ಕಾಂಗ್ರೆಸ್ ಸೇರಿ ರೇಖಾ ಹುಲಿಯಪ್ಪಗೌಡ ಪಶ್ಚಾತಾಪ ಪಡಲಿದ್ದಾರೆ: ವರಸಿದ್ದಿ ವೇಣುಗೋಪಾಲ್

ಚಿಕ್ಕಮಗಳೂರು, ಎ.30: ಬಿಜೆಪಿ ಪಕ್ಷದ ನಾಯಕಿ ರೇಖಾ ಹುಲಿಯಪ್ಪಗೌಡ ಅವರು ಪಕ್ಷ ತೊರೆದಿರುವುದು ಬೇಸರ ತಂದಿದೆ. ಸಾಧಾರಣ ಕಾರ್ಯಕರ್ತೆಯಾಗಿದ್ದ ಅವರನ್ನು ರಾಜ್ಯ ಮಟ್ಟದ ನಾಯಕಿಯನ್ನಾಗಿ ಮಾಡಿದ್ದು ಬಿಜೆಪಿ ಪಕ್ಷ. ಅವರ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕಾಂಗ್ರೆಸ್ ಸೇರಿದ್ದಕ್ಕೆ ಅವರು ಪಶ್ಚಾತ್ತಾಪ ಪಡಲಿದ್ದಾರೆಂದು ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ರೇಖಾ ಹುಲಿಯಪ್ಪಗೌಡ ಅವರನ್ನು ಹಿಂದುಳಿದ ವರ್ಗಗಳ ನಾಯಕಿಯನ್ನಾಗಿ ರೂಪಿಸಿದೆ. ರಾಜ್ಯ ಮಟ್ಟದಲ್ಲಿ ನಿಗಮವೊಂದರ ಅಧ್ಯಕ್ಷರನ್ನಾಗಿಸಿದೆ. ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಉಪಾಧ್ಯಕ್ಷೆಯನ್ನಾಗಿಸಿದೆ. ಅವರು ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಗಮನಿಸಿ ಪಕ್ಷವು ಅವರಿಗೆ ಪ್ರತೀ ಹಂತದ ಏಳಿಗೆಯಲ್ಲೂ ತನ್ನ ಪಾತ್ರ ನಿರ್ವಹಿಸಿದೆ. ಆದರೆ ಅವರು ಕೇವಲ ಟಿಕೆಟ್ನ ಆಸೆಗೆ ಬಲಿಯಾಗಿ ಯಾರದ್ದೋ ಮಾತು ಕೇಳಿ ಕಾಂಗ್ರೆಸ್ಗೆ ಸೇರಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಪ್ರೋತ್ಸಾಹಿಸುವ ಮುಖಂಡರಿಗಿಂತ ತುಳಿಯುವವರೇ ಹೆಚ್ಚಿದ್ದಾರೆಂದ ಅವರು, ರೇಖಾ ಹುಲಿಯಪ್ಪಗೌಡ ಕಾಂಗ್ರೆಸ್ ಸೇರಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಪುನಃ ಬಿಜೆಪಿ ಮರಳಲಿದ್ದಾರೆ. ಅವರು ಪಕ್ಷ ತೊರೆದಿರುವುದು ದುಃಖ ತಂದಿದೆಯಾದರೂ ಇದರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಸ್ಷಷ್ಟನೆ ನೀಡಿದರು.
