ಜೆ.ಆರ್.ಲೋಬೋರ ಸಾಧನೆಯ ಹಾದಿಯಲ್ಲಿ ಸುಳ್ಳುಗಳ ಕಂತೆ: ಬಿಜೆಪಿ

ಮಂಗಳೂರು, ಮೇ 2: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಅವರು ಕ್ಷೇತ್ರದಲ್ಲಿ ಮನೆಗಳಿಗೆ ಹಂಚುತ್ತಿರುವ ‘ಸಾಧನೆಯ ಹಾದಿಯಲಿ’ ಪುಸ್ತಕ ಸುಳ್ಳುಗಳ ಕಂತೆ. ಬಿಜೆಪಿ ಅಧಿಕಾರಾವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಉಪಯೋಗಿಸಿ ತನ್ನ ಸಾಧನೆ ಎಂಬುದಾಗಿ ಶಾಸಕರು ಬಿಂಬಿಸಿದ್ದಾರೆ ಎಂದು ಬಿಜೆಪಿಯ ಕಾರ್ಪೊರೇಟರ್ ರೂಪಾ ಡಿ. ಬಂಗೇರ ಆರೋಪಿಸಿದ್ದಾರೆ.
ಬಿಜೆಪಿಯ ಮಂಗಳೂರು ದಕ್ಷಿಣ ಚುನಾವಣಾ ಕಚೇರಿಯಲ್ಲಿಂದು ಜೆ.ಆರ್ ಲೋಬೋ ಅವರ ಸಾಧನೆಯ ಹಾದಿಯಲಿ ಪುಸ್ತಕವನ್ನು ‘ಫೇಲ್’ ಎಂಬ ಒಕ್ಕಣೆಯೊಂದಿಗೆ ಮಾಧ್ಯಮದೆದುರು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಆಗಿತ್ತು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿದ್ದರೆ, ಜನರಿಗೆ ಸಾಧನೆಯ ಬಗ್ಗೆ ತಿಳಿಯುತ್ತಿತ್ತು. ಆದರೆ ಯಾವುದೇ ರೀತಿಯ ಸ್ಪಷ್ಟ ದಾಖಲೆ, ಮಾಹಿತಿ ಇಲ್ಲದೆ, ಅಂತೆಕಂತೆಗಳನ್ನು ಒಳಗೊಂಡ ಮಾಹಿತಿಯನ್ನು ಜನರಿಗೆ ನೀಡುವ ಮೂಲಕ ಶಾಸಕರು ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ನಗರೋತ್ಥಾನ ಯೋಜನೆಯಡಿ ಬಿಜೆಪಿ ಅವಧಿಯಲ್ಲಿ 200 ಕೋಟಿ ರೂ. ಬಿಡುಗಡೆಯಾಗಿ, 129 ಕೋಟಿ ರೂ.ಗಳ ಅನುದಾನದಲ್ಲಿ ಪ್ರಮುಖ ರಸ್ತೆ, ಅಭಿವೃದ್ಧಿ, ಅಗಲೀಕರಣಗೊಂಡಿದೆ. ಬಿಜೆಪಿ ಅವಧಿಯಲ್ಲಿ ಶೇ. 89ರಷ್ಟು ಈ ಹಣ ಸದ್ಬಳಕೆಯಾಗಿದೆ. ಆದರೆ ಕಾಂಗ್ರೆಸ್ ತನ್ನ ಅವಧಿಯಲ್ಲಿ ಕೇವಲ 100 ಕೋಟಿ ರೂ.ಗಳನ್ನು ಮಾತ್ರವೇ ಮಂಜೂರು ಮಾಡಿತ್ತು. ಅದರಲ್ಲಿ ಬಿಡುಗಡೆಯಾಗಿದ್ದು ಕೇವಲ 59.99 ಕೋಟಿ ರೂ. ಎಂದವರು ಹೇಳಿದರು.
