ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಮೋದ್ರನ್ನು ಗೆಲ್ಲಿಸಿ: ಬಿ. ಭುಜಂಗ ಶೆಟ್ಟಿ
ಬ್ರಹ್ಮಾವರ, ಮೇ 2: ಬಡವರ, ನೊಂದವರ ಆಪತ್ಬಾಂದವನಾಗಿ, ಉಡುಪಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ 5 ವರ್ಷಗಳಲ್ಲಿ ಗರಿಷ್ಠ ಅನುದಾನವನ್ನು ಸರಕಾರದ ವಿವಿಧ ಯೋಜನೆಗಳ ಮೂಲಕ ಮಂಜೂರುಗೊಳಿಸಿ ಜನರ ಮನೆ ಮನೆಗಳಿಗೆ ಮುಟ್ಟಿಸಿ ಜಾತಿ ಧರ್ಮ, ಮತ ಬೇದವಿಲ್ಲದೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆ ಪ್ರಮೋದ್ ಮಧ್ವರಾಜ್ ಅವರದ್ದು. ಈ ಹಿನ್ನಲೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಂ.1 ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಮೋದ್ ಮಧ್ವರಾಜ್ರ ಗೆಲುವು ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಅತೀ ಅಗತ್ಯ ಎಂದು ಉಡುಪಿ ಜಿಪಂನ ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ ಹೇಳಿದ್ದಾರೆ.
ಬ್ರಹ್ಮಾವರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಸರ್ವರನ್ನು ಸಮಭಾವದಿಂದ ನೋಡುವ ಪ್ರಮೋದ್ ಗೆಲುವು ಶತ:ಸಿದ್ಧವಾದರೂ ಕಾರ್ಯಕರ್ತರು ಅತಿ ಆತ್ಮವಿಶ್ವಾಸ ಹೊಂದದೆ ಪ್ರತಿಯೊಂದು ಮನೆ ಮನೆಗಳಿಗೂ ಸರಕಾರದ ಸಾಧನೆಗಳನ್ನು ಮುಟ್ಟಿಸುವ ಮೂಲಕ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ಕಿವಿಮಾತು ಹೇಳಿದರು.
ಸಭೆಯಲ್ಲಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಹೆಚ್. ನಿತ್ಯಾನಂದ ಶೆಟ್ಟಿ, ತಾರನಾಥ ಶೆಟ್ಟಿ ಹಿಲಿಯಾಣ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಎಸ್. ನಾರಾಯಣ್ ಉಪಸ್ಥಿತರಿದ್ದರು.