. ಎರಡು ವರ್ಷಗಳ ಹಿಂದೆ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದ ಬಸರೂರಿನ ವೆಂಕಟೇಶ್ ಪುರಾಣಿಕ್ ಮುಂದೆ ಸಿಎ ಮಾಡುವ ಗುರಿಯನ್ನು ಹೊಂದಿದ್ದಾನೆ.
ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ನಿಸರ್ಗ ಹಾಗೂ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಕೃತಿ ಡಿ.ಶೆಟ್ಟಿ ಅವರು 593 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಬಾರಕೂರಿನ ಟ್ಯಾಕ್ಸಿ ಚಾಲಕರೊಬ್ಬರ ಮಗನಾದ ನಿಸರ್ಗ್ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಗಣಕ ವಿಜ್ಞಾನದಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾನೆ.
ಉಳಿದಂತೆ ಕುಂದಾಪುರ ಆರ್.ಎನ್. ಶೆಟ್ಟಿ ಪ.ಪೂ.ಕಾಲೇಜಿನ ವಿವೇಕ್ ಗಿರಿಧರ ಪೈ ಎಚ್.ವಿಜ್ಞಾನ ವಿಭಾಗದಲ್ಲಿ 590 ಅಂಕಗಳೊಂದಿಗೆ ರಾಜ್ಯದಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಉಡುಪಿ ವಿದ್ಯೋದಯ ಪ.ಪೂ.ಕಾಲೇಜಿನ ಮೈಥಿಲಿ ರಾವ್ ಮತ್ತು ಸೌರಭ್ ಎಸ್.ಸಾಲಿಯಾನ್ ಅವರು ತಲಾ 588 ಅಂಕಗಳನ್ನು ಪಡೆದು ರಾಜ್ಯದಲ್ಲಿ 10ನೇ ಸ್ಥಾನದಲ್ಲಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಂಜಿಎಂ ಕಾಲೇಜಿನ ವಿದ್ಯಾಶ್ರೀ ಕಲ್ಕೂರ 590 (ಶೇ.98.3) ಅಂಕ ಪಡೆದಿದ್ದು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ಕಾಲೇಜಿನ ದೀಪ್ತಿ ಡಿ.ನಾಯಕ್ ವಿಜ್ಞಾನ ವಿಭಾಗದಲ್ಲಿ 586 (ಶೇ.97.6) ಅಂಕ ಪಡೆದಿದ್ದಾರೆ.
ಶೇ.100 ಫಲಿತಾಂಶ: ಆಯಾ ಕಾಲೇಜುಗಳಲ್ಲಿ ಮಂಗಳವಾರ ಬೆಳಗ್ಗೆ ಅಧಿಕೃತ ಫಲಿತಾಂಶ ಪ್ರಕಟಗೊಂಡ ಬಳಿಕವಷ್ಟೇ ಜಿಲ್ಲೆಯ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕಲಿದ್ದು, ಈವರೆಗೆ ಪತ್ರಿಕೆಗೆ ದೊರೆತ ಮಾಹಿತಿಯಂತೆ ಜಿಲ್ಲೆಯ ಒಟ್ಟು ಆರು ಕಾಲೇಜು ಶೇ.100 ಫಲಿತಾಂಶವನ್ನು ಪಡೆದಿವೆ.
ಉಡುಪಿಯ ವಿದ್ಯೋದಯ ಪ.ಪೂ.ಕಾಲೇಜು, ಕುಕ್ಕಂದೂರಿನ ಜ್ಞಾನಸುಧಾ ಪ.ಪೂ.ಕಾಲೇಜು, ಹೆಬ್ರಿಯ ಎಸ್.ಆರ್.ಎಸ್.ಪ.ಪೂ.ಕಾಲೇಜು, ಬ್ರಹ್ಮಾವರದ ನಿರ್ಮಲ ಪ.ಪೂ.ಕಾಲೇಜುಗಳಲ್ಲದೇ ಸರಕಾರಿ ಪ.ಪೂ.ಕಾಲೇಜು ಪಲಿಮಾರು ಹಾಗೂ ಸರಕಾರಿ ಪ.ಪೂ.ಕಾಲೇಜು ಕೊಕ್ಕರ್ಣೆ ಶೇ.100 ಫಲಿತಾಂಶ ಪಡೆದಿರುವ ಮಾಹಿತಿ ಇದೆ ಎಂದು ಡಿಡಿಪಿಯು ಕಚೇರಿಯ ಮೂಲಗಳು ತಿಳಿಸಿವೆ.
ಜಿಲ್ಲೆಯ 103 ಪ.ಪೂ.ಕಾಲೇಜುಗಳಲ್ಲಿ 7817 ಬಾಲಕರು, 8257 ಬಾಲಕಿಯರು ಸೇರಿದಂತೆ ಒಟ್ಟು 16,074 ಮಂದಿ ಪರೀಕ್ಷೆ ಬರೆದಿದ್ದರು.