ಶಾಸಕರು ತಮ್ಮ ಪುಸ್ತಕದಲ್ಲಿ ನೀಡಿರುವ ಅಂಕಿಅಂಶಗಳು ಸುಳ್ಳು. ಪ್ರೀಮಿಯಂ ಎಫ್ಎಆರ್ ಅನುದಾನವನ್ನು ಕಾನೂನು ಮೀರಿ ಬಳಸಲಾಗಿದೆ. ಕದ್ರಿ ಪಾರ್ಕ್ನಲ್ಲಿ ಪುಟಾಣಿ ರೈಲಿಗೆ ರಾತ್ರಿ ವೇಳೆ ಮುಖ್ಯಮಂತ್ರಿ ಬಂದು ಹಸಿರು ಬಾವುಟ ತೋರಿಸಿದ್ದರೂ ಇನ್ನೂ ರೈಲು ಮಾತ್ರ ಓಡುತ್ತಿಲ್ಲ. ಸಂಗೀತ ಕಾರಂಜಿಗೆ ಅಡಿಗಲ್ಲು ಹಾಕಿ ಅನುದಾನ ಬಿಡುಗಡೆ ಮಾಡಿಸಿದ್ದು, ಹಿಂದಿನ ಬಿಜೆಪಿ ಶಾಸಕರು. ಆಶ್ರಯ ಯೋಜನೆಯಡಿ ಬಹುಮಹಡಿ ಕಟ್ಟಡದ ಜಿ+3 ಮಾದರಿಯ ಕಲ್ಪನೆ ಮತ್ತು ನಿಯಮ ರೂಪುಗೊಂಡಿದ್ದು ಬಿಜೆಪಿ ಅಧಿಕಾರಾವಧಿಯಲ್ಲಿ ಎಂದು ಹೇಳಿದರು.
ಶಾಸಕರ ಪುಸ್ತಕದ ಪ್ರಕಾರ ಮಹಾನಗರ ಪಾಲಿಕೆ ಒಟ್ಟು ಕಾಮಗಾರಿ 457.56 ಕೋಟಿ ರೂ.ಗಳದ್ದು. ಅವುಗಳಲ್ಲಿ 208.18 ಕೋಟಿ ರೂ. ಕಾಮಗಾರಿ ಪುನರ್ ಉಲ್ಲೇಖಿತವಾಗಿರುವಂತದ್ದು. ಅವರದ್ದೇ ಲೆಕ್ಕಾಚಾರ ಪ್ರಕಾರ 249.39 ಕೋಟಿ ರೂ.ಗಳಷ್ಟು ಕಾಮಗಾರಿ 5 ವರ್ಷದಲ್ಲಾಗಿದೆ. ಅದರಲ್ಲಿ 73.35 ಕೋಟಿ ರೂ. ಕಾಮಗಾರಿ ಸಂಪೂರ್ಣಗೊಂಡಿದ್ದರೆ, 94.37 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ. 78.66 ಕೋಟಿ ರೂ. ಕಾಮಗಾರಿ ಆರಂಭವೇ ಆಗಿಲ್ಲ. ಸಾಧನೆಯ ಹಾದಿಯಲಿ ಇಷ್ಟೊಂದು ಸುಳ್ಳು ಹೇಳುವ ಅಗತ್ಯವೇನು? ಇಂತಹ ಸುಳ್ಳು ಭರವಸೆಗಳ ಬಗ್ಗೆ ಜನರು ಮಾರು ಹೋಗಬಾರದು ಎಂದು ರೂಪಾ ಡಿ. ಬಂಗೇರ ಹೇಳಿದರು.
ಗೋಷ್ಠಿಯಲ್ಲಿ ಮುಖಂಡರಾದ ರವಿಶಂಕರ ಮಿಜಾರು, ನವೀನ್ ಚಂದ್ರ, ಭಾಸ್ಕರ ಚಂದ್ರ ಉಪಸ್ಥಿತರಿದ್ದರು.