ರಾಜಕೀಯ ಪ್ರೇರಿತ ದಾಳಿ: ರಾಜೇಶ್ ಜಿ.ಪಿ. ಆರೋಪ
ಉದ್ಯಮಿ ಮನೆ, ಕಚೇರಿಗೆ ಐಟಿ ದಾಳಿ

ಮಂಗಳೂರು, ಮೇ 2: ನಗರದ ಉದ್ಯಮಿಯೊಬ್ಬರ ಮನೆ ಮತ್ತು ಕಚೇರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ನಗರದ ಮೋರ್ಗನ್ಗೇಟ್ನಲ್ಲಿರುವ ವೈಷ್ಣವಿ ಎಕ್ಸ್ಪ್ರೆಸ್ ಕಾರ್ಗೋ ಪ್ರೈ.ಲಿ. ಇದರ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಜಿ.ಪಿ. ಅವರ ಮನೆಗೆ ಮಂಗಳವಾರ ಸಂಜೆ ಸುಮಾರು 5 ಗಂಟೆಯಿಂದ ರಾತ್ರಿ 8ರವರೆಗೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸಿದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ ‘ರಾಜೇಶ್ ದಾಳಿ ನಡೆದಿದ್ದು ಹೌದು. ಅಧಿಕಾರಿಗಳು ಎಲ್ಲ ದಾಖಲೆಪತ್ರಗಳನ್ನು ಪರಿಶೀಲಿಸಿದ್ದಾರೆ. ನಗದಿಗಾಗಿ ಹುಡುಕಾಡಿದ್ದಾರೆ. ಆದರೆ, ಅವರಿಗೆ ಯಾವುದೂ ಸಿಗಲಿಲ್ಲ. ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ನಾನೂ ಕೂಡ ಸಹಕರಿಸಿದ್ದೇನೆ’ ಎಂದಿದ್ದಾರೆ.
‘ನಾನೊಬ್ಬ ಉದ್ಯಮಿ. ನನ್ನ ಮನೆಗೆ ಎಲ್ಲ ಪಕ್ಷಗಳ ಮುಖಂಡರು, ರಾಜಕಾರಣಿಗಳು ಸೌಹಾರ್ದ ಭೇಟಿ ನೀಡುತ್ತಿದ್ದಾರೆ. ಅದಲ್ಲದೆ ಆಸುಪಾಸಿನ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ನನ್ನೊಂದಿಗೆ ಒಡನಾಟದಲ್ಲಿದ್ದಾರೆ. ಅದರಲ್ಲಿ ಹಿಂದೂಗಳಲ್ಲದೆ ಮುಸ್ಲಿಂ, ಕ್ರೈಸ್ತರೂ ಇದ್ದಾರೆ. ಇದು ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯೊಂದಿಗೆ ಇರುವ ವ್ಯಕ್ತಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ದಾಳಿಯ ಹಿಂದೆ ಈ ವ್ಯಕ್ತಿಯ ಕೈವಾಡವಿರುವ ಬಗ್ಗೆ ನನಗೆ ಶಂಕೆ ಇದೆ. ಈ ವ್ಯಕ್ತಿ ಯಾರು, ಏನು, ಅವರ ಹಿನ್ನೆಲೆಯ ಬಗ್ಗೆ ಎರಡು ದಿನದಲ್ಲಿ ಬಹಿರಂಗ ಪಡಿಸುತ್ತೇನೆ’ ಎಂದು ರಾಜೇಶ್ ತಿಳಿಸಿದ್ದಾರೆ.