ರೈತನ ಮಗ ಮೋಹನ್ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ

ಹಾಸನ,ಎ.30: ತಾಲೂಕಿನ ಶಾಂತಿ ಗ್ರಾಮದ ರೈತನ ಮಗ ಮಾಸ್ಟರ್ ಪಿಯು ಕಾಲೇಜಿನ ವಿದ್ಯಾರ್ಥಿ ಮೋಹನ್ ದ್ವಿತೀಯ ಪಿಯು ವಿಜ್ಞಾನ ಪರೀಕ್ಷೆಯಲ್ಲಿ ರಾಜ್ಯದಲ್ಲಿ 2 ನೇ ಸ್ಥಾನ ಪಡೆದಿದ್ದು, ಒಟ್ಟಾರೆ ಫಲಿತಾಂಶದಲ್ಲಿ ಹಾಸನಕ್ಕೆ 8ನೇ ಸ್ಥಾನ ಲಭಿಸಿದೆ.
ಪಿಯುಸಿಯಲ್ಲಿ 2 ನೇ ಸ್ಥಾನ ಗಳಿಸಿರುವ ಮೋಹನ್ ನ ತಂದೆ ಬಡ ರೈತನಾಗಿರುವ ಲಕ್ಷ್ಮೇಗೌಡ ಮತ್ತು ತಾಯಿ ಲಕ್ಷ್ಮಿ. ಇವರ ಕುಟುಂಬ ಶಾಂತಿಗ್ರಾಮದಲ್ಲಿದ್ದರೂ ಮಗ ಮೋಹನ್ ಹಾಸನದ ತನ್ನ ಅಜ್ಜಿ ಮನೆಯಲ್ಲಿ ಇದ್ದುಕೊಂಡೇ ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಿ ಇಂದು ಜಿಲ್ಲೆಗೆ ಮಾತ್ರವಲ್ಲದೆ ಶಿಕ್ಷಣ ಪಡೆದ ಕಾಲೇಜಿಗೆ ಮತ್ತು ಕುಟುಂಬಕ್ಕೆ ಕೀರ್ತಿ ತಂದಿದ್ದಾನೆ. ಭೌತಶಾಸ್ತ್ರ-100, ರಸಾಯನ-100, ಗಣಿತ-100, ಜೀವಶಾಸ್ತ್ರ-100, ಇಂಗ್ಲಿಷ್-98 ಹಾಗೂ ಕನ್ನಡದಲ್ಲಿ-97 ಅಂಕ ಪಡೆದಿದ್ದಾನೆ. ಒಟ್ಟು 600 ಅಂಕಗಳಿಗೆ 595 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಇದೆ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಮೋಹನ್, ನಾನು 600 ಅಂಕಗಳಲ್ಲಿ 595 ಅಂಕವನ್ನು ಪಡೆದಿದ್ದೇನೆ. ಒಟ್ಟು 592 ರಿಂದ 593 ಅಂಕ ಬರಬಹುದು ಎಂಬ ನಿರೀಕ್ಷೆ ನನ್ನಲ್ಲಿ ಇತ್ತು. ಆದರೇ ನಿರೀಕ್ಷೆಗೂ ಮೀರಿ ಇಷ್ಟೊಂದು ಅಂಕ ಗಳಿಸಿರುವುದು ನನಗೆ ಸಂತೋಷ ತಂದಿದೆ. ಇದಕ್ಕೆ ನಮ್ಮ ಮಾಸ್ಟರ್ ಕಾಲೇಜಿನ ಉಪನ್ಯಾಸಕರು ಮತ್ತು ನಮ್ಮ ಕುಟುಂಬವು ಓದಲು ತುಂಬ ಸಹಕಾರ ಕೊಟ್ಟಿದೆ. ಸಂಜೆ 5 ರಿಂದ ರಾತ್ರಿ 11 ಹಾಗೂ ಬೆಳಗ್ಗೆ 4-30 ರಿಂದ 7-30ರ ವರೆಗೂ ಓದುತ್ತಿದ್ದೆನು. ಫಲಿತಾಂಶ ನನಗೆ ತೃಪ್ತಿ ತಂದಿದ್ದು, ಕಠಿಣ ಪರಿಶ್ರಮದಿಂದ ಇಷ್ಟೊಂದು ಅಂಕಗಳನ್ನು ಗಳಿಸಲು ಸಾಧ್ಯವಾಗಿದೆ. ಮುಂದೆ ಮೆಡಿಕಲ್ಗೆ ಸೇರಬೇಕೆಂಬ ಗುರಿ ಮತ್ತು ಕನಸಿದೆ ಎಂದು ಹೇಳಿದರು.
ರೈತನಾದ ತಂದೆ ಲಕ್ಷ್ಮೇಗೌಡ ಪತ್ರಕರ್ತರೊಂದಿಗೆ ಮಾತನಾಡಿ, ನನ್ನ ಮಗ ಮೋಹನ್ ಎಲ್ಕೆಜಿಯಿಂದಲೂ ಪ್ರಥಮ ಸ್ಥಾನದಲ್ಲಿಯೇ ಅಂಕಗಳಿಸುತ್ತಾ ಬಂದಿದ್ದಾನೆ. ಕೇವಲ ಓದುವುದಕ್ಕೆ ಮಾತ್ರ ಸೀಮಿತವಾಗದೇ ತಂದೆ-ತಾಯಿಯ ಕೆಲಸದಲ್ಲೂ ಭಾಗಿಯಾಗುತ್ತಿದ್ದನು ಎಂದು ತಿಳಿಸಿದರು.
ವಿಧ್ಯಾರ್ಥಿಯ ಕೀರ್ತಿಗೆ ತಂದೆ-ತಾಯಿ, ಹಾಗೂ ಕಾಲೇಜಿನ ಮುಖ್ಯಸ್ಥರು, ಉಪನ್ಯಾಸಕರು ಸಿಹಿ ತಿನ್ನಿಸಿ ಸಂತೋಷ ವ್ಯಕ್ತಪಡಿಸಿದರು.







