ವಾಗೀಶ್ ಭಟ್ಗೆ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪ್ರದಾನ

ಕುಂದಾಪುರ, ಮೇ 2: ಬೇರೆ ಬೇರೆ ಕ್ಷೇತ್ರಗಳ ಉದ್ಯೋಗಸ್ಥರಿಗೆ ಸಿಗುವ ಮನ್ನಣೆ ಕಲಾವಿದರಿಗೂ ಸಿಗುವಂತಾಗಬೇಕು. ಅವರ ಬದುಕು ಬವಣೆ ಯಾಗದೇ ವೃತ್ತಿ ಗೌರವವನ್ನು ಹೆಚ್ಚಿಸುವ ಕೆಲಸ ಪ್ರಜ್ಞಾವಂತ ಸಮಾಜದಿಂದ ಆಗಬೇಕಿದೆ. ಆಗ ಮಾತ್ರ ಕಲಾವಿದರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ನಾದೋಪಾಸಕ ವಿದ್ವಾನ್ ವಾಗೀಶ ಭಟ್ ಹೇಳಿದ್ದಾರೆ.
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಮತ್ತು ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಸ್ಮಾರಕ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಆಶ್ರಯದಲ್ಲಿ ‘ಗೊಂಬೆ ಮನೆ’ಯಲ್ಲಿ 2018ನೇ ಸಾಲಿನ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಸ್ವೀಕರಿಸಿ ಮಾತನಾಡುತಿದ್ದರು.
ಪ್ರಶಸ್ತಿಗಾಗಿ ಲಾಬಿ ಮಾಡಬೇಕಾದ ಕಾಲದಲ್ಲಿ ತನ್ನ ಜೀವಮಾನದ ಸಾಧನೆಯನ್ನು ಪರಿಗಣಿಸಿ 350 ವರ್ಷಗಳ ಪರಂಪರೆಯನ್ನು ಹೊಂದಿರುವ ಉಪ್ಪಿನಕುದ್ರು ಗೊಂಬೆಯಾಟ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿರುವುದು ಬದುಕಿನ ಅವಿಸ್ಮರಣೀಯ ದಿನವಾಗಿದ್ದು, ಬದುಕಿನುದ್ದಕ್ಕೂ ಪ್ರೇರಕ ಶಕ್ತಿಯಾಗಿದೆ ಎಂದು ವಾಗೀಶ ಭಟ್ ನುಡಿದರು.
ಇದೇ ಸಂದರ್ಭದಲ್ಲಿ ಗೊಂಬೆಯಾಟ ಕಲಾವಿದರಿಗೆ ಸಮವಸ್ತ್ರ ವಿತರಣೆ, ಹಿರಿಯ ಕಲಾವಿದರಿಗೆ ಹಾಗೂ ಅಕಾಡೆಮಿ ವಿದ್ಯಾರ್ಥಿಗಳಿಗೆ ಧನ ಸಹಾಯ, ಶಾಲೆಯೆಡೆಗೆ ಗೊಂಬೆ ನಡಿಗೆ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಅಕಾಡೆಮಿಯ ವಿದ್ಯಾರ್ಥಿಗಳಿಂದ ‘ಲಂಕಿಣಿ ಸಂಹಾರ’ ಗೊಂಬೆಯಾಟ ಪ್ರದರ್ಶನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಿತು.
ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಹಾಗೂ ಭಾಕಿಸಂ ಪ್ರದಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ‘ಗೊಂಬೆ ಪ್ರಪಂಚ’ ಪತ್ರಿಕೆ ಬಿಡುಗಡೆ ಗೊಳಿಸಿದರು. ಉದ್ಯಮಿ ನಾಗರಾಜ ಭಟ್ ಮಲ್ಪೆ ಶಾಲೆಯೆಡೆಗೆ ಗೊಂಬೆ ನಡಿಗೆ ಸಿಡಿ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರದ ಡಾ.ಬಿ.ವೆಂಕಟರಮಣ ಉಡುಪ, ನಿವೃತ್ತ ಸೀನಿಯರ್ ಮೆನೇಜರ್ ಬಾಬುರಾಯ ಶೆಣೈ, ಹಿರಿಯ ಗೊಂಬೆಯಾಟ ಕಲಾವಿದ ಯು. ವಾಮನ ಪೈ ಹೆಮ್ಮಾಡಿ ಉಪಸ್ಥಿತರಿದ್ದರು. ಅಕಾಡೆಮಿ ಅದ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ನಾಗೇಶ್ ಶ್ಯಾನುಬಾಗ್ ಕಾರ್ಯಕ್ರಮ ನಿರೂಪಿಸಿ, ಉದಯ ಭಂಡಾರ್ಕಾರ್ ವಂದಿಸಿದರು.