ಲೈಂಗಿಕ ಸಂಬಂಧವಿಲ್ಲದ ಮದುವೆಯನ್ನು ರದ್ದುಗೊಳಿಸಿದ ಹೈಕೋರ್ಟ್

ಮುಂಬೈ,ಎ.30: ಪತಿ-ಪತ್ನಿಯ ನಡುವೆ ಯಾವುದೇ ಲೈಂಗಿಕ ಸಂಬಂಧವಿರದಿದ್ದರೆ ಅದು ಅವರ ಮದುವೆಯನ್ನು ರದ್ದುಗೊಳಿಸಲು ಕಾರಣವಾಗುತ್ತದೆ ಎಂದು ಬಾಂಬೆ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಕೊಲ್ಲಾಪುರದ ದಂಪತಿ ಒಂಭತ್ತು ವರ್ಷಗಳ ಹಿಂದೆ ತಾವು ಮದುವೆ ಯಾದಾಗಿನಿಂದಲೂ ಕಾನೂನು ಸಮರದಲ್ಲಿ ತೊಡಗಿಕೊಂಡಿದ್ದರು. ಪತಿ ಖಾಲಿಹಾಳೆಗಳ ಮೇಲೆ ತನ್ನ ಸಹಿ ಪಡೆದುಕೊಂಡು ಮೋಸದಿಂದ ತನ್ನನ್ನು ಮದುವೆಯಾಗಿದ್ದ ಎಂದು ಮಹಿಳೆ ಆರೋಪಿಸಿದ್ದಳು. ಮದುವೆಯನ್ನು ರದ್ದುಗೊಳಿಸುವಂತೆ ಆಕೆ ಕೋರಿಕೊಂಡಿದ್ದರೆ ಪತಿ ಅದನ್ನು ವಿರೋಧಿಸಿದ್ದ.
ಮೋಸ ನಡೆದಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾ.ಮೃದುಲಾ ಭಾಟ್ಕರ್ ಹೇಳಿದರಾದರೂ,ದಂಪತಿಯ ನಡುವೆ ಲೈಂಗಿಕ ಸಂಬಂಧವಿತ್ತೆನ್ನಲು ಯಾವುದೇ ಸಾಕ್ಷ್ಯಾಧಾರವಿಲ್ಲದ್ದರಿಂದ ಮದುವೆಯನ್ನು ರದ್ದುಗೊಳಿಸಿ ಆದೇಶಿಸಿದರು.
ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧವನ್ನು ಕ್ರಮಬದ್ಧ ಗೊಳಿಸುವುದು ಮದುವೆಯ ಮುಖ್ಯ ಉದ್ದೇಶಗಳಲ್ಲೊಂದಾಗಿದೆ. ಆದರೆ ಇಂತಹ ಸಂಬಂಧವಿಲ್ಲದಿದ್ದಾಗ ಮದುವೆಯ ಉದ್ದೇಶವೇ ವಿಫಲಗೊಳ್ಳುತ್ತದೆ. ಒಂದೇ ಒಂದು ಬಾರಿ ದೈಹಿಕ ಸಂಪರ್ಕವೇ ರ್ಪಟ್ಟಿದ್ದರೂ ಮದುವೆಯು ಸಿಂಧುವಾಗುತ್ತದೆ ಎಂದು ಹೇಳಿದ ನ್ಯಾ.ಭಾಟ್ಕರ್,ಈ ಪ್ರಕರಣದಲ್ಲಿ ಮದುವೆಯ ಬಳಿಕ ಗಂಡ-ಹೆಂಡತಿ ಒಂದೇ ಒಂದು ದಿನವೂ ಜೊತೆಯಾಗಿ ವಾಸವಾಗಿಲ್ಲ ಮತ್ತು ತಮ್ಮಿಬ್ಬರ ನಡುವೆ ದೈಹಿಕ ಸಂಪರ್ಕವಿತ್ತು ಎಂದು ಪತಿಯು ಹೇಳಿಕೊಂಡಿದ್ದರೂ ಅದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಈ ಮದುವೆಯು ಅಸಿಂಧು ವಾಗಿದೆ ಎಂದರು.
ತಾವು ಲೈಂಗಿಕ ಸಂಬಂಧವನ್ನು ಹೊಂದಿದ್ದೆವು ಮತ್ತು ತನ್ನ ಪತ್ನಿ ಗರ್ಭಿಣಿ ಸಹ ಆಗಿದ್ದಳು ಎಂದು ಪತಿ ಪ್ರತಿಪಾದಿಸಿದ್ದನಾದರೂ,ಇದನ್ನು ಸಾಬೀತುಗೊಳಿಸುವ ಸ್ತ್ರೀರೋಗ ತಜ್ಞರ ಸಾಕ್ಷ್ಯವಿಲ್ಲ. ಗರ್ಭ ಪರೀಕ್ಷೆಯ ದಾಖಲೆಯನ್ನೂ ಸಲ್ಲಿಸಿಲ್ಲ ಎಂದು ಬೆಟ್ಟು ಮಾಡಿದ ನ್ಯಾಯಾಲಯವು, ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥ ಪಡಿಸಿಕೊಳ್ಳುವಂತೆ ದಂಪತಿಗೆ ಸಲಹೆ ನೀಡಲು ಪ್ರಯತ್ನಿಸಿ ತಾನು ವಿಫಲಗೊಂಡಿದ್ದೇನೆ ಎಂದು ತಿಳಿಸಿತು.
ಈ ಗಂಡ-ಹೆಂಡತಿ ಪರಸ್ಪರರ ವಿರುದ್ಧ ದ್ವೇಷ,ಪ್ರತೀಕಾರ ಭಾವನೆಗಳಿಂದ ತಮ್ಮ ಬದುಕಿನ ಒಂಭತ್ತು ವರ್ಷಗಳನ್ನು ಹಾಳು ಮಾಡಿಕೊಂಡಿದ್ದಾರೆ. ಈ ನಿಲುವು ಅವರ ಮುಂದಿನ ಬದುಕನ್ನೂ ಹಾಳು ಮಾಡುತ್ತಿತ್ತು ಎಂದು ನ್ಯಾ.ಭಾಟ್ಕರ್ ಹೇಳಿದರು.
2009ರಲ್ಲಿ ಮಹಿಳೆ 21 ಮತ್ತು ಪುರುಷ 24 ವರ್ಷ ಪ್ರಾಯದಲ್ಲಿದ್ದಾಗ ಈ ಪ್ರಕರಣ ನಡೆದಿತ್ತು. ಆತ ಖಾಲಿಹಾಳೆಗಳ ಮೇಲೆ ತನ್ನ ಸಹಿ ಪಡೆದಿದ್ದ ಮತ್ತು ವಿವಾಹ ನೋಂದಣಾಧಿಕಾರಿಗಳ ಬಳಿಗೂ ಕರೆದೊಯ್ದಿದ್ದ, ಆದರೆ ಅವು ಮದುವೆಯ ದಾಖಲೆಗಳಾಗಿದ್ದವು ಎನ್ನುವುದು ತನಗೆ ತಿಳಿದಿರಲಿಲ್ಲ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಳು.







