ಮಂಗಳೂರು: ಕಾರ್ಮಿಕ ಕಾಲ್ನಡಿಗೆ ಜಾಥಾ
ಮಂಗಳೂರು, ಮೇ 1: ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ಮತ್ತು ಅಖಿಲ ಭಾರತ ಬಂದರು ಕಾರ್ಮಿಕರ ಒಕ್ಕೂಟದ ವತಿಯಿಂದ ಮಂಗಳವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ಮತ್ತು ಬಹಿರಂಗ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆ್ ಟ್ರೇಡ್ ಯೂನಿಯನ್ನ (ಎಐಸಿಸಿಟಿಯು) ರಾಷ್ಟ್ರೀಯ ಉಪಾಧ್ಯಕ್ಷ ಶಂಕರ್ ಕಾರ್ಮಿಕ ದಿನಾಚರಣೆಯ ಸಂದರ್ಭ ಕೂಡಾ ಕಾರ್ಮಿಕರು ಸಿಹಿ ಹಂಚಿ ಸಂಭ್ರಮ ಪಡುವ ಸ್ಥಿತಿಯಲ್ಲಿಲ್ಲ. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಮತ್ತೆ ಮತ್ತೆ ಬಲಿದಾನ ಮಾಡಬೇಕಾದ ದುಸ್ಥಿತಿ ಇದೆ ಎಂದು ಹೇಳಿದರು.
ಅಖಿಲ ಭಾರತ ಬಂದರು ಕಾರ್ಮಿಕ ಒಕ್ಕೂಟದ ಸಂಚಾಲಕ ದಿವಾಕರ್ ಎಸ್. ಮಾತನಾಡಿ ಬಂದರು ಕಾರ್ಮಿಕರು ಕನಿಷ್ಠ ವೇತನ, ವಿಮಾ ಸೌಲಭ್ಯ, ಹೆಚ್ಚುವರಿ ಕೆಲಸ ಮಾಡಿದರೆ ಹೆಚ್ಚುವರಿ ವೇತನ ಇತ್ಯಾದಿ ಸೌಲಭ್ಯಗಳ ಬೇಡಿಕೆಯನ್ನು ಮುಂದಿಟ್ಟರೂ ಕೂಡಾ ಆಡಳಿತ ವರ್ಗ ನಿರ್ಲಕ್ಷ ತಾಳಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿ ಎರಡು ತಿಂಗಳಾಗಿದೆ. ಮುಂದಿನ ದಿನಗಳಲ್ಲಿ ಸ್ಪಂದನೆ ಸಿಗದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಹಿರಂಗ ಸಭೆಗೆ ಮುನ್ನ ನಗರದ ಜ್ಯೋತಿಯ ಅಂಬೇಡ್ಕರ್ ವೃತ್ತದಿಂದ ಪುರಭವನದ ಗಾಂಧಿ ಪಾರ್ಕ್ ವರೆಗೆ ನಡೆದ ಬೃಹತ್ ರ್ಯಾಲಿಯಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು. ಟ್ರೇಡ್ ಯೂನಿಯನ್ನ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್, ಅಖಿಲ ಭಾರತ ಬಂದರು ಕಾರ್ಮಿಕ ಒಕ್ಕೂಟದ ಕಾರ್ಯದರ್ಶಿ ಮೋಹನ್, ನ್ಯಾಯವಾದಿ ಸರ್ಪ್ರಾಜ್, ಭರತ್ ಮೊದಲಾದವರು ಹಾಜರಿದ್ದರು.







