ದಲಿತರನ್ನು ಕಡೆಗಣಿಸಿದ ಮೋದಿಯನ್ನು ಮತದಾರರು ಬಹಿಷ್ಕರಿಸಬೇಕು: ಮಾರ್ಕಾಂಡ ಮುನಿಸ್ವಾಮೀಜಿ
ಬೆಂಗಳೂರು, ಎ.30: ಮೋದಿ ಸರಕಾರ ದಲಿತರ ಅಭಿವೃದ್ಧಿಗೆ ಕವಡೆಕಾಸಿನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿಲ್ಲ. ಇಂತಹ ಪಕ್ಷಗಳನ್ನು ಮತದಾರರು ಬಹಿಷ್ಕರಿಸಬೇಕು ಎಂದು ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮಿತಿ ಅಧ್ಯಕ್ಷ ಆದಿ ಜಾಂಬವ ಮಠದ ಮಾರ್ಕಾಂಡ ಮುನಿಸ್ವಾಮೀಜಿ ಕರೆ ಕೊಟ್ಟಿದ್ದಾರೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವ 19 ರಾಜ್ಯಗಳ ಪೈಕಿ 14 ರಾಜ್ಯಗಳಲ್ಲಿ ಕೋಮುವಾದ, ಜಾತಿ ದಳ್ಳುರಿ ಭುಗಿಲೆದ್ದಿದೆ. ಇದರಿಂದ ದಲಿತ ಸಮಾಜ ದಿಕ್ಕೆಟ್ಟು ತಲ್ಲಣಗೊಂಡಿದೆ. ಗೋ ಹತ್ಯೆ ನಿಷೇಧದ ಪ್ರಚೋದನೆ ಹಾಗೂ ಪ್ರಗತಿಪರ ಸಾಹಿತಿಗಳ ಹತ್ಯೆ ಹಿಂದೆ ಬಿಜೆಪಿ, ಸಂಘ ಪರಿವಾರದ ಕೈವಾಡ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿದೆ. ಮೋದಿ ಸರಕಾರ ದಲಿತರ ಅಭಿವೃದ್ಧಿಗೆ ಕವಡೆಕಾಸಿನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿಲ್ಲ. ಇಂತಹ ಪಕ್ಷಗಳನ್ನು ಮತದಾರರು ಬಹಿಷ್ಕರಿಸಬೇಕು ಎಂದು ಮನವಿ ಮಾಡಿದರು.
ನಿವೃತ್ತ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಸಿಎಂ ಸಿದ್ದರಾಮಯ್ಯನವರ ಸರಕಾರ ಮಲತಾಯಿ ಧೋರಣೆ ತಾಳಿದ್ದು ಪರಿಶಿಷ್ಟ ಜಾತಿಗಳಿಗೆ ತೀವ್ರ ಬೇಸರ ತಂದಿದೆ. ರಾಜ್ಯದಲ್ಲಿ ನಡೆದ ಒಳಮೀಸಲಾತಿ ಹೋರಾಟದ ಫಲವಾಗಿ ಸದಾಶಿವ ಆಯೋಗ ನೇಮಿಸಲಾಗಿತ್ತು. ಈ ಆಯೋಗ ಸರಕಾರಕ್ಕೆ ವರದಿ ನೀಡಿ ಐದು ವರ್ಷಗಳು ಕಳೆದಿದ್ದರೂ ವರದಿ ಜಾರಿಗೆ ಯಾವ ಸರಕಾರಗಳು ಮನಸ್ಸು ಮಾಡಲಿಲ್ಲ. ಹೀಗಾಗಿ ರಾಷ್ಟ್ರೀಯ ಪಕ್ಷಗಳನ್ನು ಶೇ.85ರಷ್ಟಿರುವ ಬಹುಜನರು ಬಹಿಷ್ಕರಿಸಬೇಕು, ಜೆಡಿಎಸ್ ಮತ್ತು ಬಿಎಸ್ಪಿಗೆ ಜನತೆ ಬೆಂಬಲಿಸಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಬಲಪಂಥೀಯ ಕೋಮುವಾದಿ ಬಿಜೆಪಿಯ ಆಟಾಟೋಪಗಳು ವಿಪರೀತವಾಗಿದ್ದು, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ನ 20 ತಿಂಗಳ ಆಡಳಿತಾವಧಿಯಲ್ಲಿ ಮಾಡಿರುವ ಸಾಧನೆ ಸ್ಮರಣೀಯ. ಹಾಗಾಗಿ ಪ್ರಾದೇಶಿಕ ಪಕ್ಷಕ್ಕೆ ಜನರು ಒಲವು ತೋರಬೇಕು. ಸಮಿತಿಯು ಆಯ್ಕೆಗೊಳಿಸಿರುವ ಮುಖಂಡರ ನಿಯೋಗವು ಮೇ 10ರವರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮತಜಾಗೃತಿ ಅಭಿಯಾನ ನಡೆಸಲಿದೆ. ಅಲ್ಲದೆ ವಿಚಾರ ಸಂಕಿರಣ, ಸಭೆ, ಸಮಾರಂಭ, ಬೀದಿ ನಾಟಕಗಳ ಮೂಲಕ ಜೆಡಿಎಸ್, ಬಿಎಸ್ಪಿ ಪರವಾಗಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಹದಾಯಿ, ಮೇಕೆದಾಟು ನೀರಿನ ಹೋರಾಟವನ್ನು ಬೆಂಬಲಿಸಿ ಬಗೆಹರಿಸುವಲ್ಲಿ ವಿಫಲವಾಗಿವೆ. ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ 3500 ರೈತರಲು ಸಾಲಭಾದೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯ ಸರಕಾರ ಪರಿಶಿಷ್ಟರ ಅಭಿವೃದ್ಧಿಗೆ ಕಳೆದ 4 ವರ್ಷಗಳಲ್ಲಿ 87 ಸಾವಿರ ಕೋಟಿ ನೀಡಿರುವುದಾಗಿ ಹೇಳುತ್ತದೆ. ಆದರೆ, ಅದರಲ್ಲಿ ಶೇ.60ರಷ್ಟು ಹಣವನ್ನು ಇತರೆ ಯೋಜನೆಗೆ ಬಳಸಲಾಗಿದೆ. ಈ ಕೂಡಲೇ ದಲಿತರ ಅಭಿವೃದ್ಧಿಗೆ ಖರ್ಚು ಮಾಡಿದ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಡಾ.ಎನ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ, ಗೌರವಾಧ್ಯಕ್ಷ ಷಡಕ್ಷರಮುನಿ ಸ್ವಾಮೀಜಿ ಸೇರಿ ಪ್ರಮುಖರಿದ್ದರು.







