‘ಹಿಂದೂ ಲಿಂಗಾಯತ’ ಎಂದು ಹೇಳುವುದು ಮಹಾ ಅಪರಾಧ: ಮಾತೆ ಮಹಾದೇವಿ
ಬೆಳಗಾವಿ, ಮೇ1: ‘ಲಿಂಗಾಯತ ಧಮಕ್ಕೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸಮುದಾಯಕ್ಕೆ ಉಪಕಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಬೆಂಬಲಿಸಿ’ ಎಂದು ಬಸವ ಧರ್ಮಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಮನವಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಬಸವ ಮಂಟಪ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಸಂಬಂಧ ಸಿದ್ದರಾಮಯ್ಯ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ನಾವೆಲ್ಲರೂ ಅವರಿಗೆ ಉಪಕಾರ ಮಾಡಬೇಕು ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಸಂಬಂಧ ಎಲ್ಲರೂ ದೃಢ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಸಿದ್ದರಾಮಯ್ಯನವರಿಗೆ ತಿಳಿಸಿದ್ದು, ನುಡಿದಂತೆ ನಡೆದುಕೊಳ್ಳಬೇಕು ಎಂದ ಅವರು, ಈ ವಿಚಾರದಲ್ಲಿ ಯಾವುದೇ ಮುಚ್ಚು ಮರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
‘ಜಾತಿ ಎಂದರೆ ಕತ್ತಲು, ಧರ್ಮವೆಂದರೆ ಬೆಳಕು ಎನ್ನುವುದನ್ನು ಮರೆಯಬಾರದು. ಲಿಂಗಾಯತ ಜಾತಿಯಲ್ಲ ಅದೊಂದು ಧರ್ಮ ಎನ್ನುವುದನ್ನು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ ಎಂದ ಅವರು, ‘ಹಿಂದೂ ಲಿಂಗಾಯತ’ ಎಂದು ಹೇಳುವುದು ಮಹಾ ಅಪರಾಧ ಎಂದು ವಿಶ್ಲೇಷಿಸಿದರು.