ಕರ್ನಾಟಕ ಬಿಜೆಪಿ ನಾಯಕರ ಮೇಲೆ ಮೋದಿಗೆ ವಿಶ್ವಾಸವಿಲ್ಲ: ಜೈವೀರ್ ಶೆರ್ಗಿಲ್
ಬಿ.ಸಿ.ರೋಡ್ನಲ್ಲಿ ಕಾಂಗ್ರಸ್ ಚುನಾವಣಾ ಪ್ರಚಾರ ಸಭೆ

ಬಂಟ್ವಾಳ, ಮೇ 3: ನರೇಂದ್ರ ಮೋದಿಗೆ ಕರ್ನಾಟಕದಲ್ಲಿನ ಬಿಜೆಪಿಯ ನಾಯಕರ ಮೇಲೆ ವಿಶ್ವಾಸ ನಂಬಿಕೆಯಿಲ್ಲದ ಕಾರಣ ತನ್ನ ಹುದ್ದೆ ಹಾಗೂ ಜವಾಬ್ದಾರಿಯನ್ನು ಮರೆತು ಕರ್ನಾಟಕದಲ್ಲಿ ಸುತ್ತಾಡುತ್ತಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರ ಜೈವೀರ್ ಶೆರ್ಗಿಲ್ ಟೀಕಿಸಿದ್ದಾರೆ.
ಗುರುವಾರ ಬಿ.ಸಿ.ರೋಡ್ನಲ್ಲಿನ ಪಕ್ಷದ ಚುನಾವಣಾ ಪ್ರಚಾರದ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಶೆರ್ಗಿಲ್, ಪ್ರಧಾನಿ ನರೇಂದ್ರ ಮೋದಿಯವರು ಕಳೆದ ನಾಲ್ಕು ವರ್ಷಗಳಿಂದ ವಿದೇಶ ಸುತ್ತುತ್ತ ಟಿವಿಯಲ್ಲಿ ಮಾತ್ರವೇ ಕಾಣ ಸಿಗುತ್ತಿದ್ದರು. ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗುವುದು ಖಚಿತ ಎಂದು ತಿಳಿದ ಮೇಲೆ ರಾಜ್ಯದಲ್ಲಿಯೇ ಪ್ರವಾಸ ಮಾಡುತ್ತಾ ಜನರ ಮುಂದೆ ಕಾಣುತ್ತಿದ್ದಾರೆ. ದೇಶದ ಪ್ರಧಾನಿಯಾಗಿರುವ ಮೋದಿ, ರಾಜ್ಯದ ಮುಖ್ಯಮಂತ್ರಿಯಂತೆ ಜಿಲ್ಲೆಯಾದ್ಯಂತ ಸುತ್ತಾಡುತ್ತ ಮತ ಯಾಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಗ್ಯಾಸ್, ಡಿಸೆಲ್, ಪೆಟ್ರೋಲ್ ಬೆಲೆ ಕೂಡಾ ಬೆಲೆಯೇರುತ್ತಿದ್ದು, ಮಧ್ಯಮ ವರ್ಗ ಹಾಗೂ ಬಡವರ ಜೀವನ ದುಸ್ತರವಾಗಿದೆ. ಸಾಮಾನ್ಯ ಜನರ, ರೈತರು, ಬೆಸ್ತರುಗಳು ಮೋದಿ ಕೊಟ್ಟ ಆಶ್ವಾಸನೆಯಂತೆ ಕೇಂದ್ರ ಸರಕಾರದ ನೆರವಿಲ್ಲದೆ ಮೋಸ ಹೋಗಿದ್ದಾರೆ. ಪ್ರಧಾನಿ ಮೋದಿ ಪೆಟ್ರೋಲ್, ಡೀಸೆಲ್ ಬೆಲೆಯೇರಿಸಿ ಸುಮಾರು 10 ಲಕ್ಷ ಕೋಟಿ ಹಣವನ್ನು ಲೂಟಿ ಮಾಡುವುದರೊಂದಿಗೆ ಬಡವರ ಕಿಸೆಗೆ ನೇರವಾಗಿ ಕತ್ತರಿ ಹಾಕಿದ್ದಾರೆ ಎಂದು ಆರೋಪಿಸಿದರು.
ಆಂದ್ರ ಪ್ರದೇಶ, ಬಿಹಾರಕ್ಕೆ ಬಾರೀ ಅಶ್ವಾಸನೆ ನೀಡಿ ಮೋಸ ಮಾಡಿದ್ದು, ಇದೀಗ ಕರ್ನಾಟಕದಲ್ಲಿ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಚುನಾವಣೆ ಯಲ್ಲಿ ತೊಡಗಿಕೊಂಡಿದ್ದಾರೆ ಎಂದರು. ಮೋದಿ ಅವರು ಯುವ ಜನತೆಯ ಉದ್ಯೋಗವನ್ನೆ ಕಸಿದುಕೊಂಡಿದ್ದಾರೆ ಎಂದ ಅವರು, ಕರಾವಳಿ ಮೀನುಗಾರರಿಗೆ ಇನ್ನೂ ಕೂಡಾ ಕೇಂದ್ರದ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಇದರ ಬಗ್ಗೆ ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲ್ ಉತ್ತರಿಸಬೇಕು. ಅಲ್ಲದೆ, ಮಂಗಳೂರಿನ ಕುಳಾಯಿ ಜೆಟ್ಟಿ ಬಂದರಿಗೆ ಇನ್ನೂ ಕೂಡಾ ಧನ ಸಹಾಯ ಮಂಜೂರಾತಿ ಮಾಡಿಲ್ಲ ಎಂದೂ ಶೆರ್ಗಿಲ್ ದೂರಿದರು.
ಆಂದ್ರ ಹಾಗೂ ಬಿಹಾರದ ಜನತೆಯ ಮೊಣಕೈಗೆ ಸಿಹಿ ಇಟ್ಟು ಮೋಸ ಮಾಡಿದಂತೆಯೆ, ಕರ್ನಾಟಕದ ಜನೆತೆಗೂ ಅದನ್ನೇ ಮಾಡಲು ಹೊರಟಿದ್ದಾರೆ. ಮೋದಿ ಮತ್ತು ಶಾ ಇಬ್ಬರು ಕೋಮು ಗಲಭೆಯ ಪ್ರಚಾರಕರು. ಕಾಂಗ್ರೆಸ್ಸ ಶಾಸಕರುಗಳು ಊರಿನ ಅಭಿವೃದ್ಧಿಗಾಗಿ ಕೆಲಸ ಮಾಡಿದರೆ, ಬಿಜೆಪಿ ಊರಿಗೆ ಕೋಮು ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಈ ರಾಜ್ಯದ ಜನರು ಬಹಳ ಬುದ್ಧಿವಂತರು ಹಾಗೂ ವಿಚಾರವಂತರಾಗಿದ್ದೀರಿ. ಈ ಬಾರಿಯ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಬಿ. ರಮಾನಾಥ ರೈಯವರಿಗೆ ಮತ ನೀಡಿ ಅವರನ್ನು ಆರಿಸಿ ಕಳುಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಕೆ. ಸಂಜೀವ ಬೊಳಿಯಾರು, ಚಂದ್ರ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.