ಬಿ.ಎಲ್.ಶಂಕರ್ ಕಾಂಗ್ರೆಸ್ಗೆ ಮೊದಲು ಆಕ್ಸಿಜನ್ ನೀಡಲಿ: ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಮಾತನಾಡಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಗೆಲುವು ಜಿಲ್ಲೆಗೆ ಆಕ್ಸಿಜನ್ ಇದ್ದಂತೆ ಎಂದು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಬಿ.ಎಲ್.ಶಂಕರ್ ರವರು ಮೊದಲು ಕಾಂಗ್ರೆಸ್ ಪಕ್ಷಕ್ಕೆ ಆಕ್ಸಿಜನ್ ನೀಡಲಿ, ಇದುವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಆಕ್ಸಿಜನ್ ಇರಲಿಲ್ಲವೇ? ಈಗ ಈ ಆಕ್ಸಿಜನ್ ಎಲ್ಲಿಂದ ಬಂತು ಎಂದು ಅವರು ಟೀಕಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಕಳೆದ 5 ವರ್ಷಗಳಿಂದ ಅಧಿಕಾರದಲ್ಲಿದೆ. ಆಗ ಕರಗಡ ನೀರಾವರಿ ಯೋಜನೆ, ಐಯ್ಯನ ಕೆರೆಗೆ ದುರಸ್ತಿ ಸೇರಿದಂತೆ, ಬಯಲು ಸೀಮೆ ಭಾಗದ ಶಾಶ್ವತ ಯೋಜನೆಗೆ ಏಕೆ ಶಂಕರ್ ಪ್ರಯತ್ನ ಮಾಡಲಿಲ್ಲ? ಚುನಾವಣೆಯ ಸಮೀಪದಲ್ಲಿ ಚುನಾವಣೆಯಲ್ಲಿ ಗೆದ್ದರೆ, ಯೋಜನೆಗೆ ಕಾರ್ಯಗತಕ್ಕೆ ತರುತ್ತೇನೆಂದು ಹೇಳಿಕೊಳ್ಳುವವರು ಸಚಿವರಾದಾಗ ಸಂಸದರಾದಾಗ ಈ ಬಗ್ಗೆ ಕೆಲಸ ಮಾಡಲಿಲ್ಲ ಏಕೆ? ಎಂದು ಪ್ರಶ್ನಿಸಿದ ಲೋಕೇಶ್, ಚುನಾವಣೆ ಸಂದರ್ಭದಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮಂಕುಬೂದಿ ಎರಚುವುದನ್ನು ಕಾಂಗ್ರೆಸ್ ಮುಖಂಡರು ನಿಲ್ಲಿಸಬೇಕು. ಬಿ.ಎಲ್.ಶಂಕರ್ ಸೋಲುವುದು ಖಚಿತ, ಸಿ.ಟಿ.ರವಿಯವರನ್ನು ಮತದಾರರು 25,000 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸುತ್ತಾರೆಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡರೆಲ್ಲರೂ ಒಟ್ಟಿಗೆ ಇದ್ದೇವೆಂದು ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಕಳೆದ 5 ವರ್ಷದಿಂದ ಮುಖಂಡರು ಒಟ್ಟಿಗೆ ಇರಲಿಲ್ಲವೇ? ಬಿಜೆಪಿ ಯಿಂದ ಕಾಂಗ್ರೆಸ್ಸಿಗೆ ನಮ್ಮ ಕಾರ್ಯಕರ್ತರು ಯಾರೂ ಸೇರ್ಪಡೆಗೊಂಡಿಲ್ಲ. ದೇವನೂರು ಮತ್ತು ಕಳಸಾಪುರದ ಯಾವ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿಲ್ಲ. ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿರುವ ಎಸ್.ಕೊಪ್ಪಲು ನಟರಾಜ್ ಅವರು, ಬಿಜಿಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆಂದು ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ನಟರಾಜ್ರವರು ಕಳೆದ ಜಿಲ್ಲಾಪಂಚಾಯತ್ ಚುನಾವಣೆಯಿಂದಲೇ ಬಿಜೆಪಿ ಯಿಂದ ಹೊರ ನಡೆದಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕರಪತ್ರದಲ್ಲಿ ಹಲವು ಭಾಗ್ಯಗಳು ಮುದ್ರಣಗೊಂಡಿದೆ. ಈ ಕರಪತ್ರದಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬೆಳವಾಡಿಯ ದೊಡ್ಡಕೆರೆಗೆ ನೀರು ತುಂಬಿಸುವ ಯೋಜನೆ ನಾಪತ್ತೆಯಾಗಿದೆ. ರೈತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರಕಾರ ಪ್ರಚಾರದ ಕರಪತ್ರದಲ್ಲಿ ನೀರಾವರಿ ಯೋಜನೆಗಳನ್ನು ಕೈ ಬಿಟ್ಟಿರುವುದು ದುರ್ದೈವ. ಇದೇ ಇವರ ಕಾಂಗ್ರೆಸ್ಸಿನ ಭಾಗ್ಯವೇ? ರೈತರ ಸಾಲಮನ್ನಾ ಎಂದು ಕರಪತ್ರದಲ್ಲಿ ಮುದ್ರಣ ಆಗಿದ್ದು, ಇದೂವರೆಗೂ ಜಿಲ್ಲೆಯ ಓರ್ವ ರೈತನ ಖಾತೆಗೆ ಹಣ ಬಿಡುಗಡೆ ಮಾಡಿಲ್ಲ. ಕರಪತ್ರದಲ್ಲಿ ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡಿರುವುದು ಕಾಂಗ್ರೆಸ್ನ ಸಾಧನೆ ಎಂದು ಅವರು ಇದೇ ವೇಳೆ ಟೀಕಿಸಿದರು.







