ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ ಚಲಾಯಿಸಿ : ಪ್ರಧಾನಿ ಮೋದಿ

ಕಲಬುರ್ಗಿ, ಮೇ 3: ಕರ್ನಾಟಕದ ಉಜ್ವಲ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ ಚಲಾಯಿಸಿ, ಕೇಂದ್ರ ಸರಕಾರ ರಾಜ್ಯ ಬಿಜೆಪಿ ಸರಕಾರದ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲಿದೆ. ಹೀಗಾಗಿ ಕಾಂಗ್ರೆಸ್ ಸೋಲಿಸಿ, ಬಿಜೆಪಿ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಗುರುವಾರ ನಗರದ ಎನ್ವಿ ಮೈದಾನದಲ್ಲಿ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡದಲ್ಲೆ ಭಾಷಣ ಆರಂಭಿಸಿ ಬಸವಣ್ಣ, ಸಂತ ವಿಜ್ಞಾನೇಶ್ವರ, ರಾಜಾ ವೆಂಕಟಪ್ಪನಾಯಕ ಅವರನ್ನು ನೆನೆದು, ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಎಂದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಎಷ್ಟೇ ಸೆಖೆಯಾದರೂ, ಸಹಿಸಬಹುದು. ಆದರೆ ಕಾಂಗ್ರೆಸ್ ಆಡಳಿತ ಸಹಿಸುವುದಿಲ್ಲ ಎನ್ನುವುದು ನಿಮ್ಮ ಇಷ್ಟ ಎಂದರು.
ಚುನಾವಣೆಗಳು ಬರುತ್ತವೆ ಹೋಗುತ್ತವೆ. ದೇಶದಲ್ಲಿ ಕಾಂಗ್ರೆಸ್ ಸೋಲಿನ ಪರ್ವ ಆರಂಭವಾಗಿದ್ದು, ನಮ್ಮ ಕ್ಷೇತ್ರದಲ್ಲಿ ಯಾರು ಗೆಲ್ತಾರೆ, ಸೋಲ್ತಾರೆ ಅನ್ನೋ ವಿಷಯದ ಚುನಾವಣೆ ಇದಲ್ಲ. ರಾಜ್ಯದ ಯುವಜನರ, ರೈತರ, ಭವಿಷ್ಯ ಸುಧಾರಿಸುವ, ಮಹಿಳೆಯರ ಸುರಕ್ಷೆ ಕಾಪಾಡುವ ಚುನಾವಣೆ ಇದು ಎಂದು ಅವರು ತಿಳಿಸಿದರು.
ಕಾಳಜಿ ಇಲ್ಲ: ಕಲಬುರಗಿಯನ್ನು ತೊಗರಿ ಕಣಜ ಎಂದು ಕರೆಯುತ್ತಾರೆ. ಕೇಂದ್ರ ಸರಕಾರ ತೊಗರಿ ಬೆಳೆಗಾರರಿಗೆ ಉತ್ತೇಜನ ನೀಡಿದೆ. ಆದರೆ, ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದ ಅವರು, ರೈತರಿಗಾಗಿ ಬಿಜೆಪಿ ಫಸಲ್ ಬಿಮಾ ಯೋಜನೆ ರೂಪಿಸಲಾಗಿದೆ. ಇದರಿಂದ ರೈತರಿಗೆ ಭರಪೂರ ಸೌಲಭ್ಯ ಸಿಗಲಿದೆ ಎಂದರು.
ಖರ್ಗೆ ಬಗ್ಗೆ ಟೀಕೆ: ದಲಿತರ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಮಾಡುತ್ತಿದ್ದು, ಈ ಚುನಾವಣೆಯಲ್ಲಿ ಮತ ನೀಡಿದರೆ ಖರ್ಗೆಯವರನ್ನ ಸಿಎಂ ಮಾಡುವುದಾಗಿ ದಲಿತರ ಮತ ಪಡೆಯುತ್ತಿದ್ದಾರೆ. ಖರ್ಗೆ ಕುಟುಂಬದ ಆಸ್ತಿ ಯಾರಿಗಾದರೂ ಗೊತ್ತಿದೆಯಾ ಎಂದು ಮೋದಿ ಇದೇ ವೇಳೆ ಟೀಕಿಸಿದರು.
ನಮ್ಮ ಸೈನಿಕರು ಧೈರ್ಯದಿಂದ ಮುನ್ನುಗ್ಗಿ ಭಯೋತ್ಪಾದಕರ ಮೇಲೆ ಸರ್ಜಿಕಲ್ ಸ್ಟೈಕ್ ಮಾಡಿದರು. ಆದರೆ ಕಾಂಗ್ರೆಸ್ ಅವರನ್ನು ಅವಮಾನಿಸಿತು. ನಮ್ಮ ಸೈನಿಕರು ಬಂದೂಕು ತಗೊಂಡು ಹೋಗಬೇಕೋ? ಕ್ಯಾಮೆರಾ ತಗೊಂಡು ಹೋಗಬೇಕೋ? ಎಂದು ಇದೇ ವೇಳೆ ಲೇವಡಿ ಮಾಡಿದರು
‘ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆಂದು ಹೇಳಿ ಕಾಂಗ್ರೆಸ್ ಮತ ಪಡೆದಿತ್ತು. ಆದರೆ, ಅನಂತರ ಶಾಸಕರ ಗುಪ್ತ ಮತದಾನದ ಹೆಸರಿನಲ್ಲಿ ಬೇರೆಯವರನ್ನು ಸಿಎಂ ಮಾಡಿ ದಲಿತರಿಗೆ ಮೋಸ ಮಾಡಿದೆ’
-ನರೇಂದ್ರ ಮೋದಿ ಪ್ರಧಾನಿ







