ದ್ವಿತೀಯ ಪಿಯು ಫಲಿತಾಂಶ: 5 ರಿಂದ 7ನೇ ಸ್ಥಾನಕ್ಕೆ ಕುಸಿದ ಚಿಕ್ಕಮಗಳೂರು ಜಿಲ್ಲೆ
ಸಾಯಿ ಏಂಜಲ್ಸ್ ಕಾಲೇಜಿನ ಅನನ್ಯಾ ಜಿಲ್ಲೆಗೆ ಪ್ರಥಮ

ಚಿಕ್ಕಮಗಳೂರು, ಎ.30: ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆ ಈ ಬಾರಿ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದೆ. ಕಳೆದ ವರ್ಷದಲ್ಲಿ ಜಿಲ್ಲೆ 5ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ.67.68 ರಷ್ಟು ಫಲಿತಾಂಶ ಬಂದಿದೆ.
10,111 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 6,843 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 3,425 ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ 2017 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ.58.89 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಶೇ.72.05 ಫಲಿತಾಂಶ ಬಂದಿದ್ದು, 4093 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, 2949 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿ ನ ವಿಜ್ಙಾನ ವಿಭಾಗದಲ್ಲಿ ಶೇ.72.39 -ಫಲಿತಾಂಶ ಬಂದಿದ್ದು ,ಪರೀಕ್ಷೆ ಬರೆದ 2593 ವಿದ್ಯಾರ್ಥಿಗಳಲ್ಲಿ 1877 ಮಂದಿ ತೇರ್ಗಡೆಯಾಗಿದ್ದಾರೆ.
ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಬಾರಿ ತೇರ್ಗಡೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಗ್ರಾಮೀಣ ಭಾಗದ 7782 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 5191 ಮಂದಿ ತೇರ್ಗಡೆಯಾಗಿದ್ದಾರೆ. ಅಂದರೆ, ಶೇ. 66.71ರಷ್ಟು ಫಲಿತಾಂಶ ಬಂದಿದೆ. 2329 ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 1652 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 70.93ರಷ್ಟು ಫಲಿತಾಂಶ ಬಂದಿದೆ.
ಪ್ರತೀ ವರ್ಷದಂತೆ ಬಾಲಕಿಯರೇ ಈ ಬಾರಿ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 4591 ಬಾಲಕರ ಪೈಕಿ 2792 ಮಂದಿ ತೇರ್ಗಡೆಯಾಗಿದ್ದಾರೆ ಅಂದರೆ, ಶೇ. 60.81 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 5520 ವಿದ್ಯಾರ್ಥಿನಿಯರ ಪೈಕಿ 4051 ಮಂದಿ ತೇರ್ಗಡೆಯಾಗಿದ್ದು ಶೇ. 73.39ರಷ್ಟು ಫಲಿತಾಂಶ ಬಂದಿದೆ.
ಕಾಲೇಜುಗಳ -ಫಲಿತಾಂಶ
ಚಿಕ್ಕಮಗಳೂರಿನ ಎಂಇಎಸ್ಪದವಿ ಪೂರ್ವ ಕಾಲೇಜು ಶೇ. 83 ರಷ್ಟು ಫಲಿತಾಂಶ ತೆಗೆದುಕೊಂಡಿದೆ. 314 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ 258 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 47 ಮಂಡಿ ಡಿಸ್ಟಿಕ್ಷನ್ನಲ್ಲಿ ಉತ್ತೀರ್ಣರಾಗಿದ್ದು, 154 ಪ್ರಥಮ, 37 ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಙಾನ ವಿಭಾಗದಲ್ಲಿ ಅನ್ವಿತ್ ಕುಲಾನ್ 570 ಅಂಕವನ್ನು ತೆಗೆದುಕೊಂಡಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶುಭಶ್ರೀ 582, ಜ್ಕುಫಿಯಾ ಕಲಾ ವಿಭಾಗದಲ್ಲಿ 557 ಅಂಕ ತೆಗೆದುಕೊಂಡಿದ್ದಾರೆ.
ಬಿಜಿಎಸ್ ಕಾಲೇಜು ಶೇ. 95.28 ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಪರೀಕ್ಷೆ ಬರೆದ 106 ವಿದ್ಯಾರ್ಥಿಗಳಲ್ಲಿ 101 ಪಾಸಾಗಿದ್ದಾರೆ. ಇವರಲ್ಲಿ 17 ಮಂದಿ ಡಿಸ್ಟಿಂಕ್ಷನ್, 67 ಪ್ರಥಮ, 14 ದ್ವಿತೀಯ, 3 ಮಂದಿ ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಜೆವಿಎಸ್ ಕಾಲೇಜಿಗೆ ಶೇ. 90 ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಗೆ ಪ್ರಥಮ: ನಗರದ ಶ್ರೀಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಕೆ.ಆರ್.ಅನನ್ಯಾ 600ಕ್ಕೆ 586 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದರೆ, ಅದೇ ಶಾಲೆಯ ಸಿ.ಆರ್.ಭೂಮಿಕಾ 585 ದ್ವೀತಿಯ ಹಾಗೂ ಜುನೈದ್ ಖಾನ್ 583 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ಇನ್ನು ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳ ಒಟ್ಟು 136 ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ.
ಓದಿದ ವಿಷಯಗಳಲ್ಲಿ ಯಾವುದು ಮುಖ್ಯವಾದದ್ದು ಎಂಬುದನ್ನು ಗುರುತು ಹಾಕಿಕೊಂಡು ಓದುತ್ತಿದ್ದೆ. ಪ್ರಮುಖವಾದ ಅಂಶಗಳ ಬಗ್ಗೆ ನೋಟ್ ಮಾಡಿಕೊಳ್ಳುತ್ತಿದ್ದೆ. ಅರ್ಥ ವಾಗದ್ದನ್ನು ಉಪನ್ಯಾಸಕರನ್ನು ಬೆನ್ನತ್ತಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಇದು ಹೆಚ್ಚು ಅಂಕಗಳಿಸಲು ಅನುಕೂಲವಾಯಿತು. ಹೆಚ್ಚು ಅಂಕಕ್ಕಾಗಿ ವಿಶೇಷವಾಗಿ ಓದುತ್ತಿದ್ದೆ. ಪೋಷಕರು ಹಾಗೂ ಉಪನ್ಯಾಸಕರು ತುಂಬ ಸಪೋರ್ಟ್ ಮಾಡಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು.
- ಅನನ್ಯಾ, ಜಿಲ್ಲೆಯ ಟಾಪರ್, ಸಾಯಿ ಎಂಜಲ್ಸ್ ಕಾಲೇಜು







