ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ: ಚೆಸ್ ನಿಪುಣೆ ಅದಿಥಿಗೆ ಸಿಎ ಆಗುವಾಸೆ
4 ವಿಷಯಗಳಲ್ಲಿ ಶೇ. 100 ಅಂಕ

ಮಂಗಳೂರು, ಎ. 30: ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 594 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಅದಿಥಿ ಸಿಎ ಆಗಬೇಕೆಂಬ ಕನಸು ಹೊತ್ತಿದ್ದಾರೆ.
ನಗರದ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಅದಿಥಿ ಚೆಸ್ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಪ್ರತಿಭೆ. ಮೂಲತ: ರಾಜಸ್ತಾನದ ಅತುಲ್ ಕುಮಾರ್ ಸುರಾನ ಹಾಗೂ ದೀಪಾಲಿ ದಂಪತಿಯ ಪುತ್ರಿ ಅದಿಥಿ ತಮ್ಮ ಕುಟುಂಬದ ಜತೆ ಕಳೆದ 19 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ನಗರದಲ್ಲಿ ಫೈನಾನ್ಸ್ ಸಂಸ್ಥೆಯನ್ನು ಹೊಂದಿರುವ ಅತುಲ್ ಕುಮಾರ್ ಮಗಳ ಈ ಸಾಧನೆ ಬಗ್ಗೆ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ. ‘‘ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ. ಆದರೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ನಿರೀಕ್ಷೆ ಇರಲಿಲ್ಲ. ಕ್ರಮ ಬದ್ಧ ಓದಿನಿಂದ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ. ನಾನು ತರಗತಿಯಲ್ಲಿ ಅಲ್ಲದೆ ಮನೆಯಲ್ಲಿ 3 ಗಂಟೆಗಳನ್ನು ಓದಿಗಾಗಿ ಮೀಸಲಿಡುತ್ತಿದ್ದೆ’’ ಎಂದು ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿರುವ ಅದಿಥಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